ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಬೇಡ: ರಾಜ್ಯಾದ್ಯಂತ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಬೆಂಗಳೂರು, ಜೂನ್ 10: 2013ರ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಮತ್ತು ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ರೈತರು ರಾಜ್ಯಾದ್ಯಂತ ಹೆದ್ದಾರಿ ತಡೆದು ಪ್ರತಿಭಟನೆ ಆರಂಭಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿದೆ. ಭೂಸ್ವಾಧೀನ ಕಾಯ್ದೆಯಿಂದ ಉದ್ದಿಮೆದಾರರಿಗೆ ಹಣವಂತರಿಗೆ ಮತ್ತು ರಿಯಲ್ ಎಸ್ಟೇಟ್ ದಾರರಿಗೆ ಅನುಕೂಲವಾಗುತ್ತಿದೆ.
ಸೋಮವಾರ ರೈತ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆ
ಕುಮಾರಸ್ವಾಮಿ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ಸರಿಯಲ್ಲ. ಅಧಿಕಾರದ ಆಸೆಗೆ ಕಾಂಗ್ರೆಸ್ನವರೂ ಕೂಡ ತಿದ್ದುಪಡಿ ಬಗ್ಗೆ ಚಕಾರ ಎತ್ತುತ್ತಿಲ್ಲ, ತಿದ್ದುಪಡಿ ಕೈಬಿಡಬೇಕೆಂಬ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಹಕಾರ ಬ್ಯಾಂಕುಗಳಲ್ಲಿ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಲಾಗಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿರುವ ರೈತರ ಬವಣೆ ಕೇಳುವವರಿಲ್ಲವಾಗಿದೆ. ರೈತರಿಗೆ ನಿರಂತರ ನೋಟಿಸ್ ಬರುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿಯ ಕೆಂಪೇಗೌಡ ವೃತ್ತ, ಆನೇಕಲ್ ಬಳಿಯ ಬೊಮ್ಮಸಂದ್ರ, ಚಿಕ್ಕಬಳ್ಳಾಪುರದ ಚದ್ಲಾಪುರ ಕ್ರಾಸ್ನಲ್ಲಿ ರೈತ ಸಂಘಟನೆಗಳ ಸದಸ್ಯರು ಬೆಳಗ್ಗೆ 6ಗಂಟೆಯಿಂದಲೇ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೈಸೂರಿನಿಂದ ಮಂಗಳೂರಿಗೆ ಹೋಗುವ ಹುಣಸೂರು ಮಾರ್ಗದ ಹೆದ್ದಾರಿ; ಮೈಸೂರಿನಿಂದ ಚಾಮರಾಜನಗರ ಮಾರ್ಗದ ಕೊಯಮತ್ತೂರು ಹೆದ್ದಾರಿ; ರಾಯಚೂರಿನ ಶಕ್ತಿನಗರ, ಕಲಬುರ್ಗಿಯ ಜೀವರ್ಗಿ ಬಳಿಯ ಹೆದ್ದಾರಿಗಳು ಆಗಿವೆ.
ಹಾಗೆಯೇ, ಹಾವೇರಿಯ ದೇವಗಿರಿ ಕ್ರಾಸ್ನ ಪೂನಾ ರಾಷ್ಟ್ರೀಯ ಹೆದ್ದಾರಿ 4; ಹಾಸನದ ಭುವನಹಳ್ಳಿ ಸಮೀಪದ ಬೆಂಗಳೂರು-ಮಂಗಳೂರು ರಾ. ಹೆದ್ದಾರಿ 72ರಲ್ಲಿ ರೈತರು ರಸ್ತೆ ತಡೆ ನಡೆಸಿದ್ದಾರೆ.
ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಬಳಿಯ ಹೆದ್ದಾರಿ; ಬೆಳಗಾವಿಯ ಹಲಗಾ ಗ್ರಾಮದಲ್ಲಿರುವ ಹೆದ್ದಾರಿ; ಬಳ್ಳಾರಿಯ ಟಿಬಿ ಡ್ಯಾಮ್, ಕಲಬುರ್ಇಯ ಗುತ್ತಿ; ರಾಯಚೂರಿನ ವಡ್ಲೂರು ಕ್ರಾಸ್, ಕೋಲಾರದ ಕೊಂಡರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.