ವೃಂದಾವನದ ಮುಂದೆ ಮಂತ್ರಾಲಯ ಶ್ರೀಗಳು ಕಣ್ಣೀರಿಟ್ಟಿದ್ದು ಯಾಕೆ?
ಉತ್ತರಾದಿ ಮತ್ತು ಮಂತ್ರಾಲಯ ಮಠದ ನಡುವಿನ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಗಂಗಾವತಿ ಸ್ಥಳೀಯ ನ್ಯಾಯಾಲಯ ಉತ್ತರಾದಿ ಮಠದ ಪರವಾಗಿ ತೀರ್ಪು ನೀಡಿತ್ತು.
ಎರಡೂ ಮಠಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಇಲ್ಲಿನ ಪೂಜೆಯ ವಿಚಾರದಲ್ಲಿ ಮಠದ ಭಕ್ತಾದಿಗಳ ನಡುವೆ ಕಲಹ ಹೊಡೆದಾಟದ ಮಟ್ಟಕ್ಕೆ ಅದೆಷ್ಟೋ ಬಾರಿ ಹೋಗಿತ್ತು. ನ್ಯಾಯಾಲಯದ ಆದೇಶದ ನಡುವೆಯೂ, ಮಂತ್ರಾಲಯ ಮಠದವರು ಇಲ್ಲಿ ಪೂಜೆ ಸಲ್ಲಿಸಿ ಹೋಗಿದ್ದ ಉದಾಹರಣೆಗಳೂ ಇವೆ. (ನವವೃಂದಾವನ ಒಂದು ಮಠದ ಆಸ್ತಿಯಾಗಲು ಸಾಧ್ಯವೇ)
ಸೌರಮಾನ ಯಗಾದಿಯ ದಿನವಾದ ಏಪ್ರಿಲ್ 14ರಿಂದ ಮೂರು ದಿನಗಳ ಕಾಲ ನಡೆಯುವ ಕವೀಂದ್ರ ತೀರ್ಥರ ಆರಾಧನಾ ಮಹೋತ್ಸವಕ್ಕೆ ನವವೃಂದಾವನ ಗಡ್ಡೆಯಲ್ಲಿ ಅವಕಾಶ ನೀಡಬೇಕೆಂದು ಮಂತ್ರಾಲಯ ಮಠ ಕೋರ್ಟ್ ಮೊರೆ ಹೋಗಿತ್ತು. (ಯತಿಗಳ ವೃಂದಾವನದಲ್ಲಿ ಉತ್ತರಾದಿ, ರಾಯರ ಮಠದ ವೈಷಮ್ಯ)
ಆದರೆ, ಮಂತ್ರಾಲಯದ ಮಠದ ಮನವಿಯನ್ನು ಗಂಗಾವತಿ ಸ್ಥಳೀಯ ನ್ಯಾಯಾಲಯ ಪುರಸ್ಕರಿಸಲಿಲ್ಲ. ಹಾಗಾಗಿ ಮಂತ್ರಾಲಯ ಮಠದ ಪೂರ್ವಿಕ ಯತಿಗಳಾದ ಕವೀಂದ್ರ ತೀರ್ಥರ ಆರಾಧನೆಯನ್ನು ಮಂತ್ರಾಲಯ ಮಠದಲ್ಲೇ ನಡೆಸಲು ನಿರ್ಧರಿಸಲಾಗಿದೆ.
ಸ್ಥಳೀಯ ನ್ಯಾಯಾಲಯದ ತೀರ್ಪು ಬುಧವಾರ (ಏ 13) ಮಂತ್ರಾಲಯ ಮಠದ ವಿರುದ್ದ ಬಂದ ಸುದ್ದಿ ತಿಳಿದ ಸುಬುಧೇಂದ್ರ ತೀರ್ಥರು, ರಾಘವೇಂದ್ರಸ್ವಾಮಿಗಳ ಮೂಲ ವೃಂದಾವನದ ಮುಂದೆ ಕಣ್ಣೀರಿಟ್ಟರು ಎಂದು ವರದಿಯಾಗಿದೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...
ಹಿಂದಿನಿಂದಲೂ ತಕರಾರು
ಸುಮಾರು 23 ಎಕರೆ ಜಮೀನಲ್ಲಿರುವ ನವವೃಂದಾವನ ಗಡ್ಡೆ ಮತ್ತು ಸ್ಥಳಕ್ಕೆ ಸಂಬಂಧ ಪಟ್ಟ ಕಂದಾಯ ದಾಖಲೆಗಳು ಉತ್ತರಾದಿ ಮಠದ ಹೆಸರಿನಲ್ಲಿದೆ. ಹಾಗಾಗಿ ಈ ಜಾಗ ಉತ್ತರಾದಿ ಮಠಕ್ಕೆ ಸೇರಿದ್ದು, ರಾಯರ ಮಠದವರು ಇದಕ್ಕೆ ಅಡ್ಡಿ ಮಾಡಬಾರದು ಎನ್ನುವ ತೀರ್ಪನ್ನು ಹೈಕೋರ್ಟ್ ಹಿಂದೆಯೇ ನೀಡಿತ್ತು. ಆದರೆ ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ರಾಯರ ಮಠದ ವಾದವಾಗಿತ್ತು. ಸರ್ವೋಚ್ಚ ನ್ಯಾಯಾಲಯ 30.03.2016ರಂದು ಈ ವಿವಾದಕ್ಕೆ ಮಂಗಳ ಹಾಡಿ ಉತ್ತರಾದಿ ಮಠದ ಪರವಾಗಿ ತೀರ್ಪು ನೀಡಿತ್ತು.
ಪೇಜಾವರ ಶ್ರೀಗಳು
ಎರಡು ಮಠದ ನಡುವೆ ಘರ್ಷಣೆ ತಾರಕಕ್ಕೇರಿದ್ದಾಗ, ಯತಿಗಳಾಗಿ ಪೀಠಾಧಿಪತಿ ಸ್ಥಾನದಲ್ಲಿರುವವರು ಘರ್ಷಣೆಗಿಳಿಯಬಾರದು. ಈ ವಿವಾದವನ್ನು ಬಗೆಹರಿಸಲು ಹಿಂದೆ ಪ್ರಯತ್ನ ನಡೆಸಲಾಗಿತ್ತು. ಈಗಲೂ ಮಧ್ಯಸ್ಥಿಕೆ ಮೂಲಕ ವಿವಾದ ಪರಿಹರಿಸಲು ಸಿದ್ಧವಿದ್ದೇವೆ. ತಮ್ಮ ಪರ್ಯಾಯದ ವೇಳೆಯಲ್ಲಿ ಉಡುಪಿಗೆ ಆಗಮಿಸುವ ಮಂತ್ರಾಲಯದ ಪೀಠಾಧ್ಯಕ್ಷ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರ ಜತೆ ಮಾತನಾಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮತ್ತೂಮ್ಮೆ ಯತ್ನಿಸುವುದಾಗಿ ಪೇಜಾವರ ಶ್ರೀಗಳು ನಂಜನಗೂಡಿನಲ್ಲಿ ಹೇಳಿದ್ದರು.
ಮಂತ್ರಾಲಯ ಶ್ರೀಗಳ ಉಪವಾಸ
ಪೂಜಾ ಕಾರ್ಯಕ್ರಮಕ್ಕೆ ಗಂಗಾವತಿ ಸ್ಥಳೀಯ ನ್ಯಾಯಾಲಯ ಅನುಮತಿ ನೀಡದ ಹಿನ್ನಲೆಯಲ್ಲಿ, ಮಂತ್ರಾಲಯದಲ್ಲಿಯೇ ಶ್ರೀ ಮೂಲರಾಮದೇವರ ಮಹಾಭಿಷೇಕ ನೆರವೇರಿಸಲು ಶ್ರೀಗಳು ನಿರ್ಧರಿಸಿದ್ದಾರೆ ಮತ್ತು ಕವೀಂದ್ರ ತೀರ್ಥರ ಆರಾಧನಾ ಮಹೋತ್ಸವವನ್ನು ಮಂತ್ರಾಲಯದಲ್ಲೇ ನಡೆಸಲು ಮಂತ್ರಾಲಯ ಮಠ ನಿರ್ಧರಿಸಿದೆ.
ಗಂಗಾವತಿ ನ್ಯಾಯಾಲಯ
ಗಂಗಾವತಿ ನ್ಯಾಯಾಲಯ ತನ್ನ ಆದೇಶವನ್ನು ಮತ್ತೆ ವಿಮರ್ಶಿಸಿಕೊಳ್ಳಬೇಕು ಮತ್ತು ನವವೃಂದಾವನ ಗಡ್ಡಿಯಲ್ಲಿ ಮಂತ್ರಾಲಯ ಮಠಕ್ಕೆ ಪೂಜೆಗೆ ಅವಕಾಶ ನೀಡಬೇಕೆಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಗುರುವಾರದಿಂದ ಮೂರು ದಿನಗಳ ಕಾಲ ಉಪವಾಸ ನಡೆಸಲಿದ್ದಾರೆಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ಚಿತ್ರದಲ್ಲಿ ನವವೃಂದಾವನ ಗಡ್ಡೆ)
ಕಣ್ಣೀರಿಟ್ಟ ಶ್ರೀಗಳು
ಗಂಗಾವತಿ ಸ್ಥಳೀಯ ನ್ಯಾಯಾಲಯ ಮಂತ್ರಾಲಯ ಮಠದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ ವಿಷಯ ತಿಳಿಯುತ್ತಿದ್ದಂತೆಯೇ, ಸುಬುಧೇಂದ್ರ ತೀರ್ಥರು ಶ್ರೀಗಳು ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನದ ಮುಂದೆ ಮೂರು ತಾಸುಗಳ ಕಾಲ ನಿಂತು ಕಣ್ಣೀರಿಟ್ಟರು ಎನ್ನಲಾಗಿದೆ.