ಮಾಜಿ ಪ್ರಧಾನಿ ದೇವೇಗೌಡರ ಚುನಾವಣಾ ತಂತ್ರ ಬಿಚ್ಚಿಟ್ಟ ಡಾ. ಎಚ್.ಸಿ. ಮಹದೇವಪ್ಪ!
ಬೆಂಗಳೂರು, ಸೆ. 27: "ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ ಎಂಬುದು ದೇವೇಗೌಡರ ಹೊಸ ಚುನಾವಣಾ ತಂತ್ರ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
"ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಚುನಾವಣೆಗಳು ಹತ್ತಿರ ಬರುತ್ತಿರುವಂತೆ ಎರಡು ಅಂಶಗಳ ಮೊರೆ ಹೋಗುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ಅವುಗಳಲ್ಲಿ ಮೊದಲನೆಯದು ಭಾವನಾತ್ಮಕತೆ ಹಾಗೂ ಎರಡನೆಯದು ಸಿದ್ದರಾಮಯ್ಯನವರಿಂದ ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ ಎಂಬುದು" ಎಂದು ಡಾ. ಎಚ್.ಸಿ. ಮಹದೇವಪ್ಪ ವಿಶ್ಲೇಷಿಸಿದ್ದಾರೆ.
ಜೆಡಿಎಸ್ ಮುಗಿಸಲು ಸಿದ್ದರಾಮಯ್ಯರಿಂದ ಸಾಧ್ಯವಿಲ್ಲ: ದೇವೇಗೌಡರ ಗುಡುಗು
ಕಳೆದ ಕೆಲವು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಎಡೆ ಬಿಡದೇ ಟೀಕಿಸುತ್ತಿದ್ದಾರೆ. ಅದ ಬೆನ್ನಲ್ಲೇ ಇದೀಗ ಮಾಜಿ ಪ್ರಧಾನಿ ದೇವೇಗೌಡರೂ ಕೂಡಾ ಸಿದ್ದರಾಮಯ್ಯ ವಿರುದ್ಧ ಟೀಕಾ ಬಾಣ ಪ್ರಯೋಗಿಸುತ್ತಿರುವುದು ಜೆಡಿಎಸ್ ಪಕ್ಷದ ನಾಯಕರ ಸಾಂಪ್ರದಾಯಿಕ ತಂತ್ರವಾಗಿ ನನಗೆ ಕಾಣುತ್ತಿದೆ ಎಂದು ಮಹದೇವಪ್ಪ ಹೇಳಿದ್ದಾರೆ. ಜೊತೆಗೆ ಜೆಡಿಎಸ್ ಕುರಿತು ಮತ್ತೊಂದು ಮಹತ್ವದ ವಿಷಯವನ್ನೂ ಕಾಂಗ್ರೆಸ್ ನಾಯಕ ಡಾ. ಎಚ್.ಸಿ. ಮಹದೇವಪ್ಪ ಬಹಿರಂಗಪಡಿಸಿದ್ದಾರೆ.
ಜನರ ಕರುಣೆ ಗಿಟ್ಟಿಸುವುದು ಅವರ ಉದ್ದೇಶ!
"ನನಗೆ ತಿಳಿದ ಮಟ್ಟಿಗೆ ಜನಪರ ಯೋಜನೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಗಳ ಮೂಲಕ ಚುನಾವಣೆ ಎದುರಿಸುವುದು ಸಹಜ ಪದ್ಧತಿ. ಆದರೆ ಜೆಡಿಎಸ್ ಪಕ್ಷದ ಈ ದುರ್ಬಲ ಆರೋಪಗಳನ್ನು ನೋಡುವಾಗ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅರ್ಥವಿಲ್ಲದೇ ಟೀಕಿಸುವುದು ಮತ್ತು ಆ ಮೂಲಕ ಜನರ ಕರುಣೆ ಗಿಟ್ಟಿಸುವುದೇ' ಜೆಡಿಎಸ್ ಪ್ರಣಾಳಿಕೆಯಾಗಿದೆ" ಎಂದು ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ರಾಜಕೀಯ ನಡೆಯನ್ನು ಟೀಕಿಸಿದ್ದಾರೆ. ಜೊತೆಗೆ ಮತ್ತೊಂದು ವಿಚಾರವನ್ನು ಡಾ. ಎಚ್.ಸಿ. ಮಹದೇವಪ್ಪ ಹಂಚಿಕೊಂಡಿದ್ದಾರೆ.
ದೇವೇಗೌಡರಿಗೆ ಉಳಿದಿರುವ ದಾರಿ ಇದೊಂದೆ!
"ಇನ್ನು ಕಳೆದ ಚುನಾವಣೆಯಲ್ಲಂತೂ ದೈಹಿಕ ಆರೋಗ್ಯವನ್ನೂ ಕೂಡಾ ಪ್ರಸ್ತಾಪಿಸಿ ಚುನಾವಣಾ ಪ್ರಚಾರವನ್ನು ಮಾಡಿದ್ದನ್ನು ಎಲ್ಲರೂ ಕಂಡಿದ್ದೇವೆ. ಈ ಬಾರಿ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸುವುದೊಂದೇ ಉಳಿದಿರುವ ದಾರಿ ಎಂದು ನನಗನಿಸುತ್ತಿದೆ. ಒಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆಗಳು ಭಾವನಾತ್ಮಕತೆಯ ಮೇಲೂ ಇರುತ್ತದೆ ಎಂದು ತೋರಿಸಿಕೊಟ್ಟ ಜೆಡಿಎಸ್ ನಾಯಕರ ನಡೆಯನ್ನು ಜನರೇ ಅರ್ಥ ಮಾಡಿಕೊಳ್ಳಬೇಕು" ಎಂದು ಲೇವಡಿ ಮಾಡಿದ್ದಾರೆ. ಅಷ್ಟಕ್ಕೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮಾಡಿದ್ದ ಆರೋಪವಾದರೂ ಏನು? ಎಂಬುದು ಮುಂದಿದೆ.
ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದ ದೇವೇಗೌಡರು!
ರಾಮನಗರ ಜಿಲ್ಲೆ ಬಿಡದಿ ಬಳಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಆರಂಭವಾದ 4 ದಿನಗಳ 'ಜನತಾ ಪರ್ವ 1.0' ಕಾರ್ಯಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು, "ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ, ಯಾರಿಂದಲೂ ಸಾಧ್ಯವಿಲ್ಲ" ಎಂದು ಆರೋಪಿಸಿದ್ದರು. ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಸಿದ್ದರಾಮಯ್ಯ ಮೇಲೆ ಟೀಕಾ ಪ್ರಹಾರ ಮಾಡಿದ್ದರು.
Recommended Video
ಸಿದ್ದರಾಮಯ್ಯ ಸಿದ್ದಕಲೆಯ ನಿಷ್ಣಾತ!
"ಸುಳ್ಳಿನ ಶೂರ, ಸಿದ್ದಕಲೆಯ ನಿಷ್ಣಾತ ಸಿದ್ದರಾಮಯ್ಯನವರಿಗೆ ರಾಜಕೀಯ ಶಕ್ತಿ ತುಂಬಿದವರು ಯಾರು? ನಾನು ಎಲ್ಲಿದ್ದೆ? ಎಲ್ಲಿಂದಾ ಬಂದೆ ಎಂದು ಸ್ವತಃ ಅವರೇ ರಾಜ್ಯದ ಜನತೆಗೆ ಹೇಳಿದರೆ ಚೆನ್ನಾಗಿರುತ್ತದೆ. ಸತ್ಯಕ್ಕೆ ಬೆನ್ನು ತಿರುಗಿಸಿ ಸದಾ ಸುಳ್ಳಿನೆಡೆಗೆ ಮುಖ ಮಾಡಿ ನಿಲ್ಲುವ 'ಸಿದ್ದಹಸ್ತರಿಗೆ' ಜೆಡಿಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ."
"ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯದ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಗುಣ ಯಾರದ್ದು ಎಂಬುದನ್ನು ಜನ ಬಲ್ಲರು. ಪರಾವಲಂಬಿ ರಾಜಕಾರಣ ಅವರ ನೈಜಗುಣ. ನೇರ ರಾಜಕಾರಣ ಅವರ ರಕ್ತದಲ್ಲೇ ಇಲ್ಲ. ಜೆಡಿಎಸ್ ಅನ್ನ-ಗೊಬ್ಬರದಿಂದ ಬೆಳೆದ ಸಿದ್ದರಾಮಯ್ಯ, ಈಗ ಅದೇ ಬಲದಿಂದ ಕಾಂಗ್ರೆಸ್ ಪಕ್ಷವನ್ನೇ ನುಂಗುತ್ತಿದ್ದಾರೆ. ಆ ಪಕ್ಷದ ದಿಗ್ಗಜ ನಾಯಕರನ್ನೇ ಬಲಿ ತೆಗೆದುಕೊಳ್ಳುತ್ತಿದ್ದಾರೆ." ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.