ಕಳೆದ ವಾರದಿಂದ ಕೊರೊನಾ ಸೋಂಕಿತರು ಹೆಚ್ಚಾಗಿದ್ದು ನನ್ನನ್ನು ಚಿಂತೆಗೀಡು ಮಾಡಿದೆ!
ಬೆಂಗಳೂರು, ಮೇ 16: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ಹೆಚ್ಚಳವಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೋ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಆದರಿಂದ ನನ್ನ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ನಾಯಕರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮೇ 18ರಂದು ನೀವು ಇದ್ದಲ್ಲಿಂದಲೇ ಶುಭಾಶಯಗಳನ್ನು ಕೋರಬೇಕೆಂದು ಮನವಿ ಮಾಡುತ್ತೇನೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ.
Recommended Video
ಇದೇ ಮೇ 18ರಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು 87ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಾರೂ ಭೇಟಿಯಾಗಿ ಶುಭಾಶಯಗಳನ್ನು ಹೇಳಲು ಮುಂದಾಗಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಹಿಂದಿನ ವರ್ಷಗಳೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ. ಹೀಗಾಗಿ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಪ್ರತಿವರ್ಷ ಬರುವಂತೆ ಈ ವರ್ಷ ಮನೆಯ ಬಳಿ ಬಂದು ಸೇರಿದರೆ ಲಾಕ್ಡೌನ್ ಉಲ್ಲಂಘನೆ ಆಗುತ್ತದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ತೀವ್ರ ತೊಂದರೆಯನ್ನುಂಟು ಮಾಡುತ್ತದೆ. ದೇವಸ್ಥಾನಗಳಿಂದ ಹಿಡಿದು ಚಿತ್ರಮಂದಿರಗಳವರೆಗೆ, ಮದುವೆ ಸಮಾರಂಭಗಳಿಂದ ಹಿಡಿದು ಅಂತ್ಯಕ್ರಿಯೆವರೆಗೆ ನಿರ್ಬಂಧಗಳು ಹೇರಲ್ಪಟ್ಟಿವೆ. ಹೀಗಾಗಿ ನನ್ನ ಹುಟ್ಟುಹಬ್ಬದಿಂದ ಲಾಕ್ಡೌನ್ ಆದೇಶಗಳ ಉಲ್ಲಂಘನೆ ಆಗಬಾರದು.
ಮೇ 18ರಂದು ಹೂಗುಚ್ಛಗಳೊಂದಿಗೆ ಬಂದು ಶುಭ ಹಾರೈಸುವ ಬದಲು ಕೊರೊನಾ ಸಂಕಷ್ಟ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರೋಣ ಎಂದು ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ.