ಎಚ್ಡಿಕೆ 5 ವರ್ಷ ಸಿಎಂ ಆಗಿರುತ್ತಾರಾ?: ಅನುಮಾನ ಮೂಡಿಸಿದ ಪರಂ ಹೇಳಿಕೆ
Recommended Video
ಬೆಂಗಳೂರು, ಮೇ 25: ಐದು ವರ್ಷದವರೆಗೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಸಮ್ಮಿಶ್ರ ಸರ್ಕಾರದ ಆಡಳಿತವನ್ನು ನಡೆಸಬೇಕೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
ಫಲಿತಾಂಶದ ದಿನದಂದು ಯಾವ ಪಕ್ಷಕ್ಕೂ ಸಂಪೂರ್ಣ ಬಹುಮತ ಬರುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಮುಖಂಡರು, ಸರ್ಕಾರ ರಚಿಸಲು ಜೆಡಿಎಸ್ಗೆ ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದರು.
ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್
ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಉತ್ಸಾಹದಿಂದ ಸಿದ್ಧತೆ ನಡೆಸಿದ್ದರು. ಆದರೆ, ಸರ್ಕಾರ ರಚನೆಯ ಸಮಯ ಸನ್ನಿಹಿತವಾದಂತೆ ಕಾಂಗ್ರೆಸ್, ಒಂದೊಂದೇ ಬೇಡಿಕೆಗಳನ್ನು ಇರಿಸಲು ಆರಂಭಿಸಿದೆ.
ಕಾಂಗ್ರೆಸ್ ಬೆಂಬಲದೊಂದಿಗೆ ತಾವೇ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಹುಮ್ಮಸ್ಸಿನಲ್ಲಿರುವ ಕುಮಾರಸ್ವಾಮಿ ಅವರಿಗೆ ಪರಮೇಶ್ವರ್ ಅವರ ಹೇಳಿಕೆಯಿಂದ ಕಸಿವಿಸಿಯಾಗಿದೆ.
ಕುಮಾರಸ್ವಾಮಿ ಅವರೇ ಐದು ವರ್ಷದವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಅವರು, 'ನಾವಿನ್ನೂ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ' ಎಂದು ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ವಿಶ್ವಾಸಮತ LIVE:ಪರೀಕ್ಷೆ ಗೆಲ್ಲುತ್ತಾ ಜೆಡಿಎಸ್-ಕಾಂಗ್ರೆಸ್?
'ಯಾವ ಯಾವ ಖಾತೆಗಳನ್ನು ಜೆಡಿಎಸ್ ಪಡೆದುಕೊಳ್ಳಬೇಕು ಮತ್ತು ನಮಗೆ ಯಾವ ಖಾತೆಗಳು ಸಿಗಬೇಕು ಎಂಬುದನ್ನೂ ಸಹ ನಿರ್ಧಾರ ಮಾಡಿಲ್ಲ. ಐದು ವರ್ಷದ ಆಡಳಿತವೂ ಅವರಿಗೇ ನೀಡಬೇಕೋ ಅಥವಾ ನಮಗೂ ಅವಕಾಶ ಸಿಗಬೇಕೋ ಎಂಬ ಬಗ್ಗೆ ಕೂಡ ಇದುವರೆಗೂ ಚರ್ಚೆ ಮಾಡಿಲ್ಲ' ಎಂದು ತಿಳಿಸಿದ್ದಾರೆ.
ಜೆಡಿಎಸ್ ಪೂರ್ಣಾವಧಿ ಐದು ವರ್ಷ ಆಡಳಿತ ನಡೆಸಲು ಕಾಂಗ್ರೆಸ್ಗೆ ಒಪ್ಪಿಗೆಯಿದೆಯೇ ಎಂದು ಮತ್ತೆ ಪ್ರಶ್ನೆ ಮುಂದಿಟ್ಟಾಗ, ಸಾಧಕ ಮತ್ತು ಬಾಧಕಗಳನ್ನು ನೋಡಿಕೊಂಡು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಉತ್ತಮ ಆಡಳಿತ ನೀಡುವುದೇ ನಮ್ಮ ಮುಖ್ಯ ಉದ್ದೇಶ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
30-30 ತಿಂಗಳ ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂಬ ವರದಿಯನ್ನು ನಿರಾಕರಿಸಿದ ಅವರು, ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಚಿವ ಸ್ಥಾನ ಖಾತೆ ಹಂಚಿಕೆ ವಿಚಾರಗಳಿಗೆ ಸಂಬಂಧಿಸಿದಂತೆ ಪಕ್ಷದ ಅನೇಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದು ಸತ್ಯಕ್ಕೆ ದೂರ. ಇದುವರೆಗೂ ತಮ್ಮಿಂದ ಅಥವಾ ರಾಹುಲ್ ಗಾಂಧಿ ಅವರಿಂದ ಯಾವ ಮುಖಂಡರೂ ಹುದ್ದೆಗಳಿಗೆ ಬೇಡಿಕೆ ಇಟ್ಟಿಲ್ಲ. ಈ ವರದಿಗಳನ್ನು ಮಾಧ್ಯಮಗಳಲ್ಲಿ ಮಾತ್ರ ನೋಡಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಅನೇಕ ಮುಖಂಡರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಇದು ಪಕ್ಷದ ಸಂಪತ್ತು. ಸಮ್ಮಿಶ್ರ ಸರ್ಕಾರ ರಚಿಸಿರುವ ಈ ಸನ್ನಿವೇಶದಲ್ಲಿ ಯಾರಿಗೆ ಯಾವ ಹುದ್ದೆ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದಿದ್ದಾರೆ.
ಪಕ್ಷದ ಮೇಲೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅವರು ಕೆಲವು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದಾರೆ. ವಿಶ್ವಾಸಮತ ಯಾಚನೆಯಲ್ಲಿ ಯಶಸ್ವಿಯಾಗಲಿದ್ದೇವೆ. ಚರ್ಚೆಗಳು, ಗುಂಪು ಸಭೆಗಳು ಆಗಿರಬಹುದು ಅಥವಾ ಇಲ್ಲದಿರಬಹುದು. ವಾಸ್ತವವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಇದನ್ನು ಮಾತ್ರ ಹೇಳಬಲ್ಲೆ ಎಂದು ಹೇಳಿದ್ದಾರೆ.