ರಮ್ಯಾಗೆ ದೊಡ್ಡ ಜವಾಬ್ದಾರಿ ನೀಡಿದ ರಾಹುಲ್ ಗಾಂಧಿ!
ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಮೇಲೆ ದೊಡ್ಡ ಮಟ್ಟದ ಜವಾಬ್ದಾರಿಯನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಹಿಸಿದ್ದಾರೆ. ಮುಂದಿನ ಚುನಾವಣೆಗೆ ಇದು ಹೇಗೆ ಸಹಕಾರಿಯಾಗಲಿದೆ ಕಾದು ನೋಡೋಣ..
ಬೆಂಗಳೂರು, ಮೇ 10: ಮಂಡ್ಯದ ಮಾಜಿ ಸಂಸದೆ, ಲಕ್ಕಿ ಸ್ಟಾರ್ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರ ಮೇಲೆ ಭಾರಿ ವಿಶ್ವಾಸವಿಟ್ಟು, ದೊಡ್ಡಮಟ್ಟದ ಜವಾಬ್ದಾರಿಯನ್ನು ಕಾಂಗ್ರೆಸ್ ಹೊರೆಸಿದೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಘಟಕದ ಮುಖ್ಯಸ್ಥರಾಗಿ ರಮ್ಯಾರನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನೇಮಿಸಿದ್ದಾರೆ.
ಸತತ ಚುನಾವಣೆಗಳಲ್ಲಿನ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಕರ್ನಾಟಕದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಬದಲಿಗೆ ಕೆಸಿ ವೇಣುಗೋಪಾಲ್ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ರಮ್ಯಾ ಅವರು ರೋಹ್ಟಕ್ ನ ಲೋಕಸಭಾ ಸಂಸದ ದೀಪೇಂದ್ರ ಹೂಡಾ ಅವರ ಸ್ಥಾನದಲ್ಲಿ ರಮ್ಯಾ ಅವರನ್ನು ಕೂರಿಸಲಾಗಿದೆ.[ಮೋದಿ ಸರ್ಕಾರದಲ್ಲಿ ಯಾರು ಸೇಫ್ ಇಲ್ಲ: ರಮ್ಯಾ]
ರಮ್ಯಾ ಅವರ ನೇಮಕಾತಿಗೆ ಮುಖ್ಯವಾಗಿ ಕಾರಣವಾಗಿದ್ದು ಅವರ ಟ್ವಿಟ್ಟರ್ ಚಟುವಟಿಕೆ. ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ರಮ್ಯಾ ಅವರು ಮೋದಿ ಸರ್ಕಾರದ ವಿರುದ್ಧ ಸಾಕಷ್ಟು ಬಾರಿ ಸತತ ದಾಳಿ ನಡೆಸಿದ್ದಾರೆ. ನೋಟ್ ಬ್ಯಾನ್ ಇರಬಹುದು ಅಥವಾ ಸರ್ಜಿಕಲ್ ಸ್ಟ್ರೈಕ್ ಇರಬಹುದು, ನಕ್ಸಲರಿಂದ ಯೋಧರ ಹತ್ಯೆ ಪ್ರಕರಣ ಇರಬಹುದು ರಮ್ಯಾ ಅವರು ಬಲವಾಗಿ ದನಿ ಎತ್ತಿದ್ದಾರೆ.[ರಮ್ಯಾ ಟ್ವಿಟ್ಟರಲ್ಲಿ ನಡೆಯುತ್ತಿದೆ ಹೊಸ ಕರೆನ್ಸಿ ನೋಟು ಪರೀಕ್ಷೆ!]
ಮುಂಬರುವ ಚುನಾವಣೆಗಳಲ್ಲಿ ಸಾಮಾಜಿಕ ಜಾಲ ತಾಣ ತಂಡ ಮಹತ್ವದ ಪಾತ್ರ ವಹಿಸಲಿದ್ದು, ಈ ಸ್ಥಾನಕ್ಕೆ ಸಮರ್ಥರನ್ನು ನೇಮಿಸಲು ಬಯಸಿದ್ದ ರಾಹುಲ್ ಗಾಂಧಿ ಅವರು ರಮ್ಯಾ ಅವರನ್ನು ನೇಮಿಸಿದ್ದಾರೆ.
ಹಲವು ಚುನಾವಣೆ ಸೋಲಿನ ಬಳಿಕ ಹೊಸ ತಂಡವನ್ನು ಕಟ್ಟಿಕೊಂಡು ಮುಂದಿನ ಸವಾಲು ಎದುರಿಸಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಸರಿ ಸುಮಾರು 17 ಕಾರ್ಯದರ್ಶಿಗಳನ್ನು ಬದಲಾಯಿಸಲಾಗಿದೆ. ರಾಜಸ್ಥಾನ ಹಾಗೂ ಗುಜರಾತಿನ ಪ್ರಧಾನ ಕಾರ್ಯದರ್ಶಿಗಳನ್ನು ಬದಲಾಯಿಸಲಾಗಿದೆ.[ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]
ಉತ್ತರಾಖಂಡ್ ಹಾಗೂ ಪಂಜಾಬಿನ ಕಾಂಗ್ರೆಸ್ ಘಟಕಕ್ಕೆ ಹೊಸಬರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ನಡೆಯಲಿದೆ. ಸದಸ್ಯತ್ವ ಅಭಿಯಾನವನ್ನು ಮೇ 15ರೊಳಗೆ ಮುಕ್ತಾಯಗೊಳಿಸಲಾಗುತ್ತದೆ.(ಒನ್ಇಂಡಿಯಾ ಸುದ್ದಿ)