ಪಾತಕಿ ಸೈಕಲ್ ರವಿ ಜೊತೆ ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರ ನಂಟು?
Recommended Video
ಬೆಂಗಳೂರು, ಜುಲೈ 17: ಭೂಗತ ಪಾತಕಿ ಸೈಕಲ್ ರವಿ ಜೊತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ನಂಟು ಇತ್ತು ಎಂಬ ಸುದ್ದಿ ಹರಿದಾಡುತ್ತಿದ್ದು, ಆದರೆ ಸುದ್ದಿಯನ್ನು ಎಂಬಿ.ಪಾಟೀಲ್ ಅವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.
ಸೈಕಲ್ ರವಿಯದ್ದು ಎನ್ನಲಾದ ಮೊಬೈಲ್ ಸಂಖ್ಯೆಯಿಂದ ಎಂಬಿ ಪಾಟೀಲ್ ಅವರ ಸಂಖ್ಯೆಗೆ ನಿಯಮಿತವಾಗಿ ಕರೆಗಳು ಹೋಗಿದೆ ಎಂದು ಸಿಸಿಬಿ ಹೊರತೆಗೆದಿದ್ದ ಸಿಡಿಆರ್ (ಕರೆಗಳ ಮಾಹಿತಿ)ಯಿಂದ ಗೊತ್ತಾಗಿತ್ತು. ಆದರೆ ಈಗ ಆ ಮೊಬೈಲ್ ಸಂಖ್ಯೆ ಆರೋಪಿ ರವಿಯದ್ದಲ್ಲ, ಮಂಡ್ಯದ ಕಾಂಗ್ರೆಸ್ ಮುಖಂಡರೊಬ್ಬರದ್ದು ಎಂಬ ಮಾಹಿತಿ ಲಭ್ಯವಾಗಿದೆ.
ಸೈಕಲ್ ರವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಿಸಿಬಿಯ ತನಿಖೆಯೇ ತಪ್ಪಾ?
ಸೈಕಲ್ ರವಿ ಬಳಿ ವಶ ಪಡಿಸಿಕೊಂಡಿದ್ದ ಸಿಮ್ಗಳ ಸಿಡಿಆರ್ (ಕರೆ) ಮಾಹಿತಿ ಎಂದು ಹೇಳಲಾಗುತ್ತಿರುವ ದಾಖಲೆಯೊಂದು ಖಾಸಗಿ ವಾಹಿನಿಗಳಲ್ಲಿ ಪ್ರದರ್ಶಿತವಾಗುತ್ತಿದೆ. ಅದರಂತೆ 9741199999 ಸಂಖ್ಯೆಯಿಂದ ಎಂಬಿ ಪಾಟೀಲ್ ಅವರಿಗೆ ಹಲವು ಬಾರಿ ಕರೆ ಹೋಗಿತ್ತು.
ಸಚಿವರಾಗಿದ್ದಾಗಲೇ 80 ಬಾರಿ ಚರ್ಚೆ
ಸಚಿರೊಬ್ಬರುತಮ್ಮ ನಿವಾಸದ ವಿಳಾಸ ನೀಡಿ ಖರೀದಿಸಿರುವ ಸಿಮ್ನಿಂದಲೇ 9741199999 ಸಂಖ್ಯೆಗೆ ಕರೆ ಮಾಡಿದ್ದು, ಈ ಎಲ್ಲಾ ಚಟುವಟಿಕೆಗಳು 2016ರಲ್ಲಿ ನಡೆದಿರುವಂತಹವು ಎಂದು ಸಿಡಿಆರ್ ದಾಖಲೆ ಹೇಳುತ್ತಿದ್ದು. 9741199999 ಮೊಬೈಲ್ ಸಂಖ್ಯೆ ಸೈಕಲ್ ರವಿಯದ್ದು ಎನ್ನಲಾಗಿತ್ತು, ಆದರೆ ಈಗ ಪೊಲೀಸರೇ ಈ ಮೊಬೈಲ್ ಸಂಖ್ಯೆ ಮಂಡ್ಯದ ಕಾಂಗ್ರೆಸ್ ಮುಖಂಡರೊಬ್ಬರದ್ದು ಎಂದಿದ್ದಾರೆ.
ಗಂಭೀರ ಅಪರಾಧಗಳ ಆರೋಪಿ ಸೈಕಲ್ ರವಿ
ಸೈಕಲ್ ರವಿ, ಕೊಲೆ, ಸುಲಿಗೆ, ಅಪಹರಣದಂತಹಾ ಅಪರಾಧ ಚಟುವಟಿಕೆಗಳು ಸೇರಿದಂತೆ ರಿಯಲ್ ಎಸ್ಟೇಟ್ ಉದ್ಯಮ, ಸೆಟಲ್ಮೆಂಟ್ಗಳನ್ನು ಮಾಡುತ್ತಿದ್ದ ಎಂದು ಸಿಸಿಬಿ ಆರೋಪ ಮಾಡಿದೆ.
ಸಾಧುಕೋಕಿಲಾರನ್ನು ವಿಚಾರಿಸಿತ್ತು ಸಿಸಿಬಿ
ಕೆಲವೇ ದಿನಗಳ ಹಿಂದೆಯಷ್ಟೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧುಕೋಕಿಲಾ ಅವರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು. ಶಾಸಕ ಮಾನಪ್ಪ ವಜ್ಜನ್ ಅವರೊಂದಿಗೂ ಸೈಕಲ್ ರವಿಗೆ ನಂಟು ಇರುವುದಾಗಿ ಸಿಸಿಬಿ ಅನುಮಾನ ವ್ಯಕ್ತಪಡಿಸಿದೆ.
ಸೈಕಲ್ ರವಿ ಬಳಿ 38 ಸಿಮ್ ಪತ್ತೆ
ಸೈಕಲ್ ರವಿ ಮೇಲೆ ಶೂಟೌಟ್ ಮಾಡಿ ಆತನನ್ನು ಬಂಧಿಸಿದಾಗ ಆತನ ಬಳಿ ಒಟ್ಟು 38 ಸಿಮ್ ಕಾರ್ಡ್ ಮತ್ತು 11 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 18 ಸಿಮ್ಗಳು ಬೆಂಗಳೂರಿನ ರಾಜಸಿಂಗನಪಾಳ್ಯ ವಿಳಾಸದ ಹೆಸರಲ್ಲಿ ನೊಂದಾವಣಿಯಾಗಿದ್ದರೆ. 20 ಸಿಮ್ಗಳು ತಮಿಳುನಾಡಿನ ನಿವಾಸವೊಂದರ ವಿಳಾಸ ನೀಡಿ ಖರೀದಿಸಲಾಗಿದ್ದವು. ಅವುಗಳಲ್ಲಿ ಒಂದು ಸಿಮ್ ಗಷ್ಟೆ ಎಂ.ಬಿ.ಪಾಟೀಲ್ ಕರೆ ಮಾಡಿದ್ದರು. ಉಳಿದ ಸಿಮ್ ಮಾಹಿತಿ ಬಹಿರಂಗವಾಗಿಲ್ಲ.
100 ಕೋಟಿಗೂ ಹೆಚ್ಚು ಆಸ್ತಿ
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಸೈಕಲ್ ರವಿ ಸುಮಾರು 100 ಕೋಟಿಗೂ ಹೆಚ್ಚು ಆಸ್ತಿ ಸಂಪಾದನೆ ಮಾಡಿದ್ದಾನೆ ಎನ್ನಲಾಗಿದ್ದು, ಸಿಸಿಬಿ ಪೊಲೀಸರು ಈಗಾಗಲೇ ಈ ಪ್ರಕರಣ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ)ಗೆ ವರದಿ ಸಲ್ಲಿಸಿದ್ದಾರೆ. ಹಾಗಾಗಿ ಇಡಿ ಸಹ ಈ ಪ್ರಕರಣದ ವಿಶೇಷ ತನಿಖೆ ಮಾಡಲಿದೆ.
ಸಿಸಿಬಿ ವಿಚಾರಣೆಗೆ ಪಡೆಯಲಿದೆ
ಶೂಟೌಟ್ ನಿಂದ ಕಾಲಿಗೆ ಪೆಟ್ಟಾಗಿರುವ ಕಾರಣ ಸೈಕಲ್ ರವಿಗೆ ಕಾರಾಗೃಹದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಕಾಲ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅದು ಮುಗಿದ ನಂತರ ಆತನನ್ನು ಸಿಸಿಬಿಯು ವಿಚಾರಣೆಗೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಿತ್ತದೆ. ಆ ನಂತರ ಸೈಕಲ್ ರವಿಯ ವಿಚಾರಣೆ ಪ್ರಾರಂಭವಾಗಲಿದೆ.