ದೆಹಲಿಯಲ್ಲಿ ರಾಜಕೀಯ ಮಾಡುವರು ಮಾಡಿಕೊಳ್ಳಲಿ: ಡಿಕೆಶಿ
ಬೆಂಗಳೂರು, ಜ. 15: ಮಾಜಿ ಸಿಎಂ ಎಸ್.ಎಂ. ಕೃಷ್ಣ ಭೇಟಿಯ ಬೆನ್ನಲ್ಲೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕೊಟ್ಟಿರುವ ಹೇಳಿಕೆ ರಾಜಕೀಯ ಕುತೂಹಲ ಮೂಡಿಸಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಡಿಕೆಶಿ ಅವರು ಮಾತನಾಡಿದ್ದಾರೆ.
ದೆಹಲಿಯಲ್ಲಿ ರಾಜಕೀಯ ಮಾಡುವವರು ಮಾಡಿಕೊಳ್ಳಲಿ, ನಾನು ಕನಕಪುರದಲ್ಲಿ ಹೊಲ ಉಳುಮೆ ಮಾಡಿಕೊಂಡು ಇರುತ್ತೇನೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೆಹಲಿಯಲ್ಲಿ ಕಳೆದ ಎರಡು ದಿನಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಮಾಡಿದ್ದು, ಹೈಕಮಾಂಡ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿರುವ ಸಂದರ್ಭದಲ್ಲಿ ಡಿಕೆಶಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ರಾಜೀನಾಮೆ ವಾಪಾಸ್ ಪಡೆದುಕೊಳ್ಳುವ ಮಾತೇ ಇಲ್ಲ ಅಂತಾ ಕೆಪಿಸಿಸಿ ಹಂಗಾಮಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ಕೊಟ್ಟಿದ್ದಾರೆ. ಗುಂಡೂರಾವ್ ಹೇಳಿಕೆಗೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ ಭೇಟಿ ಬಗ್ಗೆ ಮಾತನಾಡಿ, ಇವತ್ತು ಸಂಕ್ರಾಂತಿ ಹಿನ್ನಲೆ ಮಾಜಿ ಸಿಎಂ ಎಸ್ಎಂಕೆ ಅವರನ್ನು ಭೇಟಿ ಮಾಡಿದ್ದೇನೆ. ಇದು ವೈಯಕ್ತಿಕ ಭೇಟಿಯೇ ಹೊರತು ರಾಜಕೀಯ ಭೇಟಿ ಅಲ್ಲ. ನನ್ನ ಅವರ ಸಂಬಂಧದ ಬಗ್ಗೆ ನಿಮಗೂ ಕೂಡ ಗೊತ್ತು. ರಾಜಕೀಯ ಮಾಡೋರು ಮಾಡಲಿ ಬಿಡಿ ಎಂದಿದ್ದಾರೆ. ಹರಿಹರದಲ್ಲಿ ನಿನ್ನೆ ನಡೆದ ಹರ ಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಗರಂ ಆಗಿದ್ದ ವಿಚಾರಕ್ಕೆ ಮಾಜಿ ಸಚಿವ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಾನೂ ಕೂಡ ಹರಿಹರಕ್ಕೆ ಹೋಗುತ್ತಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಯಾರು ಯಾರಿಗೆ ಏನು ಮಾತು ಕೊಟ್ಟಿದ್ದಾರೋ ಗೊತ್ತಿಲ್ಲ. ಅವರು ಮಾತಾಡುವಾಗ ಒಳಗೆ ಏನೇನು ಇತ್ತೋ ಗೊತ್ತಿಲ್ಲ. ಓಟು ಹಾಕಿಸಿಕೊಳ್ಳುವಾಗ ಏನು ಮಾತು ಕೊಟ್ಟಿದ್ದಾರೆ, ಮಧ್ಯರಾತ್ರಿ ಏನು ಮಾತು ಕೊಟ್ಟಿರ್ತಾರೆ, ಸಂಜೆ ಏನು ಮಾತು ಕೊಟ್ಟಿರ್ತಾರೆ? ಗೊತ್ತಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.