ಸದನದಲ್ಲಿ ಅತ್ಯಾಚಾರ ಪ್ರಕರಣದ ಚರ್ಚೆಯ ವೇಳೆ ಕಳಚಿದ ಸಿದ್ದರಾಮಯ್ಯ ಪಂಚೆ
ಬೆಂಗಳೂರು, ಸೆ 22: ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಚರ್ಚೆಯ ವೇಳೆ, ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಪಂಚೆ ಕಳಚಿದ್ದು ಕೂಡಲೇ ಅವರು ಅದನ್ನು ಸರಿಪಡಿಸಿಕೊಂಡು ಭಾಷಣ ಮುಂದುವರಿಸಿದ ಘಟನೆ ನಡೆದಿದೆ.
ಪಂಚೆ ಕಳಚಿದ್ದು ಗೊತ್ತಿಲ್ಲದೇ ಸಿದ್ದರಾಮಯ್ಯನವರು ಭಾಷಣ ಮಾಡುತ್ತಲೇ ಇದ್ದರು. ಅತ್ಯಾಚಾರದ ಘಟನೆ, ಇದನ್ನು ಪೊಲೀಸರು ನಿಭಾಯಿಸಿದ ರೀತಿಯ ಬಗ್ಗೆ ಸಿದ್ದರಾಮಯ್ಯನವರು ಭಾಷಣ ಮಾಡುತ್ತಿರಬೇಕಾದರೆ, ಸದನದಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇತ್ತು.
ಚಾಣಕ್ಯ ವಿಶ್ವವಿದ್ಯಾಲಯ ಹೆಸರಿನಲ್ಲಿ ಆರ್ಎಸ್ಎಸ್ಗೆ ಭೂಮಿ: ಸಿದ್ದರಾಮಯ್ಯ
ಆ ವೇಳೆ, ಹೊರಗಡೆಯಿಂದ ಸದನಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರ ಬಳಿ ಬಂದು ಕಿವಿಯಲ್ಲಿ ಪಂಚೆ ಕಳಚಿದೆ ಸರ್ ಎಂದು ಹೇಳಿದಾಗಲೇ ವಿರೋಧ ಪಕ್ಷದ ನಾಯಕರಿಗೆ ಗೊತ್ತಾಗಿದ್ದು. ಹೌದಾ.. ಒಂದು ನಿಮಿಷ ಎಂದು ಸಿದ್ದರಾಮಯ್ಯ ಕೂತು, ಪಂಚೆ ಸರಿಮಾಡಿಕೊಂಡು ಮತ್ತೆ ಭಾಷಣ ಮುಂದುವರಿಸಿದರು.
"ಸ್ವಲ್ಪ ಪಂಚೆ ಕಳಚಿಕೊಂಡು ಬಿಟ್ಟಿದೆ, ಕಟ್ಟಿಕೊಂಡು ಭಾಷಣ ಮುಂದುವರಿಸುತ್ತೇನೆ" ಎಂದು ಸಿದ್ದರಾಮಯ್ಯನವರು ಹೇಳಿದಾಗ, ಸದನ ನಗೆಗಡಲಲ್ಲಿ ತೇಲಿತು. ಆಗ, ಆಡಳಿತ ಮತ್ತು ವಿರೋಧ ಪಕ್ಷದವರು ಸಿದ್ದರಾಮಯ್ಯನವರ ಕಾಲೆಳೆದರು.
ಬೊಮ್ಮಾಯಿ ಮತ್ತು ಬಿಎಸ್ವೈಗೆ 'ಹೆತ್ತವರಿಗೆ ಹೆಗ್ಗಣ ಮುದ್ದು' ಎಂದ ಸಿದ್ದರಾಮಯ್ಯ
ಫ್ರಂಟ್ ಲೈನಿನಲ್ಲಿ ಯಾರೂ ಇಲ್ಲ, ಆದರೂ ಅದು ಹೇಗೆ ಪಂಚೆ ಕಳಚಿತು
"ಫ್ರಂಟ್ ಲೈನಿನಲ್ಲಿ ಯಾರೂ ಇಲ್ಲ, ಆದರೂ ಅದು ಹೇಗೆ ಪಂಚೆ ಕಳಚಿತು"ಎಂದು ಸದಸ್ಯರೊಬ್ಬರು ಸಿದ್ದರಾಮಯ್ಯನವರನ್ನು ಕಿಚಾಯಿಸಿದರು. "ಪಂಚೆ ಕಳಚಿಕೊಂಡು ಬಿಟ್ಟಿದೆ ನೋಡಪ್ಪಾ.. ಈಶ್ವರಪ್ಪ, ಯಾಕೋ ಇತ್ತೀಚೆಗೆ ಹೊಟ್ಟೆ ದಪ್ಪ ಆಗಿಬಿಟ್ಟಿದೆ. ಫ್ರಂಟ್ ಲೈನಿನಲ್ಲಿ ಕೂತಿರುವುದರಿಂದ ಸಹಾಯ ಕೇಳುವುದಿಲ್ಲ"ಎಂದು ಸಿದ್ದರಾಮಯ್ಯನವರು ಹೇಳಿದರು. ಆಗ ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಎದ್ದು ನಿಂತರು.
ಮಾಜಿ ಸ್ಪೀಕರ್, ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್
"ನಮ್ಮ ಅಧ್ಯಕ್ಷರು ಗುಟ್ಟಾಗಿ ಬಂದು, ಪಕ್ಷದ ಮಾನ ಎಂದು ಅವರ ಕಿವಿ ಬಳಿ ಬಂದು ಹೇಳಿದರೆ, ಇವರು (ಸಿದ್ದರಾಮಯ್ಯ) ಅದನ್ನು ಊರಿಗೆಲ್ಲಾ ಹೇಳುತ್ತಾರಲ್ವಾ. ಡಿ.ಕೆ.ಶಿವಕುಮಾರ್ ಅವರ ಪ್ರಯತ್ನವೆಲ್ಲಾ ವ್ಯರ್ಥವಾಯಿತು. ಅವರ ಉದ್ಯೋಗವೇ ಪಂಚೆ ಕಳಚುವುದು, ನೋಡಿ ಈಶ್ವರಪ್ಪನವರು ಕಾಯುತ್ತಾ ಕೂತಿದ್ದಾರೆ"ಎಂದು ರಮೇಶ್ ಕುಮಾರ್ ಹೇಳಿದಾಗ, "ಅವರು ಟ್ರೈ ಮಾಡುತ್ತಾ ಇದ್ದಾರೆ, ಆದರೆ ಅದು ಸಾಧ್ಯವಾಗುತ್ತಿಲ್ಲ"ಎಂದು ಸಿದ್ದರಾಮಯ್ಯನವರು ಈಶ್ವರಪ್ಪನವರ ಕಾಲೆಳೆದರು.
ಸದನದಲ್ಲಿ ಪಂಚೆ ಪುರಾಣದ ಬಗ್ಗೆ ಸಿದ್ದರಾಮಯ್ಯ ವಿವರಣೆಯನ್ನು ನೀಡಿದರು
"ಪಂಚೆ ಬಿಚ್ಚೋಗುತ್ತಿರಲಿಲ್ಲ, ಆದರೆ ಇತ್ತೀಚೆಗೆ ಕೊರೊನಾ ಬಂದಿದ್ದರಿಂದ ನಾಲ್ಕರಿಂದ ಐದು ಕೆಜಿ ದಪ್ಪಗಾದೆ. ಹೊಟ್ಟೆ ಬಂದಿದ್ದರಿಂದ, ಪಂಚೆ ಜಾರೋಕೆ ಶುರುವಾಗಿದೆ. ಎಷ್ಟೋ ಜನ ನಿಲುವಂಗಿಯನ್ನು ಹಾಕಿಕೊಳ್ಳುತ್ತಾರೆ. ಇಂತಹ ಮುಜುಗರದ ಪ್ರಸಂಗ ಬಂದಾಗ ಇರಲೆಂದೇ ಅಂಗಿಯನ್ನು ಉದ್ದಕ್ಕೆ ಹೊಲಿಸಿಕೊಳ್ಳುವುದು" ಎಂದು ಸದನದಲ್ಲಿ ಪಂಚೆ ಪುರಾಣದ ಬಗ್ಗೆ ಸಿದ್ದರಾಮಯ್ಯ ವಿವರಣೆಯನ್ನು ನೀಡಿದರು.
ದಿವಂಗತ ಶಾಸಕ ಬಿ.ನಾರಾಯಣ ರಾವ್ ಅವರ ಸಮಾಧಿ ಸ್ಥಳದಲ್ಲಿ ನಡೆದ ಶ್ರದ್ದಾಂಜಲಿ
ಈ ಹಿಂದೆ, ಅಂದರೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಸವಕಲ್ಯಾಣದ ದಿವಂಗತ ಶಾಸಕ ಬಿ.ನಾರಾಯಣ ರಾವ್ ಅವರ ಸಮಾಧಿ ಸ್ಥಳದಲ್ಲಿ ನಡೆದ ಶ್ರದ್ದಾಂಜಲಿ ಕಾರ್ಯಕ್ರಮದ ವೇಳೆಯೂ ಅವರ ಪಂಚೆ ಜಾರಿ ಮುಜುಗರಕ್ಕೀಡಾಗಿದ್ದರು. ಆಗ ಈಶ್ವರ್ ಖಂಡ್ರೆಯವರು ಸಿದ್ದರಾಮಯ್ಯನವರಿಗೆ ಈ ವಿಷಯ ತಿಳಿಸಿದ ನಂತರ, ಅವರು ಪಂಚೆ ಕಟ್ಟಿಕೊಂಡು ಭಾಷಣ ಮುಂದುವರಿಸಿದರು.