ನಿವೃತ್ತ ಸಾರಿಗೆ ನೌಕರರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ
ಬೆಂಗಳೂರು, ಜೂನ್ 11 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ನಿವೃತ್ತ ನೌಕರರಿಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದೆ.
ಕೆಎಸ್ಆರ್ ಟಿಸಿಯ ನಿವೃತ್ತ ನೌಕರರು ಈ ಹಿಂದೆ ಶೇ.50ರಷ್ಟು ರಿಯಾಯಿತಿಯೊಂದಿಗೆ ಪ್ರಯಾಣಿಸುತ್ತಿದ್ದರು. ಆದರೆ, ನೌಕರರು ಸಂಪೂರ್ಣ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕೆಂದು ಬೇಡಿಕೆ ಸಲ್ಲಿಸಿದ್ದರು. [ಬೆಂಗಳೂರು ಟು ಜೈಸಲ್ಮೇರ್ ಕೆಸ್ಸಾರ್ಟಿಸಿ ಬಸ್]
ಜೂ.7ರಂದು ಈ ಕುರಿತು ಸಭೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿವೃತ್ತ ನೌಕರರು ಸಂಸ್ಥೆಗೆ ಸಲ್ಲಿಸಿರುವ ಸುದೀರ್ಘ ಸೇವೆಯನ್ನು ಪರಿಗಣಿಸಿ, ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡುವ ನಿರ್ಧಾರ ಕೈಗೊಂಡಿದ್ದರು. [ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಕೆಎಸ್ಆರ್ ಟಿಸಿ]
ಸದ್ಯ ಈ ಕುರಿತು ಕೆಎಸ್ಆರ್ ಟಿಸಿ ಪ್ರಕಟಣೆ ಹೊರಡಿಸಿದ್ದು, ನಿವೃತ್ತ ನೌಕರರಿಂದ ವಾರ್ಷಿಕ 500 ರೂ. ಸಂಸ್ಕರಣಾ ಶುಲ್ಕವನ್ನು ಪಡೆದು, ನಾಲ್ಕು ಸಾರಿಗೆ ನಿಗಮಗಳ ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
1988ರ ಜ.1 ಮತ್ತು ನಂತರ ನಿವೃತ್ತರಾದ ಸಂಸ್ಥೆಯ ನೌಕರರು ಮಾತ್ರ ಈ ಸೇವೆಗೆ ಅರ್ಹರಾಗಿದ್ದಾರೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಾಗಿದೆ.