1200 ಕ್ಕೂ ಹೆಚ್ಚು ವೈದ್ಯರ ಕೊರತೆ, ಬೇಡಿಕೆ ಈಡೇರಿಸಿ: ಎಎಪಿ
ಬೆಂಗಳೂರು, ಸೆ .18: ರಾಜ್ಯದಲ್ಲಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜೀವ ಉಳಿಸುವ ವೈದ್ಯರು ಕರ್ತವ್ಯ ವಿಮುಖರಾಗುವಂತೆ ಮಾಡಿದ ಸರ್ಕಾರದ ಬೇಜವಾಬ್ದಾರಿತನವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ.
ರಾಜ್ಯದಲ್ಲಿ ಒಟ್ಟು 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 1437 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ವೈದ್ಯರಿದ್ದಾರೆ. ಅಂದರೆ ಸುಮಾರು 922 ವೈದ್ಯರ ಕೊರತೆ ಇದ್ದು ಜಿಲ್ಲಾ ಆಸ್ಪತ್ರೆಗಳನ್ನು ಸೇರಿಸಿಕೊಂಡರೆ 1200 ಕ್ಕೂ ಹೆಚ್ಚು ವೈದ್ಯರ ಕೊರತೆ ಇದೆ. ಇದರಿಂದಾಗಿ ಖಾಯಂ ವೈದ್ಯರ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ.
ಮುಷ್ಕರ ಕೈ ಬಿಡಲು ಸಚಿವ ಡಾ.ಕೆ. ಸುಧಾಕರ್ ವೈದ್ಯರಲ್ಲಿ ಮನವಿ
ಕೊರೋನಾ ಸಮಯದಲ್ಲಿ ಗುತ್ತಿಗೆ ವೈದ್ಯರು ಖಾಯಂ ಮಾಡುವಂತೆ ಒತ್ತಾಯಿಸಿದ್ದರು. ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅವರು 1 ತಿಂಗಳಲ್ಲಿ ನೇಮಕಾತಿ ಮಾಡಿಕೊಳ್ಳುವುದಾಗಿ ಮಾರ್ಚ್ 13 ರಂದು ವಿಧಾನ ಸಭೆಯಲ್ಲಿ ಭರವಸೆ ನೀಡಿದ್ದರು, ಆಗ ನೀಡಿದ್ದ ಮಾತನ್ನೇ ಮರೆತು ಆರೋಗ್ಯ ಸಚಿವರು ಕಾಣೆಯಾಗಿದ್ದಾರೆ.
436 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ಗುತ್ತಿಗೆ ವೈದ್ಯ ಅಧಿಕಾರಿಗಳು 236 ಕೇಂದ್ರಗಳಲ್ಲಿ ಆಯುಷ್ ವೈದ್ಯಾಧಿಕಾರಿಗಳು ಹಾಗೂ 55 ಕೇಂದ್ರಗಳಲ್ಲಿ ಕಡ್ಡಾಯ ಗ್ರಾಮೀಣ ಸೇವೆಯಡಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎನ್ಎಚ್ಎಂ ಅಡಿ 159 ವೈದ್ಯಾಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ದೊಡ್ಡ ರಾಜ್ಯದಲ್ಲಿ ಸರಿಯಾದ ರೀತಿಯಲ್ಲಿ ವೈದ್ಯರು ಇಲ್ಲ ಅಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ, ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ವೈದ್ಯರ ಜತೆ ಸಭೆ ನಡೆಸಿ ಮತ್ತೊಮ್ಮೆ "ನಾನೇ ಸೂಪರ್ ಸಿಎಂ" ಎಂದು ಸಾಬೀತು ಮಾಡಿಕೊಂಡಿದ್ದಾರೆ.
Recommended Video
ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಮತ್ತೊಮ್ಮೆ ವೈದ್ಯರ ಜತೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕಾಗಿ ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಎಎಪಿ ವೈದ್ಯಕೀಯ ವಿಭಾಗದ ಅಧ್ಯಕ್ಷರಾದ ಡಾ. ಪೂರ್ಣಿಮ ನಾಯ್ಡು ಹೇಳಿದ್ದಾರೆ.