ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಫ್ರೀ ಬಸ್ ಪಾಸ್ : ವಾಟ್ ಈಸ್ ದಿಸ್ ಬಾಸ್?
ಅಧಿಕಾರಕ್ಕೆ ಬರುವ ಮುನ್ನ ಏನೇನೋ ಭರವಸೆಗಳು, ಅಧಿಕಾರಕ್ಕೆ ಬಂದ ನಂತರ ಮಾತು ಉಳಿಸಿಕೊಳ್ಳಲಾಗದೇ ಅದಕ್ಕೆ ಇನ್ನೊಂದೇನೋ ವರಸೆಗಳು.. ಸಾಲಮನ್ನಾದ ವಿಚಾರದಲ್ಲಿ ಕೊಟ್ಟಮಾತಿನಂತೆ ನಡೆಯದ ಕುಮಾರಸ್ವಾಮಿ ಸರಕಾರ, ವಿದ್ಯಾರ್ಥಿಗಳ ಬಸ್ ಪಾಸ್ ವಿಚಾರದಲ್ಲೂ ಮಾತಿಗೆ ತಪ್ಪಿದೆ.
'ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ' ಎಂದು ತನ್ನ ಪ್ರಣಾಳಿಕೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಎಂದು ಜೆಡಿಎಸ್ ಹೇಳಿಲ್ಲದಿದ್ದರೂ, ಸಿದ್ದರಾಮಯ್ಯನವರ ಸರಕಾರದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ಹಿಂದಿನ ಸರಕಾರದ್ದಾಗಿತ್ತು.
ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗಷ್ಟೇ ಉಚಿತ ಬಸ್ ಪಾಸ್!
ಈಗ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತದೆ ಎಂದು ಕೇವಲ ಪರಿಶಿಷ್ಠ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಾಸ್ ನೀಡಲು ಸಿಎಂ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.25 ನಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನುವ ಕುಮಾರಸ್ವಾಮಿ ಸರಕಾರದ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿದೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿ ಮತ್ತು ಇತರ ಸೌಲಭ್ಯಗಳ ಬಗ್ಗೆ ಯಾರಿಗೂ ತಕರಾರು ಇಲ್ಲದಿದ್ದರೂ, ಮಕ್ಕಳ ಬಸ್ ಪಾಸ್ ವಿಚಾರದಲ್ಲೂ ಯಾಕೀ ತಾರತಮ್ಯ ಎನ್ನುವುದೇ ಇಲ್ಲಿ ಪ್ರಶ್ನೆ. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಮಕ್ಕಳಿಗೂ ಸರಕಾರದ ಈ ಸೌಲಭ್ಯ ಸಿಗಬೇಕಲ್ಲವೇ?
ಇಂದಿನ ಕಾಲಘಟ್ಟದಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗಯಾದಿಯಾಗಿ ಸಾಮಾನ್ಯ ವರ್ಗದಲ್ಲೂ ಕಡುಬಡವರಿಲ್ಲವೇ, ಸಾಮಾನ್ಯರಿಲ್ಲವೇ? ಇದೇ ಎಸ್ಸಿ, ಎಸ್ಟಿ ಮಕ್ಕಳಿಗೆ ತೋರಿದ ಉದಾರತೆಯನ್ನು ಇಂತಹ ಕುಟುಂಬದ ಮಕ್ಕಳಿಗೂ ನೀಡಿದ್ದರೆ, ಅವರಿಗೊಂದಷ್ಟು ಆರ್ಥಿಕ ಹೊರೆ ತಪ್ಪುತ್ತಿತ್ತಲ್ಲವೇ?
ಉಚಿತ ಬಸ್ಪಾಸ್ ವಾಪಸಾತಿ ವಿರೋಧಿಸಿ ಎಸ್ಎಫ್ಐ ಪ್ರತಿಭಟನೆ
ಬೆಳಗ್ಗೆ ಎದ್ದು ಮನೆಮನೆಗೆ ಪೇಪರ್ ಹಾಕಿ, ಸ್ಕೂಲಿಗೆ ಓಡುವ ಅದೆಷ್ಟೋ ಮಕ್ಕಳನ್ನು ನೋಡುತ್ತಿರುತ್ತೇವೆ, ಅವರೆಲ್ಲಾ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳಾ? ಆರ್ಥಿಕ ತೊಂದರೆಯಿರುವುದರಿಂದ ತಾನೇ, ಅಂತಾ ಮಕ್ಕಳು ದುಡಿದು ಶಾಲೆಗೆ ಬರುತ್ತಿರುವುದು ಎನ್ನುವುದನ್ನು ಸರಕಾರ ಅರ್ಥ ಮಾಡಿಕೊಳ್ಳುವುದು ಯಾವಾಗ?
ಮೊದಲೇ ವರ್ಷಕ್ಕೊಮ್ಮೆ ಮನಬಂದಂತೇ ಶಾಲಾ ಫೀಸು ಹೆಚ್ಚಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕುವುದಕ್ಕೆ ಯಾವ ಸರಕಾರವೂ ಮುಂದಾಗುತ್ತಿಲ್ಲ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳ/ ಸಚಿವರ ಒಡೆತನದ್ದೇ ಎನ್ನುವುದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದರ ಮಧ್ಯೆ, ಹೆಚ್ಚುವರಿ ಬಸ್ ಪಾಸ್ ಹೊರೆ.
ಹೊಸ ಯೋಜನೆ ಜಾರಿಗೆ ತರಲು ನಮ್ಮ ರಾಜ್ಯದ ಸದ್ಯದ ಆರ್ಥಿಕ ಪರಿಸ್ಥಿತಿ ಅನುವು ಮಾಡಿಕೊಡುವುದು ಇಲ್ಲ ಎನ್ನುವುದು ಕುಮಾರಸ್ವಾಮಿವರ ಮಾತಾದರೆ, ಹಿಂದಿನ ಸರಕಾರ ನೀಡುತ್ತಿದ್ದ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ರಾಜ್ಯದ ಜನತೆಯ ಮುಂದೆ ಯಾಕೆ ಹೇಳಬೇಕಾಗಿತ್ತು? ಹೇಗೂ, ಎಲ್ಲಾ ಮಕ್ಕಳಿಗೂ ಉಚಿತ ಬಸ್ ಪಾಸ್ ಯೋಜನೆ ನಿಮ್ಮ ಪ್ರಣಾಳಿಕೆಯಲ್ಲಿ ಇರಲಿಲ್ಲವಲ್ಲಾ?
ಹಿರಿಯ ನಾಗರಿಕರಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎನ್ನುತ್ತದೆ ಜೆಡಿಎಸ್ ಪ್ರಣಾಳಿಕೆ. ಇನ್ನು ಅದರಲ್ಲೂ ಎಸ್ಸಿ, ಎಸ್ಟಿ ಅನ್ನಬೇಡಿ ಸ್ವಾಮೀ.. ಹಿರಿಯರು ಶಾಪ ಹಾಕಿದರೆ ಅದು ಒಳ್ಳೆಯದಲ್ಲಾ.
ಸಿಎಂ ಕುಮಾರಸ್ವಾಮಿಯವರು ಎಸ್ಸಿ, ಎಸ್ಟಿ ಮಕ್ಕಳಿಗೆ ಮಾತ್ರ ಫ್ರೀ ಬಸ್ ಪಾಸ್ ಎನ್ನುವ ತಮ್ಮ ಸರಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಲ್ಲಾ ಮಕ್ಕಳಿಗೂ ಉಚಿತ ಬಸ್ ಪಾಸ್ ನೀಡಿ, ಮಾವಿನಕೆರೆ ರಂಗನಾಥ, ತಾಯಿ ಚಾಮುಂಡೇಶ್ವರಿ ಮೆಚ್ಚುವಂತಹ ಕೆಲಸವನ್ನು ಮಾಡಲಿ..