ಲೋಕಸಭೆ ಚುನಾವಣೆ ಕಣಕ್ಕೆ ಸಿ.ಟಿ ರವಿ?
ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ರವಿ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರನ್ನು ಘೋಷಣೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕುತೂಹಲಕಾರಿಯಾಗಿದೆ.
ಸ್ವತಃ ಮೋದಿ ಅವರೇ ರವಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿರ್ದೇಶನ ಮಾಡಿದ್ದಾರೆ ಎಂದು ಮಾತುಗಳು ಕೂಡಾ ರಾಜಕೀಯ ಪಡಸಾಲೆಯಲ್ಲಿ ಅಡ್ಡಾಡ್ಡುತ್ತಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಈ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಮುಖ್ಯಮಂತ್ರಿ ಆದ ಮೇಲೆ ಲೋಕಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರಾಜಿತಗೊಂಡರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗಡೆ ಗೆಲುವು ಸಾಧಿಸಿದ್ದರು.
ಸದಾನಂದಗೌಡ ಅವರು ಕೂಡ ಲೋಕಸಭೆ ಚುನಾವಣೆಗೆ ಸ್ಪಧಿಸುವುದು ಖಚಿತವಾಗಿದೆ. ಆದರೆ, ಹಾಲಿ ಕ್ಷೇತ್ರವನ್ನು ಬದಲಾವಣೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬದಲಾಗಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸುವ ಸಾಧ್ಯತೆ ಹೆಚ್ಚಾಗಿವೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ಈಗ ಹಾಲಿ ಸಂಸದರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಮೋದಿ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಮತ್ತೊಮ್ಮೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೇ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಸದಾನಂದ ಗೌಡರ ಶಾಸಕ ಸ್ಥಾನ (ವಿಧಾನಪರಿಷತ್ ಸದಸ್ಯತ್ವ) ಜೂನ್ 2014ಕ್ಕೆ ಮುಗಿಯಲಿದೆ. ಒಂದು ಅಂದಾಜಿನ ಪ್ರಕಾರಕ್ಕೆ ಲೋಕಸಭೆ ಚುನಾವಣೆ ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಯುವ ಸಾಧ್ಯತೆಯಿದೆ.
ಯೋಜಿತ ತಯಾರಿ: ಮಾಜಿ ಸಚಿವರಾದ ಆರ್ ಅಶೋಕ್, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಉಮೇಶ್ ಕತ್ತಿ ಸೇರಿದಂತೆ ಹಲವಾರು ಪ್ರಮುಖ ನಾಯಕರು ಲೋಕಸಭೆಗೆ ಪ್ರವೇಶ ಪಡೆಯಲು ಇಚ್ಛಿಸಿದ್ದಾರೆ ಎಂಬ ಮಾಹಿತಿಯಿದೆ. ಪಕ್ಷದ ನಾಯಕರ ಅನುಭವ, ಜಾತಿ ಆಧಾರ, ಇತ್ತೀಚಿನ ಸಾಧನೆ, ಜನಮನ್ನಣೆ ಪರಿಗಣಿಸಿ ಟಿಕೆಟ್ ಹಂಚಿಕೆ ಮಾಅಡಲು ಬಿಜೆಪಿ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಬಿಜೆಪಿ ತಯಾರಿ ಭರ್ಜರಿಯಾಗಿ ಸಾಗಿದೆ.
ಬಿಜೆಪಿಯ ಅಧಿಕೃತ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸಂದರ್ಭದಲ್ಲೆ ನರೇಂದ್ರ ಮೋದಿ ಅವರು ತಮ್ಮದೇ ಆದ ಹೊಸ ಟೀಂ ಕಟ್ಟಿದರು.
ಸಾಮಾಜಿಕ ಜಾಲ ತಾಣಗಳ ಉಸ್ತುವಾರಿ ನೋಡಿಕೊಳ್ಳಲು ಹೊಸ ತಂಡ ನೇಮಿಸಿದ ಬೆನ್ನಲ್ಲೇ ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಪಡೆಯುವ ಸಾಧ್ಯತೆಯಿದೆ ಎಂಬ ಸಮೀಕ್ಷೆ ನಡೆಸಿದ ಸುದ್ದಿಯೂ ಹೊರಬಿದ್ದಿತ್ತು. ಒಟ್ಟಾರೆ, ಈ ಬಾರಿ ಲೋಕಸಭೆಗೆ ಹೊಸ ಮುಖಗಳನ್ನು ತುಂಬಲು ಬಿಜೆಪಿ ಸಿದ್ದತೆ ನಡೆಸಿದೆ.