ಮಾಜಿ ಸಚಿವ ಖಾದರ್ ಕೊಲೆ ಸಂಚು, ಆತಂಕಕಾರಿ ವಿಚಾರ!
ಬೆಂಗಳೂರು. ಮಾ. 06: ರಾಜ್ಯದಲ್ಲಿ ಮೂಲಭೂತವಾದಿಗಳ ಉಪಟಳ ಹೆಚ್ಚಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಮಾಜಿ ಸಚಿವ, ಶಾಸಕ ತನ್ವೀರ್ ಸೇಟ್ ಹತ್ಯಾಯತ್ನದ ಬೆನ್ನಲ್ಲೆ ಮೂಲಭೂತವಾದಿಗಳು ಇದೀಗ ಮಾಜಿ ಸಚಿವ ಯು.ಟಿ. ಖಾದರ್ ಅವರ ಕೊಲೆಗೆ ಸಂಚು ನಡೆಸಿರುವುದು ಗುಪ್ತಚರ ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿ ಬಂದಿದೆ. ಹೀಗಾಗಿ ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭದ್ರತೆ ಒದಗಿಸಿದೆ. ಆದರೆ ಖಾದರ್ ಅವರು ತನಿಖೆಗೆ ಸೂಕ್ತ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿಲ್ಲ ಎಂದು ಕೊಡುತ್ತಿಲ್ಲ ಎಂದು ಗೃಹಸಚಿವರ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಸರ್ಕಾರದಿಂದ ಗನ್ಮ್ಯಾನ್ ಒದಗಿಸಲಾಗಿದ್ದು, ಕೆಲ ತಿಂಗಳುಗಳ ಹಿಂದೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ನಿಮ್ಮ ಜೀವಕ್ಕೆ ಅಪಾಯವಿದೆ ಎಂದಿದ್ದರು.
ಯು. ಟಿ. ಖಾದರ್ಗೆ ಹತ್ಯೆಗೆ ಸಂಚು; ಭದ್ರತೆಗೆ ಗೃಹ ಸಚಿವರ ಸೂಚನೆ
ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರು ಮೊದಲು ಪತ್ತೆಹಚ್ಚಬೇಕು ಎಂದು ಖಾದರ್ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಖಾದರ್ ಹೇಳಿಕೆಗೆ ಗೃಹಸಚಿವ ಬೊಮ್ಮಾಯಿ ಗರಂ
ಆರೋಪಿಗಳನ್ನು ಪತ್ತೆ ಹಚ್ಚಲು ಮಾಜಿ ಸಚಿವ ಯು.ಟಿ. ಖಾದರ್ ಅವರು ಸಹಕರಿಸಬೇಕು ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ವಿಧಾನಸೌಧದಲ್ಲಿ ಹೇಳಿದ್ದಾರೆ. ಈ ಹಿಂದೆ ಬಂದಿರೋ ಮಾಹಿತಿ ಆದು. ಈ ಬಗ್ಗೆ ಅವರು ಸರಿಯಾಗಿ ಸಹಕಾರ ಕೊಡಬೇಕು. ಕರೆ ಅಥವಾ ಬೆದರಿಕೆ ಎಲ್ಲಿಂದ? ಯಾವಾಗ? ಏನು ಅಂತ ಬಂದಿದೆ ಎಂಬ ಎಲ್ಲ ಮಾಹಿತಿಯನ್ನ ಕೊಡಬೇಕು.
ಆಗ ನಮ್ಮ ಪೊಲೀಸರು ಅವರನ್ನ ಪತ್ತೆ ಹಚ್ಚುತ್ತಾರೆ ಎಂದು ಗರಂ ಆಗಿ ಮಾತನಾಡಿದ್ದಾರೆ. ಆ ಮೂಲಕ ಮಾಜಿ ಸಚಿವ ಯು.ಟಿ. ಖಾದರ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ.
ಆರೋಪಿಗಳನ್ನು ಪತ್ತೆ ಮಾಡಿ ಎಂದು ಮಾಜಿ ಸಚಿವ ಖಾದರ್ ಆಗ್ರಹ
ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ನಿಮಗೆ ಜೀವಕ್ಕೆ ತೊಂದರೆ ಇದೆ ಎಂದು ಗೃಹಸಚಿವರು ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿಲ್ಲ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ. ನಾನೇನೋ ಜನಪ್ರತಿನಿಧಿ ಆದರೆ, ಜನಸಾಮಾನ್ಯರಿಗೆ ಈ ರೀತಿ ಆದರೆ ಯಾರ ಜವಾಬ್ದಾರಿ? ಭದ್ರತೆ ಕೇವಲ ಹೆಸರಿಗೆ ಮಾತ್ರ ಆಗಬಾರದು. ಕೂಲಿ ಕಾರ್ಮಿಕನ ಜೀವಕ್ಕೂ ಬೆಲೆ ಇದೆ. ನಿರ್ಭಯವಾಗಿ ಎಲ್ಲರೂ ಜೀವಿಸುವಂತಾಗಬೇಕು. ಮಾಜಿ ಸಚಿವ ತನ್ವೀರ್ ಸೇಠ್ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಕೇವಲ ಒಬ್ಬನನ್ನು ಬಂಧಿಸಲಾಗಿದೆ.
ಈ ಪ್ರಕರಣ ಹಿಂದೆ ಯಾರಿದ್ದಾರೆ, ಯಾರು ಹಣ ನೀಡಿದ್ರು ಅನ್ನೋದನ್ನ ಮೊದಲು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿ ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ತನಿಖೆ ವಿಳಂಬ ಗೃಹಸಚಿವರಿಗೆ ಪತ್ರ ಬರೆದ ಸೇಠ್
ತಮ್ಮ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆಂದು ಮಾಜಿ ಸಚಿವ ತನ್ವೀರ್ ಸೇಠ್ ಪೊಲೀಸರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಸೇಠ್ ಆರೋಪಿಸಿದ್ದಾರೆ. ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲ. ನನ್ನ ಮೇಲೆ ಹಲ್ಲೆ ಉದ್ದೇಶವನ್ನು ಪತ್ತೆ ಮಾಡಬೇಕು ಎಂದು ಗೃಹಸಚಿವ ಬೊಮ್ಮಯಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆತಂಕಕಾರಿ ವಿಚಾರ, ಸೂಕ್ತ ತನಿಖೆ ಅಗತ್ಯ
ಶಾಸಕರನ್ನೇ ಹತ್ಯಾ ಯತ್ನಕ್ಕೆ ಪ್ರಯತ್ನಿಸಿರುವುದು, ಕೊಲೆಗೆ ಸಂಚು ರೂಪಿಸುತ್ತಿರುವುದು ಆತಂಕಕಾರಿ ವಿಚಾರ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪಕ್ಷಬೇಧ ಬಿಟ್ಟು ತನಿಖೆ ನಡೆಸಲು ಮುಂದಾಗಬೇಕು. ಭದ್ರತೆ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಶಾಸಕರು ಆಗ್ರಹಿಸಿದ್ದಾರೆ.