ಮಾಜಿ ಪ್ರಧಾನಿ ದೇವೇಗೌಡರ ಎಚ್ಚರಿಕೆಗೆ ಮಣಿದ ಸಿಎಂ ಬಿಎಸ್ವೈ!
ಬೆಂಗಳೂರು, ಜೂ. 28: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಎಚ್ಚರಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಮಣಿದಿದ್ದಾರೆ. ಇದೇ ಸೋಮವಾರ (ಜೂನ್ 29) ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದ ಎದುರು ಧರಣಿ ಸತ್ಯಾಗ್ರಹ ಮಾಡುವ ಎಚ್ಚರಿಕೆಯನ್ನು ಕೊಟ್ಟಿದ್ದರು. ಆದರೆ ಇದೀಗ ಯಡಿಯೂರಪ್ಪ ಅವರ ಮನೆಯ ಎದುರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದ್ದೇನೆಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಅವರು ಬೇಡಿಕೆ ಈಡೇರಿಸಿದ್ದರಿಂದ ಧರಣಿ ಕೈಬಿಡಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದ್ದಾರೆ. ದೇವೇಗೌಡರು ಧರಣಿಯಿಂದ ಹಿಂದೆ ಸರಿದಿದ್ದರೆ, ಮತ್ತೊಂದೆಡೆ ಮಾಜಿ ಸಚಿವ, ದೇವೇಗೌಡರ ಪುತ್ರ ಎಚ್.ಡಿ. ರೇವಣ್ಣ ಅವರು ಇದೀಗ ಸಿಎಂ ನಿವಾಸದ ಎದುರು ಧರಣಿ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟಿದ್ದಾರೆ.
ಹೋರಾಟ ಕೈಬಿಟ್ಟ ದೇವೇಗೌಡರು
ಜೂನ್ 29ರಂದು ಸಿಎಂ ಯಡಿಯೂರಪ್ಪ ಅವರ ಮನೆ ಎದುರು ಧರಣಿಗೆ ನಿರ್ಧರಿಸಿದ್ದ ದೇವೇಗೌಡ ಅವರು ಹೋರಾಟ ಕೈಬಿಟ್ಟಿದ್ದಾರೆ. ಮಂಡ್ಯ ಜಿಲ್ಲಾ ಪಂಚಾಯಿತಿ ಜೆಡಿಎಸ್ ಎಚ್.ಟಿ. ಮಂಜು ಎಂಬುವರಿಗೆ ಸೇರಿದ್ದ ಗಣಿಗಾರಿಕೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟಿದ್ದರು. ಅದರೊಂದಿಗೆ ಜಿಲ್ಲೆಯಲ್ಲಿ ದ್ವೇಷ, ವೈಷಮ್ಯದ ರಾಜಕಾರಣ ಆರೋಪವನ್ನೂ ಅವರು ಮಾಡಿದ್ದರು.
ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ದೇವೇಗೌಡ್ರ ಧರಣಿ
ಇದೀಗ ಫೇಸ್ಬುಕ್ ಹಗೂ ಟ್ವಿಟ್ಟರ್ ಮೂಲಕ ಧರಣಿ ಹಿಂಪಡೆದ ಮಾಹಿತಿಯನ್ನು ದೇವೇಗೌಡರು ಕೊಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಭಾಗಶಃ ನಮ್ಮ ಬೇಡಿಕೆಗಳನ್ನ ಒಪ್ಪಿದ್ದಾರೆ. ಆದ್ದರಿಂದ ಧರಣಿ ಹಿಂಪಡೆಯಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ, ಡಿಸಿಎಂ ಡಾ. ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ತಮ್ಮ ಸ್ಪಷ್ಟನೆಯನ್ನು ಟ್ಯಾಗ್ ಮಾಡಿದ್ದಾರೆ.
ಕಲ್ಲು ಗಣಿಗಾರಿಕೆಗೆ ಅನುಮತಿ
ಮಾಜಿ ಪ್ರಧಾನಿ ದೇವೇಗೌಡರ ಹೋರಾಟಕ್ಕೆ ಮಣಿಯದೇ ಬೇರೆ ದಾರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇರಲಿಲ್ಲ. ಹೀಗಾಗಿ ದೇವೇಗೌಡರ ಹೋರಾಟದ ಎಚ್ಚರಿಕೆಗೆ ಮಣಿದ ರಾಜ್ಯ ಸರ್ಕಾರ ಕಡೆಗೂ ಕಲ್ಲು ಗಣಿಗಾರಿಕೆಗೆ ಅನುಮತಿ ಕೊಟ್ಟಿದೆ. ಮಂಡ್ಯ ಜಿಲ್ಲೆ ಜೆಡಿಎಸ್ ಜಿಪಂ ಸದಸ್ಯ ಎಚ್.ಟಿ.ಮಂಜು ಅವರು ಮಾಡುತ್ತಿದ್ದ ಗಣಿಗಾರಿಕೆಗೆ ಸರ್ಕಾರ ಅನುಮತಿ ಕೊಟ್ಟಿದೆ.
ಅನುಮತಿ ನೀಡಿ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ. ಹೈ ಕೋರ್ಟ್ ನಿರ್ದೇಶನದಂತೆ 6 ಷರತ್ತುಗಳನ್ನ ವಿಧಿಸಿ ಗಣಿಗಾರಿಗೆಕೆ ಅನುಮತಿ ನೀಡಿಲಾಗಿದೆ ಎಂದು ತಿಳಿಸಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತ ಎಚ್. ಟಿ. ಮಂಜು ಅವರು ಮಾಡುತ್ತಿದ್ದ ಗಣಿಗಾರಿಕೆಗೆ ಸಚಿವ ನಾರಾಯಣಗೌಡ ತೊಂದರೆ ಕೊಡುತ್ತಿದ್ದಾರೆ ಎಂದು ದೇವೇಗೌಡರು ಆರೋಪ ಮಾಡಿದ್ದರು.
ಗಣಿಗಾರಿಕೆ ಅಕ್ರಮ
ಇನ್ನು ಮಾಜಿ ಪ್ರಧಾನಿ ದೇವೇಗೌಡರ ಧರಣಿ ಸತ್ಯಾಗ್ರಹದ ಎಚ್ಚರಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರು, ಗಣಿಗಾರಿಕೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಒಡೆದಿತ್ತು. ಎಚ್.ಡಿ. ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರದಲ್ಲೇ ಒಂಭತ್ತೂವರೆ ಕೋಟಿ ದಂಡ ವಸೂಲಿಗೆ ಸೂಚಿಸಿತ್ತು. ಕೋಟ್ಯಂತರ ರೂ. ಸಂಪಾದನೆ, ವ್ಯವಹಾರ ಮಾಡ್ತಿದ್ದಾರೆ. ಆದರೂ ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ಕಟ್ಟಿಲ್ಲ. ಅಷ್ಟೆಲ್ಲ ವ್ಯವಹಾರ ಮಾಡೋರಿಗೆ ತೆರಿಗೆ ಪಾವತಿಸೋಕೆ ಆಗಲ್ವಾ? ಅಕ್ರಮ ಗಣಿಗಾರಿಕೆಗೆ ಮಾಜಿ ಪ್ರಧಾನಿಗಳು ಸಹಕಾರ ಕೊಡುತ್ತಾರಾ ಎಂದು ದೇವೇಗೌಡರನ್ನು ಪ್ರಶ್ನೆ ಮಾಡಿದ್ದರು.
ಸರ್, ದಯವಿಟ್ಟು ಧರಣಿ ಬೇಡ: ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ!
ತಮ್ಮದೇ ಸರ್ಕಾರದ ಭಾಗವಾಗಿರುವ ಸಚಿವರೇ ಅಲ್ಲಿ ನಡೆಯುತ್ತಿರುವುದು ಅಕ್ರಮ ಗಣಿಗಾರಿಕೆ ಎಂದು ಹೇಳಿದ್ದಾರೆ. ಆದರೂ ರಾಜ್ಯ ಬಿಜೆಪಿ ಸರ್ಕಾರ ಮತ್ತೆ ಗಣಿಗಾರಿಕೆ ಮಾಡಲು ಅವಕಾಶ ಕೊಟ್ಟಿದೆ ಎಂದರೇ, ಇದರ ಹಿಂದೆ ಕೊಟ್ಟು ತೆಗೆದುಕೊಳ್ಳುವ ರಾಜಕಾರಣವಿದೆ ಎಂದು ಮಂಡ್ಯ ಜಿಲ್ಲೆಯ ಜನರು ಆಡಿಕೊಳ್ಳುತ್ತಿದ್ದಾರೆ.
ಈಗ ಎಚ್.ಡಿ. ರೇವಣ್ಣ ಸರದಿ
ತಮ್ಮ ಹೋರಾಟದಿಂದ ಮಾಜಿ ಪ್ರಧಾನಿ ದೇವೇಗೌಡರು ಹಿಂದೆ ಸರಿದಿದ್ದಾರೆ. ಆದರೆ ಅವರ ಪುತ್ರ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಯಡಿಯೂರಪ್ಪ ನಮೆ ಎದುರು ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಳಿವಯಸ್ಸಿನಲ್ಲಿ ದ್ವೇಷದ ರಾಜಕಾರಣ ಮಾಡಬಾರದು ಎಂದಿರುವ ರೇವಣ್ಣ ಅವರು, ಹಾಸನ ಜಿಲ್ಲೆ ಮೊಸಳೆ ಹೊಸಹಳ್ಳಿ ಸರ್ಕಾರಿ ಎಂಜಿನಿಯರಿಂಗ್ ದ್ವೇಷದ ರಾಜಕಾರಣದಿಂದ ಕಾಲೇಜನ್ನು ಹಾಸನದ ಎಂಜಿನಿಯರ್ ಕಾಲೇಜಿಗೆ ವಿಲೀನಗೊಳಿಸಲು ಹುನ್ನಾರ ನಡೆಸಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಯಾವುದೇ ಕಾರಣಕ್ಕೂ ಕಾಲೇಜು ಇಲ್ಲಿಂದ ಸ್ಥಳಾಂತರ ಆಗಲು ಬಿಡುವುದಿಲ್ಲ. ಕಾಲೇಜು ಮುಚ್ಚಿದರೆ, ಸಿಎಂ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.