ಕರ್ನಾಟಕದಲ್ಲಿ ಒಂದೇ ತಿಂಗಳಲ್ಲಿ 4 ಆನೆಗಳ ಸಾವು; ಹೀಗೇ ಮುಂದುವರೆದರೆ ಹೇಗೆ?
ಬೆಂಗಳೂರು, ಸೆಪ್ಟೆಂಬರ್ 10: ಸಮೃದ್ಧ ಅರಣ್ಯದಿಂದ ಆವರಿಸಿಕೊಂಡಿರುವ ಮಡಿಕೇರಿ ಜಿಲ್ಲೆಯಲ್ಲಿ 2017ರಲ್ಲಿ ಬಲು ವಿಷಾದನೀಯ ಘಟನೆಯೊಂದು ನಡೆದಿತ್ತು. ಕಾಡಿನಿಂದ ಆಹಾರ ಹುಡುಕಿಕೊಂಡು ವಿರಾಜಪೇಟೆಯ ಯೆಡೂರಿನ ಕಾಫಿ ತೋಟಕ್ಕೆ ಕಾಲಿಟ್ಟಿದ್ದ ನಾಲ್ಕು ಆನೆಗಳು ವಿದ್ಯುತ್ ತಂತಿ ತುಳಿದು ದಾರುಣವಾಗಿ ಸಾವನ್ನಪ್ಪಿದ್ದವು.
ಆದರೆ ಈ ರೀತಿ ಆನೆಗಳು ಸಾವನ್ನಪ್ಪುವ ಪ್ರಕರಣಗಳು ಇಂದಿಗೂ ಕೊನೆಯಾಗಿಲ್ಲ. ಕಾಡಿನಿಂದ ಆಹಾರ ಅರಸಿ ನಾಡಿನತ್ತ ನುಗ್ಗುವ ಆನೆಗಳು ವಿದ್ಯುತ್ ಆಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕಾಡಂಚಿನ ಗ್ರಾಮಗಳಲ್ಲಿ ಈ ರೀತಿ ಆನೆಗಳು ಸಾವನ್ನಪ್ಪುವ ಪ್ರಕರಣಗಳು ಈಚೆಗೆ ಹೆಚ್ಚಾಗಿರುವುದು ಸರ್ಕಾರ ಗಮನ ಹರಿಸಲೇಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿವೆ.
ನಾಲ್ಕು ದಿನಕ್ಕೆ ಒಂದಾನೆ ಸಾವು, ಭಾರತದಲ್ಲೇ ಹೀಗಾದ್ರೆ ಹೇಗೆ?
ಕರ್ನಾಟಕದಲ್ಲಿ ಕಳೆದ ಒಂದೇ ತಿಂಗಳಿನಲ್ಲಿ ವಿದ್ಯುತ್ ಆಘಾತದಿಂದಾಗಿ ನಾಲ್ಕು ಆನೆಗಳು ಸಾವನ್ನಪ್ಪಿರುವ ಸಂಗತಿ ಇದಕ್ಕೆ ಸಾಕ್ಷ್ಯ ಎನ್ನುವಂತಿದೆ. ಜಮೀನು, ತೋಟಗಳಿಗೆ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವುದು, ವಿದ್ಯುತ್ ಲೈನ್ ಗಳ ಅಸಮರ್ಪಕ ನಿರ್ವಹಣೆ ಈ ರೀತಿ ಅನ್ಯಾಯವಾಗಿ ಆನೆಗಳು ಜೀವ ಕಳೆದುಕೊಳ್ಳಲು ಮುಖ್ಯ ಕಾರಣಗಳಾಗಿವೆ. ಎಷ್ಟೇ ಕಡಿವಾಣ ಹಾಕಿದರೂ, ಜಾಗೃತಿ ಮೂಡಿಸಿದರೂ ಇನ್ನೂ ಇಂಥ ಸಂಗತಿಗಳು ನಡೆಯುತ್ತಿರುವುದು ವಿಷಾದನೀಯವಾಗಿದೆ.
ಒಂದೇ ತಿಂಗಳಲ್ಲಿ ನಾಲ್ಕು ಆನೆಗಳ ಸಾವು
ಆಗಸ್ಟ್ ಒಂದೇ ತಿಂಗಳಲ್ಲಿ ವಿದ್ಯುತ್ ಆಘಾತದಿಂದಾಗಿ ನಾಲ್ಕು ಆನೆಗಳು ಸಾವನ್ನಪ್ಪಿರುವ ವರದಿಯಾಗಿದೆ. ಚಿಕ್ಕಮಗಳೂರಿನ ಕಡೂರು ವ್ಯಾಪ್ತಿಯಲ್ಲಿ ಒಂದು ಆನೆ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಒಂದು ಆನೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯುತ್ ತಂತಿ ತುಳಿದು ಎರಡು ಆನೆಗಳು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅಕ್ರಮ ವಿದ್ಯುತ್ ಸಂಪರ್ಕ ಆನೆಗಳ ಜೀವವನ್ನು ಬಲಿ ಪಡೆಯುವುದು ಮುಂದುವರೆಯುತ್ತಲೇ ಇದೆ.
ಕಾಡಂಚಿನ ಪ್ರದೇಶಗಳಲ್ಲಿಸಾವನ್ನಪ್ಪುವ ಆನೆಗಳು
ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ (ಸೆಸ್ಕ್) ಹಾಗೂ ಮಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ಈ ರೀತಿ ವಿದ್ಯುತ್ ಆಘಾತದಿಂದ ಆನೆಗಳು ಸಾವನ್ನಪ್ಪುವ ಸಂಗತಿಗಳು ಕಂಡುಬರುತ್ತಿವೆ.
ರಾಜ್ಯದಲ್ಲಿ ಸೆಸ್ಕ್ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಆನೆಗಳ ಜನಸಂಖ್ಯೆ ಹೆಚ್ಚಿದೆ. ಚಾಮರಾಜನಗರದಿಂದ ಮಡಿಕೇರಿವರೆಗೆ, ಅರಣ್ಯ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟ, ಕಾವೇರಿ ವನ್ಯಧಾಮ ಮತ್ತು ಮಲೆ ಮಹದೇಶ್ವರ ವನ್ಯಧಾಮ ಪ್ರದೇಶಗಳು ಆನೆಗಳಿಗೆ ಪ್ರಶಸ್ತವೂ ಆಗಿದೆ. ಆದರೆ ಈ ಕಾಡಂಚಿನ ಪ್ರದೇಶಗಳಲ್ಲಿಯೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಆನೆಗಳು ಸಾವನ್ನಪ್ಪುತ್ತಿವೆ.
ಆನೆಗಳ ಸಾವಿಗೆ ಕಾರಣ ಏನು?
ಕಾಡಂಚಿನ ಗ್ರಾಮಗಳಲ್ಲಿ, ಕಾಡಿನ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವು ರೈತರು ತಮ್ಮ ಜಮೀನುಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರುತ್ತಾರೆ. ಹೀಗಾಗಿ ಕಾಡಿನಿಂದ ನಾಡಿನತ್ತ ಬರುವ ಆನೆಗಳು ಈ ವಿದ್ಯುತ್ ತಂತಿಗಳನ್ನು ತುಳಿದು ಸಾವನ್ನಪ್ಪುತ್ತವೆ. ಈ ರೀತಿ ಜಮೀನುಗಳಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಆನೆಗಳು ಸಾಯುವ ಪ್ರಮಾಣ ಹೆಚ್ಚಿದೆ. ಆದರೆ ಕೆಲವು ಪ್ರಕರಣಗಳಲ್ಲಿ, ಉದಾಹರಣೆಗೆ ಸುಬ್ರಹ್ಮಣ್ಯ ವ್ಯಾಪ್ತಿಯ ಪ್ರದೇಶದಲ್ಲಿ, ಮೀಸಲು ಅರಣ್ಯದಲ್ಲೇ ವಿದ್ಯುತ್ ತಂತಿ ತಗುಲಿ ಆನೆಯೊಂದು ಸಾವನ್ನಪ್ಪಿತ್ತು. ಹಣ್ಣನ್ನು ಕಿತ್ತಲು ಕೊಂಬೆಯನ್ನು ಮುಟ್ಟಿದಾಗ ವಿದ್ಯುತ್ ತಂತಿ ತಗುಲಿ ಆನೆ ಸಾವನ್ನಪ್ಪಿತ್ತು.
Recommended Video
ಆನೆ ಸಾವನ್ನು ತಡೆಗಟ್ಟುವುದಾದರೂ ಹೇಗೆ?
ಕೆಲ ಮೂಲದ ಪ್ರಕಾರ, 2008ರಿಂದ ಸುಮಾರು ನೂರಕ್ಕೂ ಹೆಚ್ಚು ಆನೆಗಳು ವಿದ್ಯುತ್ ಶಾಕ್ ನಿಂದಲೇ ಸಾವನ್ನಪ್ಪಿವೆ. ಹೀಗಾಗಿ ಈ ಆನೆಗಳ ಸಾವನ್ನು ತಡೆಯಲು ಆನೆಗಳು ಹೊರಹೋಗದಂತೆ ಅರಣ್ಯಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಅರಣ್ಯದ ಗಡಿಗಳನ್ನು ಬಂದೋಬಸ್ತ್ ಮಾಡುವಂತೆ ಹಾಗೂ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ರೈತರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ವನ್ಯಜೀವಿ ಪ್ರೇಮಿಗಳು ಸಲಹೆ ನೀಡಿದ್ದಾರೆ. ಇವಿಷ್ಟೇ ಅಲ್ಲದೇ ವಿದ್ಯುತ್ ಸರಬರಾಜು ಮಂಡಳಿಗಳು ವಿದ್ಯುತ್ ಲೈನ್ ಗಳನ್ನು ಆಗಾಗ್ಗೆ ಪರೀಕ್ಷಿಸುವುದೂ ಅಗತ್ಯವಾಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಾದ ಮಡಿಕೇರಿ, ಸಕಲೇಶಪುರ ಮುಂತಾದೆಡೆ ವಿದ್ಯುತ್ ತಂತಿಗಳು ನೇತಾಡುತ್ತಿದ್ದರೆ ಸಾರ್ವಜನಿಕರೂ ಇಲಾಖೆಯ ಗಮನಕ್ಕೆ ತರಬೇಕಿದೆ.