'ನಾನು ಬಂಗಾರಪ್ಪನವರ ಮಗ, ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ'
ಬೆಂಗಳೂರು, ಮಾ. 02: ಈಗಾಗಲೇ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿರುವ ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದಲ್ಲಿ ವ್ಯವಸ್ಥೆಯೇ ಸರಿಯಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಪಕ್ಷ ಬಿಡುವಾಗ ಹೇಳಿಯೇ ಹೋಗುತ್ತೇನೆ ಎನ್ನುವ ಮೂಲಕ ಜೆಡಿಎಸ್ ತೊರೆಯುವ ತಮ್ಮ ಇಂಗಿತವನ್ನು ಮತ್ತೊಮ್ಮೆ ಸ್ಷಷ್ಟಪಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಮಾತನಾಡಿದ್ದಾರೆ. ಮಧು ಬಂಗಾರಪ್ಪ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವಾಗಲೇ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
ಎಚ್ಡಿಕೆ ಜೊತೆ 'ಗಳಸ್ಯ ಕಂಠಸ್ಯ'ದಂತಿದ್ದ ಮಧು ಬಂಗಾರಪ್ಪ ಜೆಡಿಎಸ್ ಗೆ ವಿದಾಯ? ಕಾರಣವಾದ ಅಂಶ
ಜೊತೆಗೆ ಜೆಡಿಎಸ್ ಪಕ್ಷ ಕಾರ್ಯಕರ್ತರವ ವಿಶ್ವಾಸ ಕಳೆದುಕೊಂಡಿದೆ ಎನ್ನುವ ಮೂಲಕ ಮತ್ತೊಂದು ಹಂತದ ವಾಗ್ದಾಳಿಯನ್ನು ಪರೋಕ್ಷವಾಗಿ ಪಕ್ಷದ ನಾಯಕರ ಮೇಲೆ ನಡೆಸಿದ್ದಾರೆ. ಜೆಡಿಎಸ್ ಪಕ್ಷ ನಾಯಕರನ್ನು ಸೃಷ್ಟಿ ಮಾಡುತ್ತಿದೆ, ಆದರೆ ಆ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಜಿ ಸಚಿವ ಎಚ್ ವಿಶ್ವನಾಥ್ ಪಕ್ಷ ಬಿಡುವಾಗ ಅವರೊಂದಿಗೆ ಇದ್ದೆ
ಮಾಜಿ ಸಚಿವ ಎಚ್ ವಿಶ್ವನಾಥ್ ಅವರು ಜೆಡಿಎಸ್ ಪಕ್ಷ ಬಿಡುವಾಗ ಅವರೊಂದಿಗೆ ಇದ್ದೆ. ಅವರೊಂದಿಗೆ ಇದ್ದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೆ. ಅವರಿಗೆ ಜೆಡಿಎಸ್ ಪಕ್ಷ ತೊರೆಯುವಂತಹ ಸಂದರ್ಭ ಏನೂ ಬಂದಿತ್ತೊ ಗೊತ್ತಿಲ್ಲ. ಆದರೆ ಮಾಜಿ ಸಚಿವ ಎಚ್ ವಿಶ್ವನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು ಎಂಬ ಗಂಭೀರ ಆರೋಪವನ್ನು ಮಧು ಬಂಗಾರಪ್ಪ ಮಾಡಿದ್ದಾರೆ.
ಬೇಕಾದರೆ ಕಾಯಾಧ್ಯಕ್ಷ ಹುದ್ದೆಯಿಂದ ತೆಗೆಯಬಹುದು
ನಾನು ಆ್ಯಕ್ಟಿವ್ ಪಕ್ಷದ ಇನ್ ಆ್ಯಕ್ಟಿವ್ ಕಾರ್ಯಾಧ್ಯಕ್ಷ. ನಾನಾಗಿಯೆ ಜೆಡಿಎಸ್ ಕಾರ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ.
ಬೇಕಾದರೆ ಅವರೇ ನನ್ನ ರಾಜೀನಾಮೆ ಕೇಳಬಹುದು. ಇಲ್ಲವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು ಎಂದು ಮಧು ಬಂಗಾರಪ್ಪ ಪಕ್ಷದ ನಾಯಕರಿಗೆ ಸವಾಲು ಹಾಕಿದ್ದಾರೆ. ನಾನು ಕಾರ್ಯಾಧ್ಯಕ್ಷನಾಗಿರಲಿ ಅಥವಾ ಸಾಮಾನ್ಯ ಕಾರ್ಯಕರ್ತ ಆಗಿರಲಿ, ನನ್ನೊಂದಿಗೆ ಇರುವ ಬಂಗಾರಪ್ಪ ಅನ್ನುವ ಹಸರೇ ದೊಡ್ಡ ಹುದ್ದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಮಧು ಬಂಗಾರಪ್ಪ ಜೆಡಿಎಸ್ ಬಿಟ್ಟರೆ ಅಭ್ಯಂತರವಿಲ್ಲ ಎಂದ ಎಚ್ಡಿಕೆ
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆ
ಮೈತ್ರಿ ಸರ್ಕಾರರ ಸಂದರ್ಬದಲ್ಲಿ ಜೆಡಿಎಸ್ ಪಕ್ಷದಲ್ಲಿನ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆಂದು ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಅವರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನನ್ನ ಮನಸ್ಸಿಗೆ ನೋವಾಗಿದೆ ಹೀಗಾಗಿಯೇ ಲೋಕಸಭಾ ಚುನಾವಣೆ ಬಳಿಕ ನಾನು ಎಲ್ಲರಿಂದ ದೂರವೇ ಉಳಿಸಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ರಮೇಶಗೌಡ ಅಂಥವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿರುವುದು ಬೇಸರದ ಸಂಗತಿ. ಅವರಂತಹ ಕ್ರಿಮಿನಲ್ಗೆ ಪರಿಷತ್ ಸದಸ್ಯರನ್ನಾಗಿ ಮಾಡಬಾರದಿತ್ತು. ಧರ್ಮೇಗೌಡ, ಫಾರೂಕ್ ಅಂಥವರು ಪಕ್ಷ ಬೆಳೆಸಿದವರಲ್ಲ, ಅವರು ಪಕ್ಷ ಬಿಡಲು ತಯಾರಾಗಿದ್ದರು. ಇನ್ನು ಯೋಗ್ಯತೆ ಇಲ್ಲದ ರಮೇಶ್ಗೌಡನಿಗೆ ಎಂಎಲ್ಸಿ ಸ್ಥಾನ ನೀಡಿರುವುದು ಯಾರ ನಿರ್ಧಾರ ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷ ಬಿಡುವವರು ಬಿಡಲಿ ಎಂದಿರುವ ಮಾಜಿ ಸಿಎಂ ಎಚ್ಡಿಕೆ
ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಸೇರಿದಂತೆ ಪಕ್ಷ ತೊರೆಯಲು ಮುಂದಾಗಿರುವ ನಾಯಕರ ಬಗ್ಗೆ ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಪಕ್ಷ ಬಿಟ್ಟು ಹೋಗಿ ಏನನ್ನೊ ಸಾಧನೆ ಮಾಡುತ್ತೇನೆ ಎನ್ನುವವರು ಹೋಗಿ ಸಾಧನೆ ಮಾಡಲಿ. ನಾನು ಎಷ್ಟು ಬಾರಿ ಅವರೊಂದಿಗೆ ಮಾತನಾಡಲಿ ಎಂದು ಕುಮಾರಸ್ವಾಮಿ ಅವರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಹೀಗಾಗಿ ಮಧು ಬಂಗಾರಪ್ಪ ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.