ನೆಹರು ಜಾಹೀರಾತು ವಿವಾದ; ಅಮೃತ ಮಹೋತ್ಸವ ಬಹಿಷ್ಕಾರಕ್ಕೆ ಮನವಿ
ಬೆಂಗಳೂರು, ಆಗಸ್ಟ್ 14: ರಾಜ್ಯ ಸರಕಾರ ನೀಡಿರುವ ಜಾಹೀರಾತಿನಲ್ಲಿ ನೆಹರು ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಆಗಸ್ಟ್ 15 ರಂದು ನಡೆಯುವ ರಾಜ್ಯ ಬಿಜೆಪಿ ಸರಕಾರದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಲು ಮಾಜಿ ಎಂಎಲ್ಸಿ ರಮೇಶ್ ಬಾಬು ಮನವಿ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರಕಾರ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನೀಡಿರುವ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಜವಹರಲಾಲ್ ನೆಹರು ಅವರ ಹೆಸರು ಕೈ ಬಿಟ್ಟಿರುವುದಕ್ಕೆ ಭಾರೀ ಆಕ್ರೋಶ ಉಂಟಾಗುತ್ತಿದೆ.
ಜಾಹೀರಾತಿನಲ್ಲಿ ನೆಹರು ಹೆಸರು ಕೈ ಬಿಟ್ಟ ಸರಕಾರ; ಜನರ ಆಕ್ರೋಶ
ಈ ಹಿನ್ನೆಲೆ ಮಾಜಿ ಎಂಎಲ್ಸಿ ರಮೇಶ್ ಬಾಬು, ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ಅಧ್ಯಕ ಡಿ. ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬಹಿರಂಗತ ಪತ್ರ ಬರೆದಿದ್ದಾರೆ.
ಪತ್ರದಲ್ಲಿ' ಯಾವುದೇ ರಾಜಕೀಯ ಪಕ್ಷ ಅಧಿಕಾರ ನಡೆಸುವಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜಧರ್ಮ ಪಾಲಿಸಬೇಕು. ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಚನಕ್ಕೆ ವಿರುದ್ಧವಾಗಿ ಸರಕಾರ ನಡೆಸುವುದು ಲಜ್ಜೆಗೆಡಿತನದ ಪರಮಾವಧಿ' ಎಂದಿದ್ದಾರೆ.
ಮುಂದುವರೆದು "ರಾಜ್ಯ ಬಿಜೆಪಿ ಸರ್ಕಾರ ಈ ದಿನ 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಜಾಹೀರಾತು ನೀಡಿರುತ್ತದೆ. ಈ ಜಾಹೀರಾತಿನಲ್ಲಿ ಸ್ವತಂತ್ರ ಸೇನಾನಿ ಮಾಜಿ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರು ಭಾವಚಿತ್ರ ಮತ್ತು ವಿವರ ಪ್ರಜ್ಞಾ ಪೂರ್ವಕವಾಗಿ ಕೈ ಬಿಡಲಾಗಿದೆ. ಇದು ಈ ದೇಶದ ಸ್ವತಂತ್ರ ಹೋರಾಟಕ್ಕೆ ಮಾಡಿದ ಅತಿ ದೊಡ್ಡ ಅಪಚಾರ. ನೆಹರು ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ. ಇತಿಹಾಸ ತಿರುಚುವ ಸಂಚು" ಎಂದು ಆರೋಪಿಸಿದ್ದಾರೆ.
ಕಾಶ್ಮೀರ ಪಂಡಿತ್ ಕುಟುಂಬದ ನೆಹರು 1912 ರಲ್ಲಿ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದು ಸ್ವತಂತ್ರ ಚಳುವಳಿಯಲ್ಲಿ ತೊಡಗಿಸಿಕೊಂಡರು. ನೆಹರು ಮಹಾತ್ಮಾ ಗಾಂಧೀಜಿಯವರ ಪ್ರತಿ ಹೋರಾಟದ ಭಾಗವಾಗಿದ್ದರು. 1916ರ ಸ್ವದೇಶಿ ಚಳವಳಿ, 1920ರ ಅಸಹಕಾರ ಚಳವಳಿ, 1930 ಉಪ್ಪಿನ ಸತ್ಯಾಗ್ರಹ, 1940 ನಾಗರೀಕ ಅವಿಧೇಯತೆ ಹೋರಾಟ, 1943-45ರ ಜೈಲು ವಾಸದ ಮೂಲಕ ಸ್ವತಂತ್ರ ಚಳವಳಿಯ ಗಾಂಧೀಜಿ ನಂತರದ ಮುಂಚೂಣಿ ನಾಯಕರಾಗಿದ್ದರು ಎಂದು ಹೇಳಿದ್ದಾರೆ.
ಆರು ವರ್ಷ ವಿವಿಧ ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನೆಹರು, 18 ವರ್ಷ ಈ ದೇಶದ ಪ್ರಧಾನಿ ಆಗಿ ದೇಶದ ಉನ್ನತಿಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಅವರ ಪ್ರಗತಿಪರ ಚಿಂತನೆಗಳು ಸಂಸದೀಯ ಮೌಲ್ಯಗಳು ಜನತಂತ್ರದ ಆಶಯಗಳು ಗಾಂಧೀಜಿ ಚಿಂತನೆಗಳೊಂದಿಗೆ ಸಮೀಕರಣಗೊಂಡಿದ್ದು, ಭಾರತ ನಿರಂತರ ಅಭಿರುದ್ಧಿಯತ್ತ ಮುಖ ಮಾಡಲು ಕಾರಣವಾಗಿದೆ. ಇಂತಹ ಮಹಾನ್ ಚೇತನ ಪಂಡಿತ್ ಜವಾಹರ್ ನೆಹರು ಅವರ ಭಾವಚಿತ್ರ ಮತ್ತು ವಿವರಣೆ ಸರ್ಕಾರದ ಜಾಹಿರಾತಿನಲ್ಲಿ ನೀಡದೆ ಬಿಜೆಪಿ ಜನರ ಮುಂದೆ ಬೆತ್ತಲಾಗಿದೆ. ಲಜ್ಜೆಗೆಟ್ಟವರಿಗೆ ಬೆತ್ತಲಾಗುವುದು ಸಾಮಾನ್ಯ ಕ್ರಿಯೆ ಇರಬಹುದು ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಈ ಲಜ್ಜೆಗೇಡಿ ಕೃತ್ಯವನ್ನು ಕಾಂಗ್ರೆಸ್ ಮತ್ತು ನಾಡಿನ ಸಮಸ್ತ ಜನ ಖಂಡಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಸೋಮವಾರ ನಡೆಯುವ ರಾಜ್ಯ ಬಿಜೆಪಿ ಸರ್ಕಾರದ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ಬಹಿಷ್ಕರಿಸಲು ಮನವಿ ಮಾಡುತ್ತೇನೆ. ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಇಡೀ ರಾಜ್ಯದಲ್ಲಿ ಪಕ್ಷದ ವತಿಯಿಂದ 75ನೇ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಕರೆ ನೀಡಿಬೇಕು. ಪಕ್ಷದ ಶಾಸಕರು, ಸಂಸದರು ಸರ್ಕಾರದ ಕಾರ್ಯಕ್ರಮ ಬಹಿಷ್ಕಾರ ಮಾಡಿ ಪಕ್ಷದ ಪ್ರತಿಭಟನೆ ದಾಖಲಿಸಬೇಕಾಗಿ ಮನವಿ ಮಾಡುತ್ತೇನೆ. ಇದು ಈ ಸಂದರ್ಭದ ಅನಿವಾರ್ಯತೆ ಎಂದು ಭಾವಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.