ಅಭಿವೃದ್ಧಿಗೆ ಜನರು ನೀಡಿದ ಗೆಲುವು: ಕೇಜ್ರಿವಾಲ್ಗೆ ದೇವೇಗೌಡರ ಶ್ಲಾಘನೆ
ಬೆಂಗಳೂರು, ಫೆಬ್ರವರಿ 11: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಭಿನಂದಿಸಿದ್ದಾರೆ.
ಮಂಗಳವಾರ ಎಎಪಿ ಗೆಲುವು ಖಚಿತವಾಗುತ್ತಿದ್ದಂತೆಯೇ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ದೇವೇಗೌಡ, ಎಎಪಿ ಸರ್ಕಾರದ ಶ್ರಮವನ್ನು ಶ್ಲಾಘಿಸಿದ್ದಾರೆ.
"ಭಾರತದ 'ಹೃದಯ'ವನ್ನು ಕಾಪಾಡಿದ ಎಲ್ಲರಿಗೂ ಧನ್ಯವಾದ"
'ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಮೂರನೇ ದಿಗ್ವಿಜಯಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನೀವು ಈ ಗೆಲುವಿಗೆ ಬಹಳ ಅರ್ಹರಾಗಿದ್ದಿರಿ. ಅಭಿವೃದ್ಧಿಯ ಮೇಲೆ ನೀವು ಗಮನ ಹರಿಸಿದ್ದಕ್ಕೆ ಸೂಕ್ತ ಪ್ರತಿಫಲ ಸಿಕ್ಕಿರುವುದು ಭಾರತೀಯ ರಾಜಕೀಯದಲ್ಲಿ ಉತ್ತಮ ಸೂಚನೆಯಾಗಿದೆ' ಎಂದು ದೇವೇಗೌಡ ಹೇಳಿದ್ದಾರೆ.
'ಕೋಮು ಧ್ರುವೀಕರಣದ ಹತಾಶೆಯ ಪ್ರಯತ್ನಗಳು ತೀರಾ ಸೀಮಿತ ಪರಿಣಾಮ ಹೊಂದಿರುತ್ತದೆ ಎಂಬ ಭರವಸೆಯನ್ನು ನಿಮ್ಮ ಗೆಲುವು ದೇಶದ ಇತರೆ ಭಾಗಗಳಿಗೆ ನೀಡಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಸರ್ಕಾರದ ಉತ್ತಮ ಕೆಲಸಗಳ ಕುರಿತಾದ ಮಾತುಗಳು ಕರ್ನಾಟಕದ ಹಾಗೂ ದೇಶದ ಇತರೆ ಭಾಗಗಳ ಮೂಲೆ ಮೂಲೆ ತಲುಪಿದೆ' ಎಂದಿದ್ದಾರೆ.
ಪೊರಕೇಲಿ ಹೊಡೆದ್ರು, ಶಾಕ್ ಹೊಡೀತಾ?: ಬಿಜೆಪಿಗೆ ಕಿಚಾಯಿಸಿದ ಪ್ರಕಾಶ್ ರೈ
'ನೀವು ಹೊಸ ಚೈತನ್ಯದೊಂದಿಗೆ ದೆಹಲಿಯ ಜನರಿಗೆ ನಿಮ್ಮ ಸೇವೆಯನ್ನು ಮುಂದುವರಿಸಲು ಆ ದೇವರು ನಿಮಗೆ ಉತ್ತಮ ಆರೋಗ್ಯ ನೀಡಲಿ' ಎಂದು ದೇವೇಗೌಡ ತಿಳಿಸಿದ್ದಾರೆ.