ಮತ್ತೆ ಹೊತ್ತಿದ ಕಳಸಾ ಬಂಡೂರಿ ಕಿಚ್ಚು, ಇಂದು ಗದಗ, ನರಗುಂದ ಬಂದ್
ಗದಗ, ಜುಲೈ 21 : ಮತ್ತೆ ಇಂದು (ಶುಕ್ರವಾರ) ಗದಗ, ನರಗುಂದದಲ್ಲಿ ಮಹದಾಯಿ, ಕಳಸಾ ಬಂಡೂರಿ ಕಿಚ್ಚು ಹತ್ತಿದೆ.
ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಳೆದುಕೊಂಡ ಮಹಾದಾಯಿ ಹೋರಾಟಗಾರರು
ರೈತರು ಮಹದಾಯಿ ಹೋರಾಟ ಪ್ರಾರಂಭಿಸಿ 2 ವರ್ಷ ಕಳೆದರೂ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದಾಗಲೀ ಸಮಸ್ಯೆ ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಹಲವು ಸಂಘಟನೆಗಳು ಇಂದು ಗದಗ, ನರಗುಂದ ಬಂದ್ ಗೆ ಕರೆ ನೀಡಿವೆ.
ಕಳಸಾ ಹೋರಾಟ ವೇದಿಕೆ ಅಧ್ಯಕ್ಷ ವಿರೇಶ್ ಸೊಬರದಮಠ ಉಪವಾಸ ಸತ್ಯಾಗ್ರಹ ಆರಂಭಿಸಿ 5 ದಿನಗಳಾಯಿತು. ಹೀಗಾಗಿ ರೈತರು ರೈತ ಹುತಾತ್ಮ ದಿನದಂದೇ ಸರ್ಕಾರಗಳ ವಿರುದ್ಧ ಸೆಡ್ಡು ಹೊಡೆಯಲು ಸಜ್ಜಾಗಿದ್ದಾರೆ.
ಇಂದು ಗದಗ ಜಿಲ್ಲೆ ನರಗುಂದದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಂಭವವಿದೆ. ರೈತ ಹುತ್ಮಾತ್ಮ ದಿನಾಚರಣೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು, ರೈತರು, ಜನಪ್ರತಿನಿಧಿಗಳು, ವಿವಿಧ ಕನ್ನಡ - ದಲಿತ ಪರ ಸಂಘಟನೆಗಳ ಮುಖಂಡರು ಅಪಾರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
ಹೀಗಾಗಿ ನರಗುಂದ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆಯಿಂದಲೇ ಪೂರ್ಣ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ, ಗದಗ ನಗರ ಹಾಗೂ ನರಗುಂದ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.