ಈಶ್ವರಪ್ಪ ವಿರುದ್ದ 'ದಲಿತ ಬ್ರಹ್ಮಾಸ್ತ್ರ' ಪ್ರಯೋಗಿಸಲು ಬಿಎಸ್ವೈ ಸಜ್ಜು?
ವಿರೋಧ ಪಕ್ಷದ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ, ಆಡಳಿತ ಪಕ್ಷದ ವೈಫಲ್ಯವನ್ನು ಜನರಿಗೆ ತಲುಪಿಸುವುದನ್ನು ಬಿಟ್ಟು, ಬಿಜೆಪಿಗೆ ತನ್ನದೇ ಪಕ್ಷದ ಆಂತರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದೇ ದೊಡ್ಡ ಕೆಲಸವಾದಂತಿದೆ.
ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಪಕ್ಷದ ಇಬ್ಬರು ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮನಸ್ತಾಪ ದಿನ ಹೋದಂತೇ ತಿರುವು ಪಡೆಯುತ್ತಿದ್ದು, ಈಶ್ವರಪ್ಪನವರನ್ನು ಹಣೆಯಲು ರಾಜ್ಯಾಧ್ಯಕ್ಷ ಯಡಿಯೂರಪ್ಪ 'ದಲಿತ ಕಾರ್ಡ್' ಆಟಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ.
ಇದಕ್ಕೆ ಪೂರಕ ಎನ್ನುವಂತೆ, ಹಿಂದೆ ತಾನು ಕಾಂಗ್ರೆಸ್ ನಲ್ಲಿದ್ದಾಗ ದಲಿತರು ಸಿಎಂ ಆಗಬೇಕು ಎನ್ನುವ ಗಂಭೀರ ಚರ್ಚೆಗೆ ನಾಂದಿ ಹಾಡಿದ್ದ, ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಂ ಅಕ್ಟೋಬರ್ ಹದಿನಾಲ್ಕರಂದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. (ರಾಜ್ಯ ಬಿಜೆಪಿಯಲ್ಲಿ ಗೊಂದಲವಿದೆ, ಈಶ್ವರಪ್ಪ)
ಸಮುದಾಯದ ಪ್ರಭಾವಿ ಲೀಡರ್ ಅಲ್ಲದಿದ್ದರೂ ಶಿವರಾಂ ಅವರನ್ನು ಪಕ್ಷದ ದಲಿತ ನಾಯಕ ಎಂದು ಬಿಂಬಿಸಿ, ಈಶ್ವರಪ್ಪನವರನ್ನು ಪರ್ಮನೆಂಟಾಗಿ ಪಕ್ಷದಲ್ಲಿ ಮೂಲೆಗುಂಪು ಮಾಡಲು ಯಡಿಯೂರಪ್ಪ ಹಣಿದಿರುವ ರಾಜಕೀಯ ಆಟ ಇದು ಎನ್ನಲಾಗುತ್ತಿದೆ.
ಈಶ್ವರಪ್ಪಗೆ ನೀವು ಬುದ್ದಿ ಹೇಳುತ್ತೀರೋ ಅಥವಾ ನಾನೇ ಕ್ರಮ ತೆಗೆದುಕೊಳ್ಳಲೋ ಎಂದು ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂಲಾಲ್ ಅವರ ಬಳಿ ಬಿಎಸ್ವೈ ಖಾರವಾಗಿ ಪ್ರಶ್ನಿಸಿದ್ದರು ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ. ಮುಂದೆ ಓದಿ..
ಪಕ್ಷ ಇನ್ನಷ್ಟು ಮುಜುಗರಕ್ಕೀಡಾಗುವ ಹೇಳಿಕೆ
ಕೋರ್ ಕಮಿಟಿ ಸಭೆಯಲ್ಲಿ ಪ್ರತ್ಯೇಕ ಸಂಘಟನೆ ಕಟ್ಟಿ ಪಕ್ಷಕ್ಕೆ ಮುಜುಗರ ತರಬೇಡಿ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕೈಬಿಡಿ ಎಂದು ರಾಂಲಾಲ್, ಈಶ್ವರಪ್ಪನವರಿಗೆ ಖಡಕ್ ಎಚ್ಚರಿಕೆ ನೀಡಿದ್ದರೂ ತಮ್ಮ ನಿರ್ಧಾರದಿಂದ ಈಶ್ವರಪ್ಪ ಹಿಂದಕ್ಕೆ ಸರಿಯದೇ ಪಕ್ಷ ಇನ್ನಷ್ಟು ಮುಜುಗರಕ್ಕೀಡಾಗುವ ಹೇಳಿಕೆಯನ್ನು ನೀಡುತ್ತಿರುವುದನ್ನು ಬುಧವಾರವೂ (ಅ 12) ಮುಂದುವರಿಸಿದ್ದಾರೆ.
ಬಿಎಸ್ವೈ ಹೊಸ ತಂತ್ರಗಾರಿಕೆ
ತಮ್ಮ ಮಾತು ಕೇಳದ ಈಶ್ವರಪ್ಪನವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಉಚ್ಚಾಟಿಸಿ, ಅದೇ ಸಮಯದಲ್ಲಿ ಶಿವರಾಂ ಅವರನ್ನು ದಲಿತ ನಾಯಕನನ್ನಾಗಿ ಬೆಳೆಸುವ ಮೂಲಕ ಯಡಿಯೂರಪ್ಪ ಹೊಸ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನುವ ಮಾಹಿತಿ ಬಿಜೆಪಿ ವಲಯದಲ್ಲಿ ಹರಿದಾಡುತ್ತಿದೆ.
ಪಕ್ಷದಿಂದ ಉಚ್ಚಾಟಿಸುವುದು ಸುಲಭವಲ್ಲ
ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಪಕ್ಷದಲ್ಲಿ ಒಮ್ಮತವಿದ್ದರೂ, ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಪಕ್ಷದ ಹಲವು ಮುಖಂಡರಲ್ಲಿ ಬೇಸರವಿದೆ ಎನ್ನುವ ವಿಚಾರ ಗೌಪ್ಯವಾಗಿ ಉಳಿದಿಲ್ಲ. ಯಡಿಯೂರಪ್ಪನವರ ಏಕಪಕ್ಷೀಯ ನಿರ್ಧಾರಕ್ಕೆ ಪಕ್ಷದ ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ ವಿರೋಧ ಪಕ್ಷವಾಗಿದ್ದೂ ಬಹಿರಂಗವಾಗಿತ್ತು. ಹೀಗಾಗಿ, ಈಶ್ವರಪ್ಪನವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಪಕ್ಷದೊಳಗೆ ತೀವ್ರ ವಿರೋಧವಾಗುವ ಸಾಧ್ಯತೆ ಹೆಚ್ಚು.
ಮಾಜಿ ಐಎಎಸ್ ಅಧಿಕಾರಿ ಶಿವರಾಂ
ಈಶ್ವರಪ್ಪನವರ ವಿರುದ್ದ ತಕ್ಷಣಕ್ಕೆ ಶಿಸ್ತಿನ ಕ್ರಮ ತೆಗೆದುಕೊಳ್ಳುವುದು ಕಷ್ಟ ಎಂದರತಿರುವ ಬಿಎಸ್ವೈ, ಶಿವರಾಂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅಹಿಂದ ಮತಗಳು ಪಕ್ಷದಿಂದ ದೂರ ಹೋಗದಂತೆ ಗಂಭೀರ ರಾಜಕೀಯ ನಡೆ ಇಡುತ್ತಿದ್ದಾರೆ.
ಆರ್ ಎಸ್ ಎಸ್ ಶಿವಮೊಗ್ಗ ಘಟಕ
ಪಕ್ಷದ ಮಾತೃ ಸಂಘಟನೆ ಆರ್ ಎಸ್ ಎಸ್ ಶಿವಮೊಗ್ಗ ಘಟಕದ ಮುಖಂಡರೊಬ್ಬರು ಈಶ್ವರಪ್ಪನವರ ಜೊತೆ ಕೈಜೋಡಿಸಿರುವ ವಿಚಾರವನ್ನರಿತಿರುವ ಬಿಎಸ್ವೈ, ಕೆ ಶಿವರಾಂ ಅವರಿಗೆ ಅಕ್ಟೋಬರ್ 14ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯುವ ಸಮಾವೇಶದ ಮೂಲಕ ಪಕ್ಷಕ್ಕೆ ಭರ್ಜರಿ ಎಂಟ್ರಿ ಕೊಡಿಸಲಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಳ್ಳಬಾರದು ಎಂದು ಬಿಎಸ್ವೈ ಖಡಕ್ ಎಚ್ಚರಿಕೆಯ ನಂತರ ತನ್ನ ನಿರ್ಧಾರದಿಂದ ಸ್ವಲ್ಪ ಮಟ್ಟಿಗೆ ಹಿಂದಕ್ಕೆ ಸರಿದಂತೆ ಕಾಣುವ ಈಶ್ವರಪ್ಪ, ಇನ್ನು ಮುಂದೆ ಬ್ರಿಗೇಡ್ ರಾಜಕೀಯೇತರ ಸಂಘಟನೆಯಾಗಿ ಮುಂದುವರಿಯಲಿದೆ. ಹಿಂದುಳಿದ, ದಲಿತ ವರ್ಗಗಳ ಸಮುದಾಯದ ಮಠಾಧೀಶರು ಈ ಸಂಘಟನೆಯೊಂದಿಗೆ ಗುರುತಿಸಿಕೊಂಡು ಬೆಂಬಲ ನೀಡಲಿದ್ದಾರೆ.