ಕೋವಿಡ್ ಕಟ್ಟಿಹಾಕಲು ಶುರುವಾಯ್ತು ಪ್ಲೇಗ್ ಕಾಲದ ಮಾದರಿ ಜೀವನ!
ಬೆಂಗಳೂರು, ಜುಲೈ 17: ಮನುಷ್ಯ ಸಾಂಕ್ರಾಮಿಕ ರೋಗಗಳ ಪಿಡುಗಿಗೆ ತುತ್ತಾಗುತ್ತಿರುವುದು ಇದೇ ಮೊದಲ ಸಲವಲ್ಲ. ಇದು ಕೊರೊನಾ ವೈರಸ್ ಮೂಲಕ ಕೊನೆಯೂ ಆಗಲಾರದು. ಹಿಂದೆಯೂ ಇದೇ ರೀತಿಯ ಸಾಂಕ್ರಾಮಿಕ ಮಹಾಮಾರಿಗಳು ಜಗತ್ತನ್ನು ಕಾಡಿದ್ದಿದೆ. ಆಗಲೂ ನಮ್ಮ ದೇಶದ ಜನತೆ ಆ ಸಾಂಕ್ರಾಮಿಕ ರೋಗಗಳಿಂದ ಬಚಾವಾಗಲು ತಮ್ಮದೇ ಮಾರ್ಗಗಳನ್ನು ಕಂಡುಕೊಂಡಿದ್ದರು. ಇದೀಗ ಕೋವಿಡ್-19ಗೆ ಕಡಿವಾಣ ಹಾಕಲು ಸರ್ಕಾರವೇ ಮುಂದಾಗಿ ಲಾಕ್ಡೌನ್ ಜಾರಿಗೆ ತಂದಿತ್ತು.
Recommended Video
ಗದಗದಲ್ಲಿ ನಿಷೇಧಾಜ್ಞೆ ಜಾರಿ; ಕೆಲವೊಂದು ವಿನಾಯಿತಿ
ಸರ್ಕಾರ ಜಾರಿಗೆ ತಂದಾಗಲೇ ಗ್ರಾಮೀಣ ಭಾಗದ ವಯೋವೃದ್ಧರು ಇದೆಲ್ಲ ಜನರನ್ನು ಮನೆಯಲ್ಲಿ ಕೂಡಿ ಹಾಕುವುದರಿಂದ ಆಗುವ ಕೆಲಸವಲ್ಲ. ನಮ್ಮ ಹಿರಿಯರು ಮಾಡುತ್ತಿದ್ದ ವಿಧಾನವನ್ನು ಅನುಸರಿಸಬೇಕಷ್ಟೆ ಎಂದಿದ್ದರು. ಇದೀಗ ಮುಂದುವರೆದ ದೇಶಗಳೇ ಕೊರೊನಾವೈರಸ್ಗೆ ಕಡಿವಾಣ ಹಾಕುವುದರಲ್ಲಿ ವಿಫಲವಾಗುತ್ತಿವೆ. ನಿಧಾನವಾಗಿ ಗ್ರಾಮೀಣ ಭಾಗದ ಜನರು ಹಳೆಯ ಪದ್ದತಿಯ ಮೊರೆ ಹೋಗುತ್ತಿದ್ದಾರೆ. ಏನದು ಹಳೆಯ ಜೀವನ ವಿಧಾನ?
ಕಾಡಿತ್ತು ಪ್ಲೇಗ್ ಮಹಾಮಾರಿ
ಕೊರೊನಾ ವೈರಸ್ ಅಲ್ಲದಿದ್ದರೂ ಅದೇ ಮಾದರಿಯ ಬ್ಯಾಕ್ಟೀರಿಯಾ ಹಾಗೂ ವೈರಸ್ಗಳಿಂದ ಬರುವ ಸಾಂಕ್ರಾಮಿಕ ರೋಗಗಳು ನಮ್ಮ ಪೂರ್ವಜರನ್ನು ಕಾಡಿದ್ದವು. ಅಪಾರ ಪ್ರಮಾಣದ ಪ್ರಾಣ ಹಾನಿ ಕೂಡ ಆಗಿತ್ತು. ಕೊರೊನಾ ವೈರಸ್ಗಿಂತ ಭೀಕರವಾಗಿ ಆಗಿನ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿದ್ದವಂತೆ.
ರೋಗ ಕಂಡುಹಿಡಿಯಲು ತಮ್ಮದೇ ಆದಂತಹ ವಿಧಾನಗಳನ್ನು ಆಗಿನವರು ಕಂಡುಕೊಂಡಿದ್ದರು. ಉದಾಹರಣೆಗೆ ಪ್ಲೇಗ್ ರೋಗ ಬರುತ್ತದೆ ಎಂಬುದನ್ನು ಅವರು ಪ್ರಾಣಿಗಳಿಂದ ಕಂಡುಕೊಳ್ಳುತ್ತಿದ್ದರು. ಮನೆಯಲ್ಲಿ ಅಥವಾ ಊರಿನಲ್ಲಿ ಇಲಿಗಳು ಸತ್ತರೆ ತಕ್ಷಣ ಹಿರಿಯರು ಅಲರ್ಟ್ ಆಗುತ್ತಿದ್ದರು.
ಪುರಾತನ ವಿಧಾನ
ಇಡೀ ಊರಿನಲ್ಲಿ ಡಂಗುರ ಸಾರಿಸಿ ಇಲಿಗಳ ಸಾವಿನ ಬಗ್ಗೆ ನಿಗಾ ಇಡುವಂತೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಇಲಿಗಳ ಸಾವು ಕಂಡು ಬಂದರೆ ಅಗತ್ಯ ವಸ್ತುಗಳೊಂದಿಗೆ ವಾಸವಿದ್ದ ಮನೆಯನ್ನು, ಗ್ರಾಮವನ್ನು ತೊರೆಯುತ್ತಿದ್ದರು. ಇದೀಗ ಗ್ರಾಮೀಣ ಭಾಗದಲ್ಲಿ ಅದು ಶುರುವಾಗಿದೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಆರಂಭದಲ್ಲಿ ಇಡೀ ದೇಶಾದ್ಯಂತ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಮಾಡಿತ್ತು. ಆಗಿನ್ನೂ ಸಮುದಾಯಕ್ಕೆ ಸೋಂಕು ಹರಡಿರಲಿಲ್ಲ. ಈಗ ಸಮುದಾಯಕ್ಕೆ ಸೋಂಕು ಹರಡಿದೆ. ಹಳ್ಳಿ ಹಳ್ಳಿಗಳಲ್ಲಿಯೂ ಸೋಂಕಿತರ ಸಂಖ್ಯೆ ಏರುತ್ತಿದೆ. ಸರ್ಕಾರದ ಸಚಿವರೇ ಕೈಚೆಲ್ಲಿರುವ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಜನರು ಮತ್ತೆ ಪುರಾತನ ವಿಧಾನದ ಮೊರೆ ಹೋಗುತ್ತಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಆಪ್ತನ ಮೇಲೆ ದೂರು ದಾಖಲು, ಬಿಜೆಪಿಯಿಂದ ಅಮಾನತು!
ಹಳೆಯ ಬ್ರೇಕ್ ದಿ ಚೈನ್
ಈಗ ಸೋಂಕಿನ ಭಯದಿಂದ ಜನರು ಬೆಂಗಳೂರು ತೊರೆದಂತೆ, ಆಗ ಊರು ತೊರೆಯುತ್ತಿದ್ದರಂತೆ. ಅದು ಪ್ಲೇಗ್ ಇರಬಹುದು, ಗುದ್ದವ್ವನ ಬ್ಯಾನಿ ಆಗಿರಬಹುದು ಅಥವಾ ಕಳೆದ ಶತಮಾನದಲ್ಲಿ ಜಗತ್ತನ್ನು ತೀವ್ರವಾಗಿ ಕಾಡಿದ್ದ ಸ್ಪ್ಯಾನಿಷ್ ಫ್ಲೂ ಆಗಿರಬಹುದು. ಆಗೆಲ್ಲ ಜನರು ತಮ್ಮ ಊರನ್ನು ಬಿಡುತ್ತಿದ್ದರು. ಊರ ಹೊರಗೆ ಅಥವಾ ತಮ್ಮ ಹೊಲಗಳಲ್ಲಿ ಆರು ತಿಂಗಳು ಅಥವಾ ವರ್ಷದವರೆಗೆ ತಾತ್ಕಾಲಿಕ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದರು.
ಇದೀಗ ಗದಗ್ ತಾಲೂಕಿನ ಶೀತಾಲಹರಿ ಗ್ರಾಮದ ಜನರು ಕೊರೊನಾ ವೈರಸ್ಗೆ ಹೆದರಿ ಗ್ರಾಮ ತೊರೆಯುತ್ತಿದ್ದಾರೆ. ಶೀತಾಲಹರಿ ಗ್ರಾಮದ ಜನರು ಊರು ತೊರೆದು ತಮ್ಮ ಹೊಲಗಳಲ್ಲಿ ವಾಸ ಆರಂಭಿಸಿದ್ದಾರೆ. ಇದು ಹಳೆಯ ಕಾಲದ ಬ್ರೇಕ್ ದಿ ಚೈನ್ ವಿಧಾನ. ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡ ಜನರೀಗ ಹೊಲಗಳಲ್ಲಿ ವಾಸ ಆರಂಭಿಸಿದ್ದಾರೆ. ಗ್ರಾಮದಲ್ಲಿ ಹೆಚ್ಚಿದ ಸೋಂಕಿತರ ಸಂಖ್ಯೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಶೀತಾಲಹರಿ ಗ್ರಾಮದ ಹತ್ತಾರು ಕುಟುಂಬಗಳು ತಮ್ಮ ತಮ್ಮ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿವೆ. ಆ ಮೂಲಕ ಕೊರೊನಾ ವೈರಸ್ ಆತಂಕದಿಂದ ದೂರವಾಗಿ ನೆಮ್ಮದಿ ಜೀವನ ಶುರು ಮಾಡಿದ್ದಾರೆ. ಜೊತೆಗೆ ಈಗಿನ ಬ್ರೇಕ್ ದಿ ಚೈನ್ ವಿಧಾನಕ್ಕೆ ಹಳೆಯ ಮಾದರಿ ತೋರಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ದಿನಕ್ಕೊಂದು ಮಾರ್ಗಸೂಚಿ...
ಕೋವಿಡ್ ವರ್ಡೊಮೀಟರ್ ಮಾಹಿತಿಯ ಪ್ರಕಾರ, ಈವರೆಗೆ ಜಾಗತಿಕವಾಗಿ ಸುಮಾರು 1.4 ಕೋಟಿ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈಗಾಗಲೇ 5.9 ಲಕ್ಷಕ್ಕೂ ಅಧಿಕ ಜನರು ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ದಿನಕ್ಕೊಂದು ಮಾರ್ಗಸೂಚಿ, ದಿನಕ್ಕೊಂದು ಸಲಹೆ ಕೊಡುತ್ತಿದೆ. ಹೀಗಾಗಿ ಅದ್ಯಾವುದು ಬೇಡ ಎಂದು ಜನರು ಮತ್ತೆ ಹಳೆಯ ವಿಧಾನದ ಮೊರೆ ಹೋಗುತ್ತಿದ್ದಾರೆ.
ತಮ್ಮದೇ ವಿಧಾನದಲ್ಲಿ ಕೊರೊನಾ ವೈರಸ್ ಚೈನ್ ಬ್ರೇಕ್ ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಬಹುತೇಕ ಇಡೀ ಗ್ರಾಮೀಣ ಭಾಗದಲ್ಲಿ ಜನರು ಇದೇ ವಿಧಾನದ ಮೊರೆ ಹೋಗುವ ಸಾಧ್ಯತೆಗಳಿವೆ. ಹಾಗಾದಲ್ಲಿ ಈ ಲಾಕ್ಡೌನ್, ಸೀಲ್ಡೌನ್, ಕ್ವಾರಂಟೈನ್ ಅಗತ್ಯವಿಲ್ಲ. ಜನರೇ ಕೋವಿಡ್ ಸೋಂಕಿನ ಚೈನ್ ಬ್ರೇಕ್ ಮಾಡುತ್ತಾರೆ.