ಗೌರಿ ಹತ್ಯೆ ಆರೋಪಿಗಳೇ ಕಲಬುರ್ಗಿ, ಪಾನ್ಸರೆ, ದಾಬೋಲ್ಕರ್ ಕೊಲೆಗಾರರು!
ಬೆಂಗಳೂರು, ಆಗಸ್ಟ್ 11: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆನ್ನುಹತ್ತಿರುವ ಎಸ್ಐಟಿ ಪೊಲೀಸರಿಗೆ ಇನ್ನೂ ಮೂರು ಹೈಪ್ರೊಫೈಲ್ ಹತ್ಯೆಗಳ ಗಟ್ಟಿ ಸುಳಿವು ದೊರೆತಿದೆ.
ಗೌರಿ ಲಂಕೇಶ್ ಹಂತಕರ ಮಾಸ್ಟರ್ ಪ್ಲಾನ್ಗೆ ಎಸ್ಐಟಿಯೇ ಕಂಗಾಲು
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳೇ, ದೇಶಾದ್ಯಂತ ಭಾರಿ ಚರ್ಚೆ ಎಬ್ಬಿಸಿದ್ದ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಎಂಎಂ ಕಲಬುರಗಿ ಅವರ ಹತ್ಯೆಗೂ ಕಾರಣ ಎಂಬುದು ಎಸ್ಐಟಿ ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸ್ ಮನೆಯಲ್ಲಿ ಕೂತೇ ಗೌರಿ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು!
ಮಡಿಕೇರಿಯಲ್ಲಿ ಬಂಧಿತನಾದ ರಾಜೇಶ್ ಬಂಗೇರ ಎಂಬಾತನೇ ಎಲ್ಲಾ ವಿಚಾರವಾದಿಗಳ ಕೊಲೆ ಮಾಡಿದ ಆರೋಪಿಗಳಿಗೆ ಶಸ್ತ್ರಾಸ್ತ್ರ ಚಲಾಯಿಸುವ ತರಬೇತಿ ಕೊಟ್ಟಿದ್ದು ಎಂದು ಎಸ್ಐಟಿ ಬಳಿ ಆತನೇ ಒಪ್ಪಿಕೊಂಡಿದ್ದಾನೆ.
ಎಂಎಲ್ಸಿ ಆಪ್ತಕಾರ್ಯದರ್ಶಿ ರಾಜೇಶ್ ಬಂಗೇರಾ
ಮಡಿಕೇರಿಯಲ್ಲಿ ಜುಲೈ 24 ರಂದು ಬಂಧಿತನಾದ ರಾಜೇಶ್ ಬಂಗೇರಾ (42) ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದ. ಈತನ ಬಂಧನವಾದಾಗ ಈತನ ಬಳಿ ಅಕ್ರಮ ಶಸ್ತ್ರಾಸ್ತ್ರ ಸಹ ಇದ್ದವು ಎನ್ನಲಾಗಿದೆ.ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಎಂಎಲ್ಸಿ ವೀಣಾ ಅವರು, ರಾಜೀವ್ ಅವರ ಈ ಕೃತ್ಯದ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿದ್ದರು.
ಬಂದೂಕು ಚಲಾಯಿಸುವ ತರಬೇತಿ ನೀಡುತ್ತಿದ್ದ
ಗೌರಿ ಮೇಲೆ ಗುಂಡು ಹಾರಿಸಿದ್ದ ಪರಶುರಾಮ್ ವಾಘ್ಮೋರೆಗೆ ಬಂದೂಕು ಚಲಾಯಿಸುವುದನ್ನು ರಾಜೇಶ್ ಬಂಗೇರಾ ಕಲಿಸಿದ್ದ. ಎಂ.ಎಂ.ಕಲಬುರಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್ ಅವರ ಕೊಲೆ ಮಾಡಿದ ಹಂತಕರಿಗೂ ಬಂದೂಕು ಚಲಾಯಿಸುವುದನ್ನು ಕಲಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಅಮೋಲ್ ಕಾಳೆಗೂ ರಾಜೇಶ್ಗೂ ಹಳೆಯ ನಂಟು
ಗೌರಿ ಹತ್ಯೆಯ ಪ್ರಮುಖ ಆರೋಪಿ, ಹತ್ಯೆ ಹಿಂದಿನ ಸಂಚಿನ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೂ ರಾಜೇಶ್ ಬಂಗೇರಾಗೂ ಹಳೆಯ ಪರಿಚಯ ಇದ್ದು, ಅಮೋಲ್ ಕಾಳೆ ಹಾಗೂ ನಿಹಾಲ್ (ತಲೆಮರೆಸಿಕೊಂಡಿದ್ದಾನೆ) ಯೋಜಿಸಿದ ಎಲ್ಲ ಧರ್ಮ ಉದ್ದೇಶಿತ ಕೊಲೆಗಳಿಗೆ ರಾಜೇಶ್ ಬಂಗೇರನೇ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ.
ಮೋಹನ್ ನಾಯಕ್ ನೀಡಿದ್ದ ಸುಳಿವು
ಹತ್ಯೆಗೆ ಗುಂಡುಗಳನ್ನು ಸರಬರಾಜು ಮಾಡಿದ್ದ ಮಡಿಕೇರಿ ಮೂಲದ ನಾಟಿ ವೈದ್ಯ ಮೋಹನ್ ನಾಯಕ್ ಎಂಬಾತ ನೀಡಿದ ಸುಳಿವಿನ ಆಧಾರದ ಮೇಲೆ ಮಡಿಕೇರಿಯ ಪಾಲೂರು ಗ್ರಾಮ ರಾಜೇಶ ಬಂಗೇರಾನನ್ನು ಬಂಧಿಸಲಾಗಿತ್ತು. ಗೌರಿ ಹತ್ಯೆ ತನಿಖೆ ಇನ್ನೇನು ಕೊನೆ ತಲುಪಿದೆ ಎಂದಾಗ, ಈ ಮುಂಚೆ ನಡೆದಿದ್ದ ಹಲವು ಕೊಲೆಗಳ ಪ್ರಕರಣ ಬಯಲಾಗಿದ್ದು, ವಿಚಾರಣೆ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ.
ಬಂದೂಕಿಗಾಗಿ ಹುಡುಕಾಟ
ಗೌರಿ ಹತ್ಯೆ ತನಿಖೆಯನ್ನು ಚುರುಕಾಗಿ ಮಾಡುತ್ತಿರುವ ಎಸ್ಐಟಿಗೆ ಹತ್ಯೆಗೆ ಬಳಸಿದ್ದ ಬಂದೂಕು ದೊರೆತರೆ ಅತ್ಯಂತ ಪ್ರಮುಖ ಸಾಕ್ಷಿ ದೊರೆದಂತಾಗುತ್ತದೆ. ಅಲ್ಲದೆ ತಲೆ ಮರೆಸಿಕೊಂಡಿರುವ ಹತ್ಯೆಗಳ ಮಾಸ್ಟರ್ ಮೈಂಡ್ ನಿಹಾಲ್ ಅಲಿಯಾಸ್ ದಾದಾ ಸಹ ಪೊಲೀಸರ ಬಲೆಗೆ ಬೀಳಬೇಕಿದೆ.