ಕೊನೆಗೂ ಸರಕಾರೀ ಬಂಗ್ಲೆ ಖಾಲಿ ಮಾಡಿದ ಯೋಗೇಶ್ವರ್: ಸಭಾಪತಿಗೆ ಹಂಚಿಕೆ
ಬೆಂಗಳೂರು, ಅ 20: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೊನೆಗೂ ಸರಕಾರೀ ನಿವಾಸವನ್ನು ಖಾಲಿ ಮಾಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳು ಆಗಿದ್ದರೂ, ಸೈನಿಕ ಮನೆ ಖಾಲಿ ಮಾಡಿರಲಿಲ್ಲ.
ಸರಕಾರದ ಸೂಚನೆಯ ನಂತರವೂ ಯೋಗೇಶ್ವರ್ ಬಂಗ್ಲೆ ಖಾಲಿ ಮಾಡಿರಲಿಲ್ಲ. ಈಗ, ಈ ನಿವಾಸವನ್ನು ಯೋಗೇಶ್ವರ್ ಖಾಲಿ ಮಾಡಿದ್ದು, ಇದನ್ನು ಕೂಡಲೇ ಸರಕಾರ ಹಂಚಿಕೆಯೂ ಮಾಡಿಯಾಗಿದೆ. ಜುಲೈ 28, 2021ರಂದು ಬೊಮ್ಮಾಯಿಯವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆ ವೇಳೆ, ಸಂಪುಟ ಪುನರ್ ರಚನೆಗೊಂಡು, ಯೋಗೇಶ್ವರ್ ಅವರಿಗೆ ಕೊಕ್ ನೀಡಲಾಗಿತ್ತು. ಅವರು, ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದರು.
ಬೊಮ್ಮಾಯಿ ಸರಕಾರದಲ್ಲಿ ಯೋಗೇಶ್ವರ್ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ, ಇದ್ದ ಸಚಿವ ಸ್ಥಾನವೂ ಹೋಗಿತ್ತು. ಆದರೂ, ಮುಂದೆ ಸಚಿವನಾಗುತ್ತೇನೆ ಎನ್ನುವ ಅದಮ್ಯ ವಿಶ್ವಾಸದಲ್ಲಿದ್ದ ಯೋಗೇಶ್ವರ್ ನಿವಾಸ ಖಾಲಿ ಮಾಡಲು ಒಪ್ಪಿರಲಿಲ್ಲ ಎಂದು ಹೇಳಲಾಗುತ್ತಿತ್ತು. ಸಮಯಾವಕಾಶ ಕೇಳಿದ್ದರು ಎನ್ನುವ ಮಾತೂ ಚಾಲ್ತಿಯಲ್ಲಿತ್ತು.
ಸೋನಿಯಾ ಗಾಂಧಿ ಮನೆ ಮುಂದೆ ಇದ್ದ 'ಕತ್ತೆ'ಯನ್ನು ಸಿದ್ದರಾಮಯ್ಯ ಓಡಿಸಿದ ಕಥೆ
ನಗರದ ಹೃದಯ ಭಾಗದಲ್ಲಿರುವ ನಿವಾಸ ಆಗಿರುವುದರಿಂದ, ಬೊಮ್ಮಾಯಿ ಸರಕಾರದ ಹಲವು ಸಚಿವರು ಈ ನಿವಾಸದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಈ ಬಂಗ್ಲೆಯನ್ನು ಸಭಾಪತಿಗೆ ಹಂಚಿಕೆ ಮಾಡಲಾಗಿದೆ.
ವಿಧಾನಸೌಧ ಮತ್ತು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಹತ್ತಿರದ ನಿವಾಸ
ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದ ಪಕ್ಕ ಈ ಬಂಗ್ಲೆಯಿದ್ದು, ವಿಧಾನಸೌಧ ಮತ್ತು ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಹತ್ತಿರದ ನಿವಾಸವಾಗಿದೆ. ಹಾಗಾಗಿ, ನೂತನ ಸಚಿವರುಗಳು ಈ ಬಂಗ್ಲೆಗೆ ಪಟ್ಟು ಹಿಡಿದಿದ್ದರು. ಇದರಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ್ ಸಿಂಗ್ ಪ್ರಮುಖರು. ಈಗ, ಈ ನಿವಾಸದ ಕೀಯನ್ನು ಯೋಗೇಶ್ವರ್ ಅವರು ಸರಕಾರಕ್ಕೆ ಹಸ್ತಾಂತರಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಸತತ ಪ್ರಯತ್ನದ ನಂತರ ಈ ಸರಕಾರಿ ನಿವಾಸವನ್ನು ಪಡೆದುಕೊಳ್ಳುವಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಯಶಸ್ವಿಯಾಗಿದ್ದಾರೆ. ಹೊರಟ್ಟಿಯವರಿಗೆ ಈ ನಿವಾಸ ಹಂಚಿಕೆಯಾಗಿದೆ ಎನ್ನುವ ಮಾಹಿತಿಯಿದೆ. ನವೆಂಬರ್ ಮೊದಲ ವಾರದಲ್ಲಿ ಹೊರಟ್ಟಿ ಈ ನಿವಾಸಕ್ಕೆ ಪ್ರವೇಶಿಸಲಿದ್ದಾರೆ. ಈ ನಿವಾಸಕ್ಕಾಗಿ ಹೊರಟ್ಟಿಯವರು ಆರೇಳು ಪತ್ರವನ್ನು ಸರಕಾರಕ್ಕೆ ಬರೆದಿದ್ದರು. (ಸಾಂದರ್ಭಿಕ ಚಿತ್ರ)
ಸರಕಾರ, ಬೇರೆ ನಿವಾಸವನ್ನು ಬಸವರಾಜ ಹೊರಟ್ಟಿಯವರಿಗೆ ನೀಡಲು ಮುಂದಾಗಿತ್ತು
ಸರಕಾರ, ಬೇರೆ ನಿವಾಸವನ್ನು ಬಸವರಾಜ ಹೊರಟ್ಟಿಯವರಿಗೆ ನೀಡಲು ಮುಂದಾಗಿತ್ತು. ಆದರೆ, ಕೊಡುವುದಿದ್ದರೆ ಈ ನಿವಾಸ ಕೊಡಿ ಇಲ್ಲದಿದ್ದರೆ ಬೇಡ ಎನ್ನುವ ಒತ್ತಡವನ್ನು ಹೊರಟ್ಟಿಯವರು ಹಾಕಿದ್ದರಿಂದ ಸರಕಾರ ಈ ಬಂಗ್ಲೆಯನ್ನು ಹೊರಟ್ಟಿಯವರಿಗೆ ಹಂಚಿದೆ. ಈ ವರ್ಷದ ಫೆಬ್ರವರಿಯಲ್ಲಿ ಹೊರಟ್ಟಿಯವರು ಮೇಲ್ಮನೆಯ ಸಭಾಪತಿಗಳಾಗಿ ಆಯ್ಕೆಯಾಗಿದ್ದರು. ಶಿಷ್ಟಾಚಾರದ ಪ್ರಕಾರ, ಸರಕಾರ ಇವರಿಗೆ ನಿವಾಸ ಹಂಚಿಕೆ ಮಾಡಬೇಕಿತ್ತು. ಕೊನೆಗೂ, ಸರಕಾರ ಇವರಿಗೆ ನಿವಾಸವನ್ನು ನೀಡಿದೆ.
ಹೊರಟ್ಟಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು
"ಮನೆ ಕೊಡುವಂತೆ ನಾನು ರಾಜ್ಯ ಸರಕಾರದ ಬಳಿ ಭಿಕ್ಷೆ ಏನೂ ಬೇಡುತ್ತಿಲ್ಲ. ನಿವಾಸ ಹಂಚಿಕೆ ಮಾಡಿದರೆ ಮಾಡಲಿ, ಇನ್ನಾಂದರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ. ಈ ವಿಚಾರದಲ್ಲಿ ಕೊನೆಯ ಬಾರಿ ಸರಕಾರಕ್ಕೆ ಪತ್ರ ಬರೆಯುವೆ, ಸರಕಾರದ ವಿಳಂಬ ನೀತಿ ನನಗೆ ತೀವ್ರ ಬೇಸರ ತಂದಿದೆ" ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.