ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಸಿಟಿ ರವಿ ಹೀಗಾ ಹೇಳೋದು?
Recommended Video
ಬೆಂಗಳೂರು, ಆ 2: ಮಾಜಿ ಸ್ಪೀಕರ್, ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರನ್ನು ಬಿಜೆಪಿ ಮುಖಂಡ ಸಿ ಟಿ ರವಿ 'ಬಾವಿಯೊಳಗಿನ ಕಪ್ಪೆಯಂತೆ' ಎಂದು ಲೇವಡಿ ಮಾಡಿದ್ದಾರೆ.
ರಮೇಶ್ ಕುಮಾರ್ ಬಗ್ಗೆ ಟ್ವೀಟ್ ಮಾಡಿರುವ ರವಿ, 'ಕಾಂಗ್ರೆಸ್ಸಿನ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಾವಿಯೊಳಗಿನ ಕಪ್ಪೆಯಂತೆ. ಅವರ ಹೇಳಿಕೆ ಯಾವತ್ತೂ, ನೆಹರೂ, ಇಂದಿರಾ, ರಾಜೀವ್, ಸೋನಿಯಾ ಮತ್ತು ರಾಹುಲ್ ಗಾಂಧಿಯವರಿಗೆ ಮಾತ್ರ ಸೀಮಿತವಾಗಿರುತ್ತದೆ'.
ಹೊಸ ಸ್ಪೀಕರ್ಗೆ ಸದನದಲ್ಲಿ ಪಾಠ ಮಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
'ಆ ಜಗತ್ತಿನಿಂದ ಹೊರಬಂದು, ಬಲಾಢ್ಯ ದೇಶ ಕಟ್ಟುವ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡುಗೆಯೇನು ಎನ್ನುವುದನ್ನು ಮೊದಲು ಅರಿತುಕೊಳ್ಳಲಿ' ಎಂದು ಸಿ ಟಿ ರವಿ, ರಮೇಶ್ ಕುಮಾರ್ ಅವರಿಗೆ ಸಲಹೆಯನ್ನು ನೀಡಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಮತ್ತೆ ಪಡೆದು ಮಾತನಾಡುತ್ತಾ, 'ಕೋಮುವಾದಿ ಪಕ್ಷವನ್ನು ಎದುರಿಸಲು ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಎಲ್ಲಾ ಕೇಸರಿಕರಣವಾದರೆ ಮತ್ತಷ್ಟು ಕಷ್ಟ ಎದುರಾಗುತ್ತದೆ. ಮೋದಿ, ಶಾ ಎಲ್ಲಾ ಸಂಸ್ಥೆಗಳಿಗೆ ಕೈ ಹಾಕಿದ್ದಾರೆ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತಿದ್ದಾರೆ" ಎಂದು ದೂರಿದ್ದರು.
ಇದಲ್ಲದೇ, ಹೊಸ ಸ್ಪೀಕರ್ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಾ ರಮೇಶ್ ಕುಮಾರ್, ' ಕೆ.ಬಿ.ಹೆಡಗೆವಾರ್ ಅವರು ಹಿಂದುತ್ವದ ಆಧಾರದಲ್ಲಿ ಭಾರತ ಇರಬೇಕು ಎಂದು ವಾದಿಸಿ ಆರ್ಎಸ್ಎಸ್ ಅನ್ನು ಸ್ಥಾಪನೆ ಮಾಡಿದರು, ಆದರೆ ಭಾರತವು ಸಮಾನತೆಯ ಆಧಾರದಲ್ಲಿ ನಿರ್ಮಾಣವಾಗಬೇಕು ಎಂದು ಅಂಬೇಡ್ಕರ್ ಅವರ ವಾದವಾಗಿತ್ತು, ಸಂವಿಧಾನದ ಆಶಯವೂ ಅದೇ ಆಗಿದೆ' ಎಂದು ಹೇಳಿದ್ದರು.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿ.ಟಿ ರವಿ ಆಯ್ಕೆ ಖಚಿತ!
'ನಿಮ್ಮ (ಕಾಗೇರಿ) ವೈಚಾರಿಕ ಹಿನ್ನಲೆ ಚಾತುವರ್ಣವನ್ನು ಸಮರ್ಥಿಸುವಂತಿದೆ, ಮನುಸ್ಮೃತಿಯನ್ನು ಸಮರ್ಥಿಸಿರುವ ಸಂಘದ ಹಿನ್ನೆಲೆಯೂ ನಿಮಗೆ ಇದೆ, ಆದರೆ ನೀವು ಕೂತಿರುವ ಪೀಠದ ಮೇಲೆ ತಕ್ಕಡಿ ಇದೆ'.
'ಇಲ್ಲಿ ಸಮಾನತೆಯೊಂದೇ ನಿಮ್ಮ ಗುರಿ ಆಗಿರಬೇಕು, ಸಂವಿಧಾನವೇ ನಿಮಗೆ ಎಲ್ಲವೂ ಆಗಬೇಕಿದೆ ಹಾಗಾಗಿ ಮನುಸ್ಮೃತಿಯ ವೈಚಾರಿಕತೆಯಿಂದ ಹೊರಗೆ ಬಂದು, ಹೊಸ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಂವಿಧಾನಕ್ಕೆ ಮಾತ್ರವೇ ನಿಷ್ಠೆ ತೋರಿ' ಎಂದು ರಮೇಶ್ ಕುಮಾರ್, ಸ್ಪೀಕರ್ ಕಾಗೇರಿಯವರಿಗೆ ಸಲಹೆಯನ್ನು ನೀಡಿದ್ದರು. ಸಿ ಟಿ ರವಿ, ಇದನ್ನು ಉಲ್ಲೇಖಿಸುತ್ತಾ, ರಮೇಶ್ ಕುಮಾರ್ ಬಗ್ಗೆ ಈ ಮೇಲಿನ ಟ್ವೀಟ್ ಅನ್ನು ಮಾಡಿದ್ದಾರೆ.