ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಟ್ರೆಕ್ಕಿಂಗ್, ನಾಲ್ವರ ಬಂಧನ
ಚಾಮರಾಜನಗರ, ಜುಲೈ 11 : ಪೂರ್ವಾನುಮತಿ ಇಲ್ಲದೆ ಚಾರಣ ಮಾಡುವುದನ್ನು ನಿಷೇಧಿಸಲಾಗಿದ್ದರೂ ಮಲೆಮಹದೇಶ್ವರ ವನ್ಯಜೀವಿ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಟ್ರೆಕ್ಕಿಂಗ್ ಮಾಡುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕುರಟ್ಟಿ ಹೊಸೂರು ಗ್ರಾಮದ ಚೆನ್ನಬಸವಣ್ಣ, ಈತನ ಸಹೋದರ ಪಾಂಡುರಂಗ, ಅಡ್ವೆಂಚರ್ ಸಮ್ನ ಕೋಆರ್ಡಿನೇಟರ್ ಪ್ರಶಾಂತ ಮತ್ತು ಚಾಲಕ ಅನಿಲ ಬಂಧಿತರು.
ಪ್ರಶಾಂತ ಎಂಬಾತ ಅಡ್ವೆಂಚರ್ ಸಮ್ ಎಂಬ ವೆಬ್ ನಿರ್ಮಾಣ ಮಾಡಿ ಅದರಲ್ಲಿ ಬಿ.ಆರ್.ಹಿಲ್ಸ್ ನೈಟ್ ಕ್ಯಾಂಪ್ ಮತ್ತು ಫಾಲ್ಸ್ ಟ್ರೆಕ್ಕಿಂಗ್ ಬಗ್ಗೆ ಪ್ರಕಟಣೆ ನೀಡಿದ್ದ. ಒಂದಷ್ಟು ಶುಲ್ಕ ಪಡೆದು ಚಾರಣಕ್ಕಾಗಿ ಒಂದಷ್ಟು ಜನರನ್ನು ಕರೆದುಕೊಂಡು ಬಂದಿದ್ದನು. [ಚಾರಣಿಗರನ್ನೂ, ಆಸ್ತಿಕರನ್ನೂ ಸೆಳೆಯುವ ಕುಂದಬೆಟ್ಟ]
ಆದರೆ ಈ ಚಾರಣಕ್ಕೆ ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯದೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ವನ್ಯಜೀವಿ ವಲಯದ ಕೌದಳ್ಳಿ ಶಾಖೆಯ ಕುರಟ್ಟಿಹೊಸೂರು ಗಸ್ತಿನ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ್ದರು.
ಇವರು ಅರಣ್ಯವನ್ನು ಅತಿಕ್ರಮಿಸಿ ಟ್ರೆಕ್ಕಿಂಗ್ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಬಿ.ಆರ್.ಟಿ.ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜುರ ನೇತೃತ್ವದಲ್ಲಿ ಬೈಲೂರು ವಲಯದ ಮಂಜುನಾಥ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜೆ.ಚಂದ್ರ, ಆರ್ಎಫ್ಓಗಳಾದ ಪ್ರಕಾಶ್, ಲೋಕೇಶ್, ಸೋಮಪ್ಪ ಹಾಗೂ ರಾಜೇಂದ್ರ ಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದರು. [ಚಾರಣಿಗರ ಕೈಬೀಸಿ ಕರೆಯುವ ಕೊಡಗಿನ ಭತ್ತದರಾಶಿ ಬೆಟ್ಟ]
ಬೆಂಗಳೂರಿನಿಂದ ಬಂದಿದ್ದ ಟೆಂಪೋ ಟ್ರಾವೆಲರ್ ಸಮೇತ 20 ಜನರನ್ನು ವಶಕ್ಕೆ ತೆಗೆದುಕೊಂಡು, ಅದರಲ್ಲಿ ನಾಲ್ವರನ್ನು ಮಾತ್ರ ಬಂಧಿಸಿ ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಉಳಿದವರಿಂದ ಹೇಳಿಕೆ ಪಡೆದುಕೊಂಡು ಬಿಡುಗಡೆಗೊಳಿಸಲಾಗಿದೆ. ಆರೋಪಿಗಳು ಟ್ರೆಕ್ಕಿಂಗ್ ಅಲ್ಲದೆ ಚೆನ್ನಪ್ಪಶೆಟ್ಟಿಯವರ ಜಮೀನಿನಲ್ಲಿ ಕ್ಯಾಂಪ್ ಫೈರ್ ನಡೆಸಲು ಸಿದ್ಧತೆ ನಡೆಸಿದ್ದರು.
ಆರೋಪಿಗಳನ್ನು ಕೊಳ್ಳೇಗಾಲದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದ್ದಾರೆ. [ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು]