10 ದಿನದಲ್ಲಿ 4 ಕಡೆ ಕಾಳ್ಗಿಚ್ಚು, ನೂರಾರು ಎಕರೆ ಭಸ್ಮ, ಆದರೆ ಕಾರಣ ಗೊತ್ತಿಲ್ಲ
ಬೆಂಗಳೂರು, ಫೆಬ್ರವರಿ 28: ಕರ್ನಾಟಕದಲ್ಲಿ ದಿನಕ್ಕೊಂದು ಕಡೆ ಎಂಬಂತೆ ಕಾಳ್ಗಿಚ್ಚಿನ ಸುದ್ದಿ ಬರುತ್ತಿದೆ. ಇತ್ತೀಚಿನ ಸುದ್ದಿ ಅಂದರೆ ಚಿಕ್ಕಮಗಳೂರಿನಿಂದ ಬಂದಿದೆ. ಬಾಳೆಹೊನ್ನೂರು ವಲಯದ ಮಧುಗುಣಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿದೆ. ಇದರೊಂದಿಗೆ ಕಳೆದ ಹತ್ತು ದಿನದಲ್ಲಿ ನಾಲ್ಕು ಘಟನೆಗಳು ಸಂಭವಿಸಿದಂತಾಗಿದೆ.
ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟ ಮತ್ತು ಶ್ರೀರಂಗಪಟ್ಟಣದಲ್ಲಿ ಅಗ್ನಿ ಅವಘಡ ಸಂಭವಿಸಿದ್ದವು. ಆತಂಕಕಾರಿ ಸಂಗತಿ ಏನೆಂದರೆ ಆ ಪೈಕಿ ಎರಡು ಘಟನೆಗೆ ಮನುಷ್ಯರೇ ಕಾರಣ. ಆದರೆ ಬಂಡೀಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಅಗ್ನಿ ಸ್ಪರ್ಶದಿಂದ ಅನಾಹುತ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.[ದುಷ್ಕರ್ಮಿಗಳ ಅಟ್ಟಹಾಸಕ್ಕೆ ಹೊತ್ತಿ ಉರಿಯುತ್ತಿದೆ ಬಂಡೀಪುರ ಅರಣ್ಯ!]
ಪ್ರಾಥಮಿಕ ತನಿಖೆ ಪ್ರಕಾರ, ವಿದ್ಯುತ್ ಸ್ಪರ್ಶದಿಂದಲೋ ಅಥವಾ ಬೆಂಕಿ ಹೊತ್ತಿಸಿಯೋ ಈ ಘಟನೆ ನಡೆದಿಲ್ಲ ಎಂಬುದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾಡಿನ ಮಧ್ಯದ ಹಾಡಿಗಳಲ್ಲಿ ಕೆಲವರು ವಾಸಿಸುತ್ತಾರೆ. ಅಂಥ ಕಡೆಯಿಂದ ಬೆಂಕಿ ಆರಂಭವಾಗಿದೆ. ಬೆಂಕಿ ವ್ಯಾಪಿಸುವ ಪ್ರಮಾಣ ನೋಡಿದರೆ, ಹೊತ್ತಿಸಿದವರಿಗೆ ಅದರ ಅನಾಗುತದ ಪ್ರಮಾಣ ತಿಳಿದಿದೆ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ.
ಇನ್ನು ಮತ್ತೊಬ್ಬ ಅಧಿಕಾರಿ ಹೇಳುವಂತೆ, ಕಾಡಿನೊಳಗೆ ಇರಲು ಕೆಲವರಿಗೆ ಅವಕಾಶ ನೀಡಿದ್ದೀವಿ. ಅವರ ಕೆಲವು ಮೂಢನಂಬಿಕೆಗಳಿಂದ ಇಂಥ ಅನಾಹುತ ಆಗಿರಬೇಕು. ಜೊತೆಗೆ ಹಾಡಿಗಳಲ್ಲಿ ವಾಸಿಸುವ ಕೆಲವರಿಗೆ ಬೀಡಿ ಸೇದುವ ಅಭ್ಯಾಸ ಇರುತ್ತದೆ. ಹಾಗೆ ಸೇದಿ ಬಿಸಾಡಿದ ಬೀಡಿಯಿಂದ ಬೆಂಕಿ ಹಬ್ಬಿರಬಹುದು ಎಂದು ಅಭಿಪ್ರಾಯಪಡುತ್ತಾರೆ.[ಬದುಕು ಬೆಂದು ಹೋಗುವಂತೆ ಮಾಡಿದ ಬಂಡೀಪುರದ ಬೆಂಕಿ ಅನಾಹುತ]
ಕಳೆದ ಮೂರು ವರ್ಷದಿಂದ ಸತತವಾಗಿ ಬರಗಾಲ ಇದೆ. ಹಳೆಯದ್ದನ್ನು ಸುಟ್ಟು, ಅದರ ಬೂದಿಯನ್ನು ಹೊಸದಕ್ಕೆ ಹಾಕಿದರೆ ಚೆನ್ನಾಗಿ ಬೆಳೆಯುತ್ತದೆ ಎಂಬುದು ಕಾಡಿನ ಜನರ ನಂಬಿಕೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ವರೆಗೆ ಏಳುನೂರು ಎಕರೆ ಕಾಡು ನಾಶವಾಗಿದೆ. ಅದರಲ್ಲಿ ಚಿಕ್ಕಮಗಳೂರಿನಲ್ಲಿ ಹತ್ತು ಎಕರೆ ವ್ಯಾಪ್ತಿಯಲ್ಲಿ ಬೆಳೆದಿದ್ದ ಟೀಕ್ ಮರವೂ ಸೇರಿದೆ.
ಈ ಬಗ್ಗೆ ತನಿಖೆ ನಡೆಸುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಕೇಳಿದರೆ, ನೂರಾರು ಎಕರೆ ಪ್ರದೇಶದ ಕಾಡಿನಲ್ಲಿ ಬೆಂಕಿ ಹೊತ್ತಿದ್ದು ಎಲ್ಲಿಂದ ಎಂದು ಗುರುತಿಸುವುದು ಕಷ್ಟ. ಇದು ಜನ ವಸತಿ ಪ್ರದೇಶವಲ್ಲ. ಅಂಥ ಕಡೆಯಾದರೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ ಕಣ್ಗಾವಲು ಮಾಡಬಹುದು. ಆದರೆ ತನಿಖೆಯಂತೂ ಮುಂದುವರಿದಿದೆ ಎಂದು ತಿಳಿಸುತ್ತಾರೆ.