ವಿಪರ್ಯಾಸ! ರಾಜ್ಯದ 4 ಖಡಕ್ ಐಪಿಎಸ್ ಅಧಿಕಾರಿಗಳು ಕೇಂದ್ರದ ಸೇವೆಗೆ?
ರಾಜ್ಯ ಪೊಲೀಸ್ ಇಲಾಖೆಯ ಖಡಕ್ ಮತ್ತು ಪ್ರಾಮಾಣಿಕ ಅಧಿಕಾರಿಗಳೆಂದೇ ಗುರುತಿಸಲ್ಪಟ್ಟಿರುವ ನಾಲ್ವರು ಐಪಿಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ಏಪ್ರಿಲ್ ಒಂದರಿಂದ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಬೆಂಗಳೂರು, ಮಾ 14: ಪೊಲೀಸ್ ಇಲಾಖೆಯ ಅತ್ಯಂತ ಖಡಕ್ ಅಧಿಕಾರಿಗಳೆಂದೇ ಗುರುತಿಸಲ್ಪಟ್ಟಿರುವ ನಾಲ್ಕು ಐಪಿಎಸ್ ಅಧಿಕಾರಿಗಳು, ಕೇಂದ್ರದ ಸೇವೆಗೆ ತೆರಳಲು ಸಜ್ಜಾಗಿದ್ದಾರೆ.
ಕೇಂದ್ರ ಗೃಹ ಸಚಿವಾಲಯ, ಕರ್ನಾಟಕದ ನಾಲ್ಕು ಅಧಿಕಾರಿಗಳ 'ಕೇಂದ್ರದ ಸೇವೆ'ಗೆ ಅನುಮತಿ ನೀಡುವ ಮೂಲಕ, ಪ್ರಾಮಾಣಿಕ ಅಧಿಕಾರಿಗಳ ಸೇವೆಯಿಂದ ರಾಜ್ಯ ವಂಚಿತವಾಗಲಿದೆ.
ಲೋಕಾಯುಕ್ತದ ಭ್ರಷ್ಟಾಚಾರ, ಪಿಯುಸಿ ಪ್ರಶ್ನೆ ಪತ್ರಿಕೆ ಲೀಕ್ ಮುಂತಾದ ಹಗರಣದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಸೋನಿಯಾ ನಾರಂಗ್, ಕೇಂದ್ರ ಸೇವೆಗೆ ತೆರಳುತ್ತಿರುವ ನಾಲ್ವರ ಪೈಕಿ ಒಬ್ಬರು.
ಸೋನಿಯಾ ನಾರಂಗ್, ಮತ್ತೊಂದು ಸವಾಲಿನ ಹುದ್ದೆಯಾಗಿರುವ ಎನ್ಐಎ (National Investigation Agency) ತಂಡಕ್ಕೆ ಏಪ್ರಿಲ್ ಒಂದರಿಂದ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಹಾಲೀ, ಸಿಸಿಬಿಯಲ್ಲಿ ಡಿಸಿಪಿಯಾಗಿ ಕೆಲಸ ನಿರ್ವಹಿಸುತ್ತಿರುವ ಕೌಶಲೇಂದ್ರ ಕುಮಾರ್ ಮತ್ತು ಬೆಂಗಳೂರು ಉತ್ತರ ಭಾಗದ ಡಿಸಿಪಿ, ಜೊತೆಗೆ ದಕ್ಷ ಅಧಿಕಾರಿಯೆಂದೇ ಜನಸಾಮಾನ್ಯರಿಂದ ಗುರುತಿಸಲ್ಪಟ್ಟಿರುವ ಲಾಭೂರಾಮ್, ಕೇಂದ್ರ ಗುಪ್ತಚರ ಇಲಾಖೆಗೆ ವರ್ಗಾವಣೆಯಾಗಲಿದ್ದಾರೆ ಎನ್ನುವ ಮಾಹಿತಿಯಿದೆ.
ಪಟ್ಟಿಯಲ್ಲಿರುವ ನಾಲ್ವರು ಐಪಿಎಸ್ ಅಧಿಕಾರಿಗಳ ಪೈಕಿ ಇರುವ ಇನ್ನೊಂದು ಹೆಸರು ಮಧುಕರ್ ಶೆಟ್ಟಿ, ಇವರೂ ಕೂಡಾ ಕೇಂದ್ರ ತರಬೇತಿ ಇಲಾಖೆಗೆ ನಿಯೋಜನೆಗೊಳ್ಳುವ ಸಾಧ್ಯತೆಯಿದೆ.