ಕೋವಿಡ್ ನಿಯಂತ್ರಣಕ್ಕೆ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ!
ಬೆಂಗಳೂರು, ಅ.20: "ಕೋವಿಡ್ ಕಂಟ್ರೋಲ್ ಮಾಡಕ ಖರ್ಚಿಗೆ ರೊಕ್ಕ ಬೇಕಲ್ಲ. ಅದಕ್ಕ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗ್ಯಾದ"...
ಹೀಗೆಂದು ಹೇಳಿದವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲೇ ಸಚಿವ ಉಮೇಶ ಕತ್ತಿ ಈಗ ಮತ್ತೊಂದು ಉಡಾಫೆ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಕೋವಿಡ್ ಕಾರಣದಿಂದ ಪೆಟ್ರೋಲ್ ಏರಿಕೆಯಾಗಿಲ್ಲ. ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಣ ಬೇಕಾಗಿದೆ. ಸರ್ಕಾರಕ್ಕೆ ಹಣ ಬೇಕು ಎಂದರೆ ಎಲ್ಲಿಂದ ತರಬೇಕು? ಅದಕ್ಕಾಗಿ ಈ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಬೆಳಗಾವಿಯಲ್ಲಿ ಬುಧವಾರ ಹೇಳಿದರು. ಸಚಿವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮಾತು ಮುಂದುವರಿಸಿದ ಸಚಿವರು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಕೋವಿಡ್ ಅಷ್ಟೇ ಕಾರಣ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದೆ. ಅಲ್ಲದೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ತೆರಿಗೆ ಹೆಚ್ಚಳ ಮಾಡಿವೆ. ಈ ಎಲ್ಲ ಕಾರಣಗಳಿಂದ ಬೆಲೆ ಹೆಚ್ಚಳವಾಗಿದೆ ಎಂದು ವಿವರಣೆ ನೀಡಿದರು.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಗಳನ್ನು ನಡೆಸುತ್ತಿದ್ದಾರೆ. ದೀಪಾವಳಿ ವೇಳೆಗೆ ಬೆಲೆ ಕಡಿಮೆಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಜವಾಗಿಯೂ ಬೆಲೆ ಕಡಿಮೆ ಆಗುತ್ತದಾ? ಎಂಬ ಪ್ರಶ್ನೆಗೆ, "ನಾನು ಕೇಂದ್ರ ಮಂತ್ರಿ ಅಲ್ಲ. ನಿರ್ಮಲಾ ಸೀತಾರಾಮನ್ ಕೇಂದ್ರ ಮಂತ್ರಿ ಇದ್ದಾರೆ. ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಇದ್ದಾರೆ. ಬೆಲೆ ಇಳಿಕೆ ಸಂಬಂಧ ಅವರು ಚಿಂತನೆ ಮಾಡುತ್ತಾರೆ. ಬೆಲೆ ಇಳಿಕೆ ಮಾಡುತ್ತಾರೆ ಎಂಬ ಆಶಾಭಾವನೆ ಇದೆಯಷ್ಟೇ ನನ್ನದು" ಎಂದು ಹೇಳಿದರು.
ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿ ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ, 'ಅದನ್ನು ಅವರಿಗೆ ಕೇಳಬೇಕು. ನನಗೆ ಆ ಬಗ್ಗೆ ಗೊತ್ತಿಲ್ಲ'' ಎಂದು ಹೇಳಿದರು.
"ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. ನಮ್ಮ ವಾದ ಮಂಡಿಸಿದ್ದೀವಿ. ಮಾಧ್ಯಮದವರ ಮುಂದೆ ಹೇಳಲು ಸಾಧ್ಯವಿಲ್ಲ. ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಪಕ್ಷದ ಆಂತರಿಕ ವಿಚಾರ. ಒಳಗೆ ಚರ್ಚೆ ಮಾಡಿ ನಂತರ ಹೇಳಿಕೆ ನೀಡುತ್ತೇವೆ" ಎಂದರು.
ಕಾಂಗ್ರೆಸ್ಗೆ ಕೆಲಸವಿಲ್ಲ:
ಪ್ರಧಾನಿ ನರೇಂದ್ರ ಮೋದಿ ಹೆಬ್ಬೆಟ್ ಗಿರಾಕಿ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, "ಪ್ರಧಾನಿ ಮೋದಿ ಅವರು ಜನಪರ ಆಡಳಿತವನ್ನು ನೀಡುತ್ತಿದ್ದಾರೆ. ದೇಶದಲ್ಲ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ, ಕಾಂಗ್ರೆಸ್ನವರಿಗೆ ಮಾಡಲು ಕೆಲಸ ಇಲ್ಲ. ಅದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದು ಹೊಸತಲ್ಲ;
ಸಚಿವ ಉಮೇಶ್ ಕತ್ತಿ ಈ ರೀತಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಇದು ಹೊಸತೇನಲ್ಲ. ಹಿಂದೊಮ್ಮೆ ಸಾರ್ವಜನಿಕ ಪಡಿತರದಲ್ಲಿ ಅಕ್ಕಿ ಕಡಿಮೆ ಕೊಡಲಾಗುತ್ತಿದೆ. ಹಸಿವಿನಿಂದ ಸಾಯಬೇಕಾ? ಎಂದು ರೈತನೊಬ್ಬ ದೂರವಾಣಿ ಕರೆ ಮಾಡಿ ಕೇಳಿದಾಗ, ಸಚಿವ ಕತ್ತಿ, "ಸತ್ತೋದ್ರೆ ಒಳ್ಳೆಯದು. ನನಗೆ ಫೋನ್ ಮಾಡಬೇಡ" ಎಂದು ಕರೆ ಬಂದ್ ಮಾಡಿದ್ದರು.
ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ತೀವ್ರವಾಗಿರುವ ಸಂದರ್ಭದಲ್ಲಿ ಜನಸಾಮಾನ್ಯರು ಸರಿಯಾದ ಆಕ್ಸಿಜನ್, ವೈದ್ಯಕೀಯ ಸೌಲಭ್ಯ ಸಿಗದೆ ಮೃತಪಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಉಮೇಶ್ ಕತ್ತಿ, "ಸಾಯುವವರು ಸಾಯುತ್ತಾರೆ. ಅವರಿಗೇನು ಪಂಪ್ ಹೊಡೆದು ಧೈರ್ಯ ತುಂಬಲು ಆಗುತ್ತಾ?" ಎಂದು ಪ್ರಶ್ನಿಸಿದ್ದರು.
Recommended Video