ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಉಲ್ಟಾ ಹೊಡೆದ ಕುಮಾರಸ್ವಾಮಿ
ಬೆಂಗಳೂರು, ಜೂನ್ 13: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆಂದು ಹೇಳಿ ಈಗ ಮೀನಾ-ಮೇಷ ಎಣಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರು, ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಬಗ್ಗೆಯೂ ಇದೇ ನೀತಿ ಅನುಸರಿಸುತ್ತಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ನೀಡಿದಲ್ಲಿ ಸರ್ಕಾರಕ್ಕೆ 60 ಕೋಟಿ ಹೆಚ್ಚುವರಿ ಹೊರೆಯಾಗುತ್ತದೆ ಹಾಗಾಗಿ ಇದರ ಬಗ್ಗೆ ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಆರ್ಥಿಕ ಹೊರೆ ಆಗುವ ಕಾರಣ ಯೋಜನೆ ಜಾರಿ ಕಷ್ಟವೆಂದೇ ಹೇಳಲಾಗುತ್ತಿದೆ.
ಉನ್ನತ ಶಿಕ್ಷಣ ಇಲಾಖೆ ಸಭೆಗೆ ಶಿಕ್ಷಣ ಸಚಿವ ದೇವೇಗೌಡ ಗೈರು
ಉನ್ನತ ಶಿಕ್ಷಣ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಅವರು, ಉಚಿತ ಬಸ್ ಪಾಸ್ ನೀಡುವ ಯೋಜನೆಯ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವ ಯೋಜನೆ ಸಿದ್ದರಾಮಯ್ಯ ಸರ್ಕಾರದ್ದಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಮಂಡಿಸಿದ ಕೊನೆಯ ಬಜೆಟ್ನಲ್ಲಿ ಈ ಘೋಷಣೆಯನ್ನು ಮಾಡಿದ್ದರು. ಆದರೆ ಇದಕ್ಕೆ ಕುಮಾರಸ್ವಾಮಿ ಅಡ್ಡಗಾಲು ಹಾಕುವ ಸಾಧ್ಯತೆ ಕಂಡುಬರುತ್ತಿದೆ.
ಭ್ರಷ್ಟಾಚಾರ ತಡೆಯಲು ಹೊರಟರೆ ಅಧಿಕಾರ ಉಳಿಯೋಲ್ಲ: ಎಚ್ಡಿಕೆ
ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರು ಅದರ ಬಗ್ಗೆ ಮೀನಾ-ಮೇಶ ಎಣಿಸುತ್ತಿದ್ದಾರೆ ಈಗ ವಿದ್ಯಾರ್ಥಿಗಳ ಬಸ್ ಪಾಸ್ಗೂ ಅದೇ ಗತಿ ಬರುವ ಸಾಧ್ಯತೆ ಇದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದಿದ್ದ ಕುಮಾರಸ್ವಾಮಿ ಅವರು ಈಗ ಹಳೆ ಸರ್ಕಾರದ ಯೋಜನೆಗಳ ಜಾರಿಗೆ ನಿರಾಸಕ್ತಿ ತೋರುತ್ತಿರುವಂತಿದೆ.
ಅಥವಾ ರೈತ ಸಾಲಮನ್ನಾದಿಂದ ಆಗುವ ಆರ್ಥಿಕ ನಷ್ಟವನ್ನು ಸರಿತೂಗಿಸಲು ಅಥವಾ ಇನ್ನೂ ಹೆಚ್ಚಿನ ಆರ್ಥಿಕ ಹೊರೆಯನ್ನು ಹೇರಿಕೊಳ್ಳಲು ಆಗದೆ ಈ ಯೋಜನೆಯನ್ನು ಕಸದ ಬುಟ್ಟಿಗೆ ಹಾಕಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.