ಆಪರೇಷನ್ ಕಮಲ : ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಜನವರಿ 15 : ಕರ್ನಾಟಕದ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಸರ್ಕಾರ ಉಳಿಸಲು ಹೈಕಮಾಂಡ್ ನಾಯಕರು ವೇಣುಗೋಪಾಲ್ ಅವರಿಗೆ ಸೂಚನೆ ನೀಡಿದ್ದಾರೆ. ಆ ಸಂದೇಶ ಹೊತ್ತು ಅವರು ಬೆಂಗಳೂರು ತಲುಪಿದ್ದಾರೆ.
ರೆಸಾರ್ಟ್ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್ನ 5 ಶಾಸಕರು ನಾಪತ್ತೆ!
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಹಲವು ಸಚಿವರು ಸಹ ಭೇಟಿ ನೀಡುವ ಸಾಧ್ಯತೆ ಇದೆ.
ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ
5ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸೇರಿದಂತೆ ಹಲವು ಶಾಸಕರನ್ನು ಸಂಪರ್ಕ ಮಾಡಲು ಕಾಂಗ್ರೆಸ್ ಪಕ್ಷದ ನಾಯಕರು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದಾರೆ...
ಕಾಂಗ್ರೆಸ್ ನಾಯಕರ ದಿಢೀರ್ ಉಪಹಾರ ಕೂಟ: ಆಪರೇಷನ್ ಕಮಲದ ಚರ್ಚೆ
8 ಶಾಸಕರು ಸಂಪರ್ಕದಲ್ಲಿ
ಕಾಂಗ್ರೆಸ್ ಪಕ್ಷದ 8 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬುದು ಸುದ್ದಿ. ಕನಿಷ್ಠ 15 ಶಾಸಕರು ರಾಜೀನಾಮೆ ನೀಡಿದರೆ ಸುಭದ್ರ ಸರ್ಕಾರ ರಚನೆ ಮಾಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಆದ್ದರಿಂದ, ಶಾಸಕರ ಸಂಖ್ಯೆ ಹೆಚ್ಚಾಗುವ ತನಕ ಕಾದು ನೋಡಲು ಬಿಜೆಪಿ ಮುಂದಾಗಿದೆ.
ರೆಸಾರ್ಟ್ ಪಾಲಿಟಿಕ್ಸ್
ಕರ್ನಾಟಕ ಬಿಜೆಪಿಯ 80ಕ್ಕೂ ಹೆಚ್ಚು ಶಾಸಕರು ರಾಜ್ಯ ಬಿಜೆಪಿ ಅಧ್ಯಕ್ಷ ನೇತೃತ್ವದಲ್ಲಿ ಗುರುಗ್ರಾಮದ ಬಳಿಯ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್ನಲ್ಲಿದ್ದಾರೆ. ಶಾಸಕರ ಮೊಬೈಲ್ ಫೋನ್ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಉಳಿದ ಕೆಲವು ಶಾಸಕರು ದೆಹಲಿ ಮತ್ತು ಮುಂಬೈನಲ್ಲಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತಿದೆ? ಎಂಬ ಸ್ಪಷ್ಟ ಚಿತ್ರಣ ಇನ್ನೂ ಲಭ್ಯವಾಗಿಲ್ಲ.
ಸಿದ್ದರಾಮಯ್ಯ ಜೊತೆ ಸಭೆ
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಜೊತೆ ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ವೇಣುಗೋಪಾಲ್ ಭೇಟಿ ಮಾಡುವ ಸಾಧ್ಯತೆ ಇದೆ.
ದೇವೇಗೌಡರ ನಡೆ ಏನು?
ಆಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿಗೆ ದೇವೇಗೌಡರ ನಡೆ ಬಗ್ಗೆ ಕುತೂಹಲವಿದೆ. ದೇವೇಗೌಡರು ಸರ್ಕಾರವನ್ನು ಉಳಿಸಲು ಯಾವ ತಂತ್ರ ಮಾಡಲಿದ್ದಾರೆ? ಎಂದು ಬಿಜೆಪಿ ನಾಯಕರು ಕಾದು ನೋಡುತ್ತಿದ್ದಾರೆ. ಸೋಮವಾರ ರಾತ್ರಿ ಎಚ್.ಡಿ.ಕುಮಾರಸ್ವಾಮಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಿಜೆಪಿಯಿಂದ ಕಾದು ನೋಡುವ ತಂತ್ರ
ಕಾಂಗ್ರೆಸ್ನ ಶಾಸಕರು ತಕ್ಷಣಕ್ಕೆ ರಾಜೀನಾಮೆ ನೀಡುವುದಿಲ್ಲ. ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆದು ಸುಭದ್ರ ಸರ್ಕಾರ ರಚನೆ ಮಾಡಬೇಕು ಎಂಬುದು ಬಿಜೆಪಿಯ ತಂತ್ರ. ಆದ್ದರಿಂದ, ತಕ್ಷಣ ರಾಜೀನಾಮೆ ನೀಡುವುದು ಬೇಡ ಎಂದು ಬಿಪಿಪಿ ಕಾಂಗ್ರೆಸ್ನ ಅತೃಪ್ತ ಶಾಸಕರಿಗೆ ಸೂಚನೆ ನೀಡಿದೆ.