ಕೊರೊನಾ: ಮೋದಿ ಕುರುಡು ಹಿಂಬಾಲಕರಿಗೆ ಸ್ವಲ್ಪವಾದರೂ ಕಣ್ಣು ತೆರೆಸಿದೆ
ಬೆಂಗಳೂರು, ಮೇ 16: ಮಾಜಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ಕೇಂದ್ರ ಸರಕಾರ ಕೊರೊನಾ ನಿಯಂತ್ರಿಸಿದ ರೀತಿ ಮತ್ತು ವಿಶೇಷ ಪ್ಯಾಕೇಜ್ ಬಗ್ಗೆ ಲೇವಡಿ ಮಾಡಿದ್ದಾರೆ. ಜೊತೆಗೆ, ಪ್ರಧಾನಿಗಳ ಹಿಂಬಾಲಕರಿಗೂ ಚಾಟಿ ಬೀಸಿದ್ದಾರೆ.
Recommended Video
ಈ ಬಗ್ಗೆ ಟ್ವೀಟ್ ಮಾಡಿರುವ ಮಹಾದೇವಪ್ಪ,"ಕೊರೊನಾ ಸಂದರ್ಭವು ರಾಜಕೀಯ ಮತ್ತು ಸಾಮಾಜಿಕ ವಲಯದ ಬಹಳಷ್ಟು ಭ್ರಮೆಗಳಿಗೆ ಕಡಿವಾಣ ಹಾಕಿದ್ದು ಸದಾ ಪ್ರಚಾರದಲ್ಲೇ ಮುಳುಗಿದ್ದ ಪ್ರಧಾನಿಗಳ ಕುರುಡು ಹಿಂಬಾಲಕರಿಗೆ ಸ್ವಲ್ಪವಾದರೂ ಕಣ್ಣು ತೆರೆಸಿದೆ" ಎಂದು ಹೇಳಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ, "ಅಂಬೇಡ್ಕರ್ ವಾದಿ ಹಾಗೂ ಭಾರತ ಕಂಡ ಅಪರೂಪದ ಚಿಂತಕ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿ ತಿಂಗಳಾಗುತ್ತಾ ಬಂತು. ತಮ್ಮ ಚಿಂತನೆಗಳ ಮೂಲಕ ಪ್ರಭುತ್ವದ ಅನ್ಯಾಯಗಳನ್ನು ಪಕ್ಷಾತೀತವಾಗಿ ಖಂಡಿಸುತ್ತಿದ್ದ ಇವರ ಬಂಧನವು ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೀಸಿದ ಕೊಡಲಿ ಏಟಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಇವರನ್ನು ಬಿಡುಗಡೆ ಮಾಡಲಿ" ಎಂದು ಮಹಾದೇವಪ್ಪ ಆಗ್ರಹಿಸಿದ್ದಾರೆ.
ಈ ಹಿಂದೆ, "ಈ ಕರೋನಾ ಸಂಕಷ್ಟದ ವೇಳೆ ರಾಜ್ಯದ ಜನರನ್ನು ಕಾಪಾಡುತ್ತಿರುವುದು @siddaramaiah ನೇತೃತ್ವದ @INCKarnataka ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾದ ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ & ಇಂದಿರಾ ಕ್ಯಾಟೀನ್ ಯೋಜನೆಯೇ ವಿನಃ @narendramodi ಅವರ ಚಪ್ಪಾಳೆಯಾಗಲೀ, ದೀಪ ಬೆಳಗುವ ಹುಸಿ ಪ್ರಚಾರವಾಗಲೀ ಅಲ್ಲ" ಎಂದು ಟ್ವೀಟ್ ಮಾಡಿದ್ದರು.
"ಗುಲಾಮಗಿರಿಯನ್ನು ಹೆಚ್ಚು ಆನಂದಿಸುವ ಮತ್ತು ಶೋಷಣೆಯಲ್ಲಿ ಹೆಚ್ಚು ನಂಬಿಕೆಯಿಟ್ಟ ಮನುವಾದಿ ಪರಂಪರೆಯ ಮುಂದುವರೆದ ಕೆಟ್ಟ ಶಕ್ತಿಗಳು ಇಂದು ದೇಶವನ್ನು ಕಟ್ಟಲು ಬದುಕನ್ನು ಮುಡುಪಾಗಿಟ್ಟ ಮಹನೀಯರ ಮೌಲ್ಯಗಳಿಗೆ ಮಸಿ ಬಳಿಯುತ್ತಿವೆ" ಎನ್ನುವ ಟ್ವೀಟ್ ಅನ್ನೂ ಮಹಾದೇವಪ್ಪ ಮಾಡಿದ್ದರು.
"ದೇಶದ ಆಂತರಿಕ ವ್ಯವಸ್ಥೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆಯೇ ಇಲ್ಲದ ಪ್ರಧಾನಿ @narendramodi ಹೇಳುತ್ತಿರುವ ವಿಶ್ವಗುರು ಎಂಬ ಪದವು "ಊರ ಮುಂದೆ ನರ್ತನೆ ಮನೆಯ ಒಳಗೆ ರೋಧನೆ" ಎನ್ನುವಂತೆ ಆಗಿದೆ. ಜನರನ್ನು ರಸ್ತೆಗಳಲ್ಲೇ ಅರ್ಥವಿಲ್ಲದ ಸಾವು ಸಂಭವಿಸುವಂತೆ ಮಾಡುವ ದೇಶ ಇವರು ವಿಶ್ವಗುರು ಎನ್ನುವುದು ಹಾಸ್ಯಾಸ್ಪದ ಸಂಗತಿಯಲ್ಲಿ ಒಂದು" ಇದು ಡಾ. ಮಹಾದೇವಪ್ಪ ಮಾಡಿದ್ದ ಟ್ವೀಟ್.