ಸಂಭ್ರಮದ ಯೋಗ ದಿನಾಚರಣೆ: ಯಾವ ಜಿಲ್ಲೆಗಳಲ್ಲಿ ಹೇಗೆ ಆಚರಿಸಲಾಯಿತು?
ಬೆಂಗಳೂರು, ಜೂನ್.21: ವಿಶ್ವಸಂಸ್ಥೆಯ ಮಹಾಸಭೆಯು 2014 ರಲ್ಲಿ 'ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಜೂನ್ 21 ಎಂದು ಘೋಷಿಸಿದೆ. 2014 ಸೆಪ್ಟೆಂಬರ್ 27 ರಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಾಚೀನ ಸಂಪ್ರದಾಯ ಯೋಗವನ್ನು ವಿಶ್ವಸಮುದಾಯಕ್ಕೆ ಪರಿಚಯಿಸಿದಾಗ 177ಕ್ಕೂ ಹೆಚ್ಚಿನ ರಾಷ್ಟ್ರಗಳು ಸ್ಪಂದಿಸಿ ಸಹಮತ ವ್ಯಕ್ತಪಡಿಸಿದವು.
ದೇಹ-ಮನಸ್ಸು ಮತ್ತು ಆಧ್ಯಾತ್ಮದ ಸಾಮರಸ್ಯ ಸಾಧಿಸುವ ಕ್ರಮ 5000 ವರ್ಷಗಳಷ್ಟು ಪ್ರಾಚೀನವಾದುದು. ಮನುಷ್ಯ ಮತ್ತು ಪ್ರಕೃತಿಯ ನಡುವೆ ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಯೋಗ ಸಾಧನೆ ಮಹತ್ವದ್ದಾಗಿದೆ.
ಅಂತಾರಾಷ್ಟ್ರೀಯ ಯೋಗದಿನ: ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ
ಈ ಹಿನ್ನೆಲೆಯಲ್ಲಿ ಮೈಸೂರು, ಶಿವಮೊಗ್ಗ, ಬಾಗಲಕೋಟೆ, ರಾಯಚೂರು, ಉಡುಪಿ, ಕಾರವಾರ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಯಾವ ಜಿಲ್ಲೆಗಳಲ್ಲಿ ಹೇಗೆ ಆಚರಿಸಲಾಯಿತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
ಮೈಸೂರಿನಲ್ಲಿ ಯೋಗಾಸನ ಬೋಧಿಸಿದ ಗುರುಗಳು
ಇಲ್ಲಿನ ರೇಸ್ ಕೋರ್ಸ್ ಮೈದಾನದಲ್ಲಿ ಯೋಗ ಪಟುಗಳಿಂದ ಯೋಗ ಪ್ರದರ್ಶನ ನಡೆಯಿತು. ವಜ್ರಾಸನ, ಸೇತು ಬಂಧಾಸನ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಶನ, ಶಶಂಕಾಸನ, ಉತ್ಥಾನ ಮಂಡೂಖಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಶಲಭಾಸನ, ಅರ್ಧ ಹಲಾಸನ, ಪವನ ಮುಕ್ತಾಸನ, ಶವಾಸನ, ಕಪಾಲಭಾತಿ, ನಾಡಿಶೋಧನ ಪ್ರಾಣಯಾಮ, ಭ್ರಾಮರಿ ಪ್ರಾಣಾಯಾಮಾ, ಮಕರಾಸಾನ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಲಾಯಿತು
ಆರೋಗ್ಯಕ್ಕೆ ಬೇಕಾದ ಯೋಗಾಸನವನ್ನು ಯೋಗ ಗುರುಗಳು ಭೋಧಿಸಿದ್ದು, ವಿಶೇಷವಾಗಿತ್ತು. ಶಾಸಕ ಅಶ್ವಿನ್ ಕುಮಾರ್ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆಯಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಂದ ಗಮನಸೆಳೆದ ಯೋಗ
ಬಿವಿವಿ ಸಂಘ ಹಾಗೂ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬೆಳಗ್ಗೆ 6.45 ರಿಂದ 7.45 ರವರೆಗೆ ಬಾಗಲಕೋಟೆಯ ಮೂರು ಸ್ಥಳಗಳಲ್ಲಿ 'ವಿಶ್ವಯೋಗ ದಿನಾಚರಣೆ' ಆಚರಿಸಲಾಯಿತು.
ಬಿವಿವಿ ಸಂಘದ ಹಳೆಯ ಕ್ರೀಡಾಂಗಣದಲ್ಲಿ ಶಾಸಕರಾದ ಡಾ. ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಶಿಕ್ಷಣ, ಪಾಲಿಟೆಕ್ನಿಕ್, ಡೆಂಟಲ್, ಔಷಧ ವಿಜ್ಞಾನ, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಶಾಲಾ ಕಾಲೇಜುಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸಂಗೀತಾ ಬಳಗಾನೂರ, ಡಾ.ಆರ್.ಬಿ. ಹೊಸಮನಿ ಹಾಗೂ ಶ್ರೀಮತಿ ಮಲ್ಲಮ್ಮ ಬಾಜಪ್ಪನವರ ತಂಡವು ನಿರ್ದೇಶನ ಮಾಡಿತು.
ನವನಗರದ
ಎಸ್.
ನಿಜಲಿಂಗಪ್ಪ
ವೈದ್ಯಕೀಯ
ಮಹಾವಿದ್ಯಾಲಯ
ಹಾಗೂ
ಹಾನಗಲ್
ಕುಮಾರೇಶ್ವರ
ಆಸ್ಪತ್ರೆ
ಆವರಣ
ಮತ್ತು
ವಿದ್ಯಾಗಿರಿಯ
ಬಸವೇಶ್ವರ
ಇಂಜಿನಿಯರಿಂಗ್
ಕಾಲೇಜ್
ಕ್ರೀಡಾಂಗಣದಲ್ಲಿ
ಹೀಗೆ
ಮೂರು
ಕಡೆ
ಯೋಗ
ದಿನಾಚರಣೆ
ನಡೆಸಲಾಯಿತು..
ಭುಜಂಗಾಸನ, ಭದ್ರಾಸನ, ಶವಾಸನ, ಚಕ್ರಾಸನ, ಅನಲೋಮ, ವಿನಲೋಮ, ಕಪಾಲಭಾತಿ, ಸೂರ್ಯಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡಲಾಯಿತು.
ಶಿವಮೊಗ್ಗದಲ್ಲಿ ಅಪರ ಜಿಲ್ಲಾಧಿಕಾರಿಗಳಿಂದ ಯೋಗ ಪ್ರದರ್ಶನ
ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಯೋಗ ಪ್ರದರ್ಶಿಸಿದರು. ವಿವಿಧ ಗಣ್ಯರು ಭಾಗವಹಿಸಿದ್ದರು.
ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಸರ್ವ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ 4 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ವಿನೋಬನಗರದ ಶಿವಗಂಗಾ ಯೋಗಕೇಂದ್ರದಲ್ಲಿಯೂ ವಿಶ್ವ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿಯಲ್ಲಿ ಪೇಜಾವರ ಮಠದ ಕಿರಿಯ ಯತಿಗಳಿಂದ ಯೋಗ
ಉಡುಪಿಯಲ್ಲಿ ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯೋಗದ ವಿವಿಧ ಆಸನಗಳನ್ನು ಮಾಡಿದರು. ಶಿಷ್ಯರ ಸಮಕ್ಷಮದಲ್ಲಿ ಸ್ವಾಮೀಜಿ ಯೋಗಾಸನ ಮಾಡಿದ್ದು ವಿಶೇಷವಾಗಿತ್ತು. ಹಾಗೆಯೇ ಜಿಲ್ಲಾ ಬಿಜೆಪಿಯಿಂದ ಯೋಗ ದಿನ ಆಚರಿಸಲಾಗಿದ್ದು, ಬಿಜೆಪಿ ನಾಯಕರು, ಕಾರ್ಯಕರ್ತರು ಭಾಗಿಯಾಗಿದ್ದರು.
ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ ಆಯೋಜನೆ
4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರ್ವಜನಿಕರು, ಅಧಿಕಾರಿಗಳು, ವಿದ್ಯಾರ್ಥಿಗಳು ಯೋಗದಲ್ಲಿ ಭಾಗಿಯಾಗಿದ್ದರು.
ವಿವಿಧ ಬಗೆಯ ಯೋಗಾಸನ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಯಿತು. ನಗರದ ಪೊಲೀಸ್ ಮೈದಾನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಿಸಿ ಡಾ.ಗೌತಮ್ ಬಗಾದಿ, ಎಸ್ ಪಿ ಕಿಶೋರ್ ಬಾಬುರಿಂದ ಯೋಗಕ್ಕೆ ಚಾಲನೆ ನೀಡಿದರು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು ಅಚ್ಚರಿ ಮೂಡಿಸಿತು.
ಕಾರವಾರದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಯೋಗ ದಿನಾಚರಣೆ
ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದ ಬಾಡದ ಗುರುಮಠದಲ್ಲಿ ಜಿಲ್ಲಾ ಮಟ್ಟದ ಯೋಗಾಭ್ಯಾಸ ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪತಂಜಲಿ ಯೋಗ ಸಮಿತಿ, ರೋಟರಿ ಕಾರವಾರ ಸೀಸೈಡ್ ಘಟಕ ಹಾಗೂ ಆಯುಷ್ ಇಲಾಖೆ ವತಿಯಿಂದ ಯೋಗಾಭ್ಯಾಸ ಹಮ್ಮಿಕೊಳ್ಳಲಾಯಿತು.
ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು, ಅಧಿಕಾರಿಗಳು, ಎನ್ಎಸ್ಎಸ್ ಶಿಬಿರಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಮಂದಿ ಡಾ.ಪ್ರಕಾಶ್ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ಯೋಗಾಭ್ಯಾಸ ಮಾಡಿದರು.
ಶಾಸಕಿ ರೂಪಾಲಿ ನಾಯ್ಕ ಕೂಡ ಸಾರ್ವಜನಿಕರೊಂದಿಗೆ ಯೋಗಾಭ್ಯಾಸ ಮಾಡಿದರು.