ಸಿದ್ದರಾಮಯ್ಯಗೆ ಕೆಪಿಸಿಸಿ ಸಾರಥ್ಯ ನೀಡಿ: ಎ.ಮಂಜು ಆಗ್ರಹ
ಬೆಂಗಳೂರು, ಜೂನ್ 14: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮೊದಲ ಆದ್ಯತೆ ಅವರಿಗೆ ನೀಡಬೇಕು ಎಂದು ಮಾಜಿ ಸಚಿವ ಎ. ಮಂಜು ಹೇಳಿದರು.
ಗುರುವಾರ ಖಾಸಗಿ ಹೋಟೆಲ್ ಒಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜತೆಗೆ ಬಿ.ಕೆ. ಹರಿಪ್ರಸಾದ್ ಡಿ.ಕೆ. ಶಿವಕುಮಾರ್, ಕೆ.ಎಚ್. ಮುನಿಯಪ್ಪ ಅವರನ್ನೂ ಪರಿಗಣಿಸಬಹುದು. ಭವಿಷ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಇವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಖಾತೆ ಆಯ್ತು, ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶುರುವಾಯ್ತು ಲಾಬಿ
ಕಾಂಗ್ರೆಸ್ ಸಂಕ್ರಮಣ ಕಾಲಘಟ್ಟದಲ್ಲಿದೆ, ಬರಲಿರುವ ಲೋಕಸಭೆ ಚುನಾವಣೆಗೆ ಗಟ್ಟಿಯಾದ ಸಮರ್ಥ ನಾಯಕತ್ವ ಬೇಕು, ನಮ್ಮ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಹೋರಾಟ ಮಾಡಬೇಕಿದೆ. ಕಾಂಗ್ರೆಸ್ ಸೋಲಿಗೆ ನಾಯಕತ್ವ ಕಾರಣವಲ್ಲ, ಕೊನೆಯಲ್ಲಿ ತೆಗೆದುಕೊಂಡ ಕೆಲ ತೀರ್ಮಾನಗಳೇ ಸಿದ್ದರಾಮಯ್ಯ ಹಿನ್ನಡೆಗೆ ಕಾರಣವಾಗಿದೆ, ಪಕ್ಷಕ್ಕೂ ಹಾನಿಯಾಗಿದೆ ಎಂದರು. ದಿನೇಶ್ ಗುಂಡೂರಾವ್ ಅಸಮರ್ಥರು ಎಂದು ನಾನು ಹೇಳುತ್ತಿಲ್ಲ, ಸಿದ್ದರಾಮಯ್ಯ ಎಲ್ಲರಿಗಿಂತ ಸಮರ್ಥರು ಎಂದು ಹೇಳುತ್ತಿದ್ದೇನೆ ಎಂದರು.
ಸಿದ್ದರಾಮಯ್ಯ , ಡಿಕೆ ಶಿವಕುಮಾರ್, ಕೆ.ಎಚ್. ಮುನಿಯಪ್ಪ ಹರಿಪ್ರಸಾದ್ ಸೇರಿ ಹಲಾವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲು ಸಾಮರ್ಥ್ಯವಿದೆ. ನಾನು ಯಾರ ಪರವೂ ಅಲ್ಲ, ವಿರೋಧವೂ ಅಲ್ಲ, ಪಕ್ಷದ ಪರ, ಕಾರ್ಯಕರ್ತರು ಉಳಿಯಬೇಕು, ಅವರ ಬದ್ಧತೆಗೆ ಧಕ್ಕೆಯಾಗಬಾರದು ಎಂದ ಅವರು ಸರ್ಕಾರಕ್ಕೂ ಪಕ್ಷಕ್ಕೂ ಸಂಬಂಧ ಕಟ್ಟಬೇಡಿ. ಈಗ ಮುಂಚೂಣಿಯಲ್ಲಿ ನಿಂತು ಪಕ್ಷ ಕಟ್ಟದಿದ್ದರೆ ಮುಂದೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.