ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು?
ಉಡುಪಿ, ಫೆಬ್ರವರಿ 24: ಪಾತಕ ಪ್ರಪಂಚಕ್ಕೂ ಕರ್ನಾಟಕ ಕರಾವಳಿಗೂ ಅದೇನೋ ನಂಟು.ಅನೇಕ ಭೂಗತ ಪಾತಕಿಗಳಂತೆ ರವಿ ಪೂಜಾರಿ ಕೂಡ ಉಡುಪಿಯವ. ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿ ರಾಜ್ಯಕ್ಕೆ ಕರೆತಂದಿರುವ ಭೂಗತ ಪಾತಕಿ ರವಿ ಪೂಜಾರಿ ಅಲಿಯಾಸ್ ರವಿಪ್ರಕಾಶ್ ಪೂಜಾರಿ(48) ಮೂಲತಃ ಉಡುಪಿ ಜಿಲ್ಲೆಯ ಮಲ್ಪೆಯ ನೆರ್ಗಿಯಲ್ಲಿರುವ ಮನೆಯವನು . ಈಗ ಆ ಮನೆಯನ್ನು ಮಾರಾಟ ಮಾಡಲಾಗಿದೆ. ರವಿ ಪೂಜಾರಿ ತಂದೆ ಸೂರ್ಯ ಪೂಜಾರಿ. ಐದು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಸುಶೀಲಾ ಪೂಜಾರಿ ದೆಹಲಿಯಲ್ಲಿ ಮಗಳೊಂದಿಗೆ ವಾಸವಾಗಿದ್ದಾರೆ.
ಸೂರ್ಯ ದಂಪತಿಗೆ ರವಿ ಪೂಜಾರಿ ಸಹಿತ ಐವರು ಮಕ್ಕಳು. ಈ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರು ಹೆಣ್ಣುಮಕ್ಕಳು ದೆಹಲಿಯಲ್ಲಿದ್ದಾರೆ. ರವಿ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ವಿಚಾರಣೆಗೆ ಒಳಪಡಬೇಕಾಗಿ ಬಂದಿದ್ದರಿಂದ 12 ವರ್ಷಗಳ ಹಿಂದೆ ತಾಯಿ ಸುಶೀಲಾ ಪೂಜಾರಿ ಮಲ್ಪೆ ಮನೆ ಮಾರಾಟ ಮಾಡಿ ದೆಹಲಿಗೆ ತೆರಳಿದ್ದರು.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ನಿಂದ ಭಾರತಕ್ಕೆ
ರವಿ ಪೂಜಾರಿ ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಮೊಕಟುಗೊಳಿಸಿ ಮುಂಬೈಗೆ ತೆರಳಿ ಅಲ್ಲಿ ಅಪರಾಧ ಚಟುವಟಿಕೆ ಆರಂಭಿಸಿದ್ದ. ಛೋಟಾ ರಾಜನ್ ಗ್ಯಾಂಗ್ ಸೇರಿದ ರವಿ ಪೂಜಾರಿ ಕೆಲವೇ ಸಮಯದಲ್ಲಿ ರಾಜನ್ ಪ್ರೀತಿ ಪಾತ್ರನಾಗಿದ್ದ.
ಬಾಲಿವುಡ್ ನಟರಿಗೂ ಕೊಲೆ ಬೆದರಿಕೆ ಒಡ್ಡಿದ್ದ ರವಿ ಪೂಜಾರಿ
1990ರಲ್ಲಿ ದುಬೈಗೆ ಸ್ಥಳಾಂತರಗೊಂಡು ಅಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆಯೊಡ್ಡಿ ಹಫ್ತಾ ವಸೂಲಿಗೆ ತೊಡಗಿದ್ದ. ಬಳಿಕ ದಾವೂದ್ ಇಬ್ರಾಹಿಂ ಜತೆ ಸೇರಿ 2000 ರಲ್ಲಿ ಬ್ಯಾಂಕಾಂಕ್ ನಲ್ಲಿ ಬನ್ನಂಜೆ ರಾಜಾನ ಕೊಲೆಗೆ ಯತ್ನಿಸಿದ್ದ. 2009 ರಿಂದ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಕ್ಷಯ ಕುಮಾರ್, ರಾಕೇಶ್ ರೋಶನ್, ಕರಣ್ ಜೋಹರ್, ಶಾರುಕ್ ಖಾನ್ ಮೊದಲಾದವರಿಗೆ ಜೀವ ಬೆದರಿಕೆ ಒಡ್ಡಿದ ಆರೋಪಗಳಿವೆ.
ಜಿಲ್ಲೆಯಲ್ಲಿ ರವಿ ಪೂಜಾರಿ ಮೇಲೆ ಹಫ್ತಾ ವಸೂಲಿ, ಬೆದರಿಕೆ ಸಂಬಂಧಿಸಿ 10 ಕೇಸುಗಳು ದಾಖಲಾಗಿವೆ. ಉದ್ಯಮಿಯೊಬ್ಬರಿಗೆ ಹಫ್ತಾ ವಸೂಲಿ ಸಂಬಂಧಿಸಿ 2006ರಲ್ಲಿ ಮೊದಲ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾರ್ಕಳ, ಉಡುಪಿ, ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2 ವರ್ಷದ ಹಿಂದೆಯೇ ಸೆನೆಗಲ್ ನಲ್ಲಿ ಬಂಧಿಸಲಾಗಿತ್ತು
ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಸೆನೆಗಲ್ ನಲ್ಲಿ ಇಂಟರ್ ಪೋಲ್ ಪೊಲೀಸರು ಬಂಧಿಸಿರುವ ವಿಚಾರ ಮಾಧ್ಯಮದ ಮೂಲಕ ತಿಳಿದು ಬಂದಿತ್ತು, ಆತನ ವಿರುದ್ಧ ಮಂಗಳೂರು ನಗರದಲ್ಲೇ 30ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ರವಿ ಪೂಜಾರಿ ಪತ್ತೆಗೆ ಮಂಗಳೂರು, ಉಡುಪಿ ಪೊಲೀಸರು ಹಲವು ವರ್ಷಗಳಿಂದ ಪ್ರಯತ್ನ ಮುಂದುವರೆಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?
ದೇಶಾದ್ಯಂತ ಓಡಾಡಿಕೊಂಡಿದ್ದ ರವಿ ಪೂಜಾರಿ, ತನ್ನ ಸಹಚರರೊಂದಿಗೆ ಖ್ಯಾತ ಉದ್ಯಮಿಗಳು, ಚಿತ್ರನಟರಿಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಇತ್ತೀಚೆಗಷ್ಟೇ ಮಾಜಿ ಶಾಸಕ ಅನಿಲ್ ಲಾಡ್ ಸೇರಿದಂತೆ ಹಲವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದ ರಾಜ್ಯದ ಪೊಲೀಸರು, ಆತನಿಗಾಗಿ ಹುಡುಕಾಟ ಚುರುಕುಗೊಳಿಸಿದ್ದರು.
ಮುಂಬೈ ಹತ್ಯೆ ಪ್ರಕರಣ ನಂತರ ಬದಲಾದ ರವಿ
ರವಿ ಪೂಜಾರಿ ತಂದೆ ಸೂರ್ಯ ಡಿ ಪೂಜಾರಿ ಮುಂಬೈಯಲ್ಲಿ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಸೂರ್ಯ ಪೂಜಾರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ರವಿ ಪೂಜಾರಿ ಬಾಲ್ಯವನ್ನು ಮಲ್ಪೆಯಲ್ಲೇ ಕಳೆದಿದ್ದ. ಎಸ್ಸೆಸ್ಸೆಲ್ಸಿ ಆಂಗ್ಲ ಮಾಧ್ಯಮದಲ್ಲಿ ತೇರ್ಗಡೆಯಾಗಿದ್ದನು.
ಬಾಲ್ಯದಲ್ಲಿ ಆತ ಒಳ್ಳೆಯ ನಡತೆ ಹೊಂದಿದ್ದನು. ಮುಂಬೈಯಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಸೇರಿದ ಬಳಿಕ ಆತನ ಜೀವನಮಾರ್ಗ ಬದಲಾಯಿತು. ನಂತರ ಆತ ಮಲ್ಪೆ ನಂಟನ್ನು ತೊರೆದಿದ್ದ. ಕುಟುಂಬದ ಜತೆ ಉತ್ತಮ ಬಾಂಧವ್ಯ ಹೊಂದಿದ್ದ. ಬಡವರಿಗೆ ಎಂದಿಗೂ ಆತ ತೊಂದರೆ ಕೊಟ್ಟಿರಲಿಲ್ಲ.
ಹಲವರಿಗೆ ಜೀವ ಬೆದರಿಕೆ ಒಡ್ಡಿ ಹಫ್ತಾ ವಸೂಲಿ
ಭೂಗತ ಪಾತಕಿ ರವಿ ಪೂಜಾರಿ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್ ಗಳಲ್ಲಿ 2001 ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ವೈದ್ಯರು, ರಿಯಲ್ ಎಸ್ಟೇಟ್, ಆಭರಣ ಮಳಿಗೆ ಮಾಲೀಕರು, ಬಾಲಿವುಡ್, ಸ್ಯಾಂಡಲ್ ವುಡ್ ಚಿತ್ರ ನಟರು, ರಾಜಕೀಯ ಮುಖಂಡರು, ಗಣಿ ಉದ್ಯಮಿಗಳು ಹಾಗು ಖ್ಯಾತ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದನು.
ಅವರ ಮೊಬೈಲ್ ನಂಬರ್ ಸಂಗ್ರಹಿಸಿ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದ. ಜೀವ ಭಯದಿಂದ ರವಿ ಪೂಜಾರಿ ಹೇಳಿದ ಜಾಗಕ್ಕೆ ಕೇಳಿದಷ್ಟು ಹಣವನ್ನು ತಲುಪಿಸುತ್ತಿದ್ದರು. ಬೆಂಗಳೂರು, ಮಂಗಳೂರು, ಉಡುಪಿ ಮುಗ್ಧ ಜನರನ್ನು ಕೊಲೆ ಮಾಡಿರುವುದಕ್ಕೆ ಹಲವು ಪ್ರಕರಣಗಳು ದಾಖಲಾಗಿದ್ದವು.ಅನೇಕ ಸಣ್ಣಪುಟ್ಟ ರೌಡಿಗಳು ರವಿ ಪೂಜಾರಿ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದರು