ಪೊಲೀಸರಿಗೆ ಸಂಪೂರ್ಣ ಮಾಹಿತಿ ಇರುತ್ತದೆ: ಎಂ.ಬಿ. ಪಾಟೀಲ್
ಬೆಂಗಳೂರು, ಸೆ. 04: ರಾಜ್ಯದಲ್ಲಿ ಡ್ರಗ್ಸ್ ವಿಚಾರವಾಗಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ ಮಾಡುವ. ಯುವ ನಟರಿದ್ದಾರೆ. ಹಾಗೂ ಇದಕ್ಕಾಗಿ ಪಾರ್ಟಿಗಳು ನಡೆಯುತ್ತವೆ ಎಂಬ ಹೇಳಿಕೆಯನ್ನು ನಿರ್ದೇಶನ ಇಂದ್ರಜಿತ್ ಲಂಕೇಶ್ ಕೊಟ್ಟಿದ್ದರು. ಅದಾದ ಬಳಿಕ ವಿಚಾರಣೆಯನ್ನೂ ಎದುರಿಸಿ ಮತ್ತಷ್ಟು ಮಾಹಿತಿಯನ್ನು ಸಿಸಿಬಿಗೆ ಕೊಟ್ಟಿದ್ದರು. ಅವರು ಕೊಟ್ಟಿದ್ದ ಮಾಹಿತಿಯನ್ನು ಆಧರಿಸಿ ಮತ್ತಷ್ಟು ಜನರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
Recommended Video
ಇದೇ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಸ್ಪೋಟಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಚಿತ್ರರಂಗದವರು, ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಸೇವನೆ ಕುರಿತು ಮಾತನಾಡಿರುವ ಅವರು, ಡ್ರಗ್ಸ್ ಎಲ್ಲೆಲ್ಲಿ ಮಾರಾಟ ಆಗುತ್ತದೆ ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ ಎಂಬ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡದ ಸ್ಟಾರ್ ನಟಿ ರಾಗಿಣಿ ಅವರು ಡ್ರಗ್ಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ವಿಚಾರಣೆಗೆ ಒಳಪಟ್ಟಿರುವ ಸಂದರ್ಭದಲ್ಲಿ ಮಾಜಿ ಗೃಹಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ರಾಜಕಾರಣಿಗಳ ಮಕ್ಕಳು
ರಾಜ್ಯದಲ್ಲಿ ಡ್ರಗ್ಸ್ ವಿಚಾರ ಕುರಿತು ಚರ್ಚೆ ಶುರುವಾಗಿ ತನಿಖೆ ಮುಂದುವರೆಯುತ್ತಿದ್ದಂತೆಯೆ ರಾಜಕಾರಣಿಗಳ ಮಕ್ಕಳು, ಚಿತ್ರರಂಗದವರ ಸುತ್ತಲೂ ತನಿಖೆ ಸುತ್ತುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಗೃಹಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಬೇರೆ ಯಾರೇ ಇರಬಹುದು. ಹಾಗಂತ ಅವರಿಗೇನು ವಿಶೇಷ ರಿಯಾಯತಿ ಇದೆಯಾ? ಕಾನೂನು ಎಲ್ಲರಿಗೂ ಒಂದೇ ಎಂದು ಎಂ.ಬಿ. ಪಾಟೀಲ್ ಹೆಳಿದ್ದಾರೆ.
ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಶಕ್ಕೆ
ಯಾರು ಎಷ್ಟೇ ಪ್ರಭಾವಿ ಆಗಿದ್ದರೂ ಕ್ರಮ ಅನಿವಾರ್ಯವಾಗಬೇಕು. ಅವರು, ಇವರು ಅಂತ ಯಾವುದೇ ಬೇಧಭಾವ ಮಾಡಬಾರದು. ನಾವು ಅಧಿಕಾರದಲ್ಲಿದ್ದಾಗ ಸಿನಿಮಾ ಇಂಡಸ್ಟ್ರಿ ಬಗ್ಗೆ ದೂರು ಬಂದಿರಲಿಲ್ಲ. ಆದರೆ ಸಿನಿಮಾ, ಮಾಡೆಲ್ ಇಂಡಸ್ಟ್ರಿಯಲ್ಲಿ ಇದು ಸ್ವಲ್ಪ ಕಾಮನ್ ಅಂತಾರೆ. ಸರ್ಕಾರ ಅದಕ್ಕೆ ಕಡಿವಾಣ ಹಾಕಬೇಕು ಎಂದಿದ್ದಾರೆ.
ಬೆಂಗಳೂರಿನಲ್ಲಿಯೂ ಹೆಚ್ಚಾಗಿದೆ
ಮಾದಕವಸ್ತುಗಳಿಗೆ ಕಡಿವಾಣ ಹಾಕಲು ಹಲವು ಬಾರಿ ಸಭೆ ನಡೆಸಿದ್ದೆವು. ಮೊದಲು ದೆಹಲಿ, ಮುಂಬೈ ಹಾಗೂ ಪಂಜಾಬ್ನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲೂ ಅದು ಹೆಚ್ಚಾಗುತ್ತಿದೆ. ಡ್ರಗ್ಸ್ಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಎಲ್ಎಸ್ ಡಿ ಸೇರಿದಂತೆ ಸಿಂಥೆಟಿಕ್ ಡ್ರಗ್ಸ್ ಬಹಳ ಅಪಾಯಕಾರಿ.
ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ
ಈ ಎಲ್ಲ ಅಪಾಯಕಾರಿ ಡ್ರಗ್ಸ್ಗಳು ಬೇರೆ ರಾಷ್ಟ್ರಗಳಿಂದಲೇ ಬರುತ್ತವೆ. ಯಾವ ಮಾರ್ಗದಿಂದ ಸರಬರಾಜು ಮಾಡುತ್ತಾರೆ ಎಂಬುದರ ಮೇಲೆ ಗಮನ ಇರಬೇಕು. ನಾವು ಹಿಂದೆ ಅದಕ್ಕೆ ಮೆಚ್ಚಿನ ಒತ್ತು ನೀಡಿದ್ದೆವು. ಅದರಲ್ಲೂ ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನಹರಿಸಿದ್ದೆವು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಪೊಲೀಸರಿಗೆ ಮಾಹಿತಿ ಇರುತ್ತದೆ
ಮಾದಕ ವಸ್ತುಗಳು ಎಲ್ಲಿಂದ ಹೇಗೆ ಕಳ್ಳಸಾಗಣೆ ಆಗುತ್ತದೆ ಎಂದು ಮಾದಕವಸ್ತು ವಿಭಾಗಕ್ಕೆ ಸಂಪೂರ್ಣ ಮಾಹಿತಿ ಇರುತ್ತದೆ. ಜೊತೆಗೆ ಕಳ್ಳಸಾಗಣೆಯಾಗುವ ವಸ್ತು ಎಲ್ಲಿ ಮಾರಾಟ ಆಗುತ್ತದೆ ಎಂಬುದೂ ಸ್ಥಳೀಯ ಪೊಲೀಸರಿಗೆ ಗೊತ್ತಿರುತ್ತದೆ. ಹೀಗಾಗಿ ನಾವು ಆ ಎರಡೂ ಕಡೆಗೆ ಹೆಚ್ಚು ಗಮನಹರಿಸಿದ್ದೆವು. ಇವತ್ತು ಆನ್ಲೈನ್ನಲ್ಲೂ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸೈಬರ್ ಕ್ರೈಂ ವಿಭಾಗ ಕೂಡ ಡ್ರಗ್ಸ್ ಬಗ್ಗೆ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಮಣಿಪಾಲ್ನಲ್ಲಿ ಹಾವಳಿ
ನಮ್ಮ ಸರ್ಕಾರವಿದ್ದಾಗ ಮಂಗಳೂರಿನ ಮಣಿಪಾಲ್ನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿತ್ತು. ನಾನೂ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿನ ಪೊಲೀಸರೊಂದಿಗೆ ಸಭೆ ನಡೆಸಿ ನಿಯಂತ್ರಣಕ್ಕೆ ಮುಂದಾಗಿದ್ದೆ. ಸತತ ಪ್ರಯತ್ನದ ಬಳಿಕ ಮಣಿಪಾಲ್ನಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಲಾಗಿತ್ತು. ಈಗಲೂ ಸಹ ಮಾದಕವಸ್ತುವಿಗೆ ಕಡಿವಾಣ ಹಾಕಲು ಎಲ್ಲರೂ ಕೈಜೋಡಿಸಬೇಕು. ಈಗ ಈ ವಿಚಾರ ಹೆಚ್ಚು ಗಮನಸೆಳೆಯುತ್ತಿದೆ. ಆದರೆ ಇದು ಬರಿ ಚರ್ಚೆಗೆ ಮಾತ್ರ ಮುಗಿಯಬಾರದು. ಡ್ರಗ್ಸ್ ಹಾವಳಿಗೆ ತಾರ್ಕಿಕ ಅಂತ್ಯ ಹಾಕಬೇಕು ಎಂದು ಎಂ.ಬಿ. ಪಾಟೀಲ್ ಹೇಳಿದರು.