ಚೆಕ್ ಬೌನ್ಸ್ ಕೇಸ್ : ಮಾಜಿ ಸಚಿವ ಬಾಬುರಾವ್ ಗೆ ಸದ್ಯಕ್ಕೆ ರಿಲೀಫ್
ಚೆಕ್ ಬೌನ್ಸ್ ಆರೋಪದಡಿ ಬಾಬೂರಾವ್ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಗೆ 15ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ.
ಬೆಂಗಳೂರು, ಏಪ್ರಿಲ್ 17: ಚೆಕ್ ಬೌನ್ಸ್ ಆರೋಪದಡಿ ಬಾಬೂರಾವ್ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರಿಗೆ 15ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಆದರೆ, ಮುಂದಿನ ವಿಚಾರಣೆಗೆ ತಪ್ಪದೆ ಖುದ್ದು ಹಾಜರಾಗುವುದಂತೆ ನ್ಯಾಯಾಲಯ ಸೂಚಿಸಿದೆ.
ಜೂನ್ ಒಂದಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ವಿರುದ್ಧ 11.88 ಕೋಟಿ ರೂ. ವಂಚನೆ ಮತ್ತು ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದ್ದು, ಅಂಜನಾ ಎಂಬುವರಿಂದ ಹಲವು ಕಂತುಗಳಲ್ಲಿ ಗಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗುವಂತೆ ಈ ಹಿಂದೆ ಸಮನ್ಸ್ ಜಾರಿಯಾಗಿದ್ದರು. ಗೈರು ಹಾಜರಾಗಿದ್ದರು.
2012ರಲ್ಲಿಯೂ ಬಾಬೂರಾವ್ ಚಿಂಚನಸೂರ್ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ದಾಖಲಾಗಿತ್ತು. ಆಗ ಅವರು ಹೈಕೋರ್ಟ್ ಮೆಟ್ಟಿಲೇರಿ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಈಗ ಲೋಕಾಯುಕ್ತ ಕೋರ್ಟ್ ಮತ್ತೊಮ್ಮೆ ಅವರ ವಿರುದ್ಧ ತನಿಖೆ ನಡೆಸಲು ಆದೇಶ ನೀಡಲಾಗಿತ್ತು.
ಬಾಬೂರಾವ್ ಚಿಂಚನಸೂರ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಚಿಂಚನಸೂರ್ ಅವರು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಆಂಧ್ರಪ್ರದೇಶದಲ್ಲಿ ಎಂ.ಎಲ್.ಸಿ ಮಾಡುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ಪಡೆದು, ವಂಚಿಸಿದ್ದಾರೆ ಎಂದು ಹೈದರಾಬಾದ್ ಮೂಲದ ಡಿ.ವಿಜಯಪಾಲರೆಡ್ಡಿ ಎಂಬುವವರು ಹಿಂದೆ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.