ಸಿಎಂ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಕಡು ಭ್ರಷ್ಟರು: ಶಂಕರ್ ಬಿದರಿ
ಬೆಂಗಳೂರು, ಸೆ. 18: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತರಳಿದ್ದಾರೆ. ಈ ಕಡೆ ರಾಜ್ಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಯಡಿಯೂರಪ್ಪ ಅವರು ಆ ಕಡೆ ತೆರಳುತ್ತಿದ್ದಂತೆಯೆ ನಾಯಕತ್ವ ಬದಲಾವಣೆ ಕುರಿತು ಇಲ್ಲಿ ಮಾತುಕತೆಗಳು ಶುರುವಾಗಿವೆ. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕ ಹಾಗೂ ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರು ಸಿಎಂ ಯಡಿಯೂರಪ್ಪ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಶಂಕರ್ ಬಿದರಿ ಅವರು ಮಾಡಿರುವ ಟ್ವೀಟ್ಗಳು ಬಿಜೆಪಿಯಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆಗಳು ದಟ್ಟವಾಗಿವೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಕುಟುಂಬಸ್ಥರು ಮಾಡುತ್ತಿರುವ ಭ್ರಷ್ಟಾಚಾರ ನಿಮಗೆ ಕಾಣಿಸುತ್ತಿಲ್ಲವೇ? ಎಂದು ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಬಿಜೆಪಿ ನಾಯಕ, ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರು ಸ್ಪೋಟಕ ಟ್ವೀಟ್ ಮಾಡಿದ್ದಾರೆ. ಅವರ ಭ್ರಷ್ಟಾಚಾರದಿಂದಾಗಿ ಪಕ್ಷದ ಸಿದ್ದಾಂತ, ಗೌರವ ಹಾಗೂ ಭವಿಷ್ಯ ಕಸದ ಬುಟ್ಟಿಗೆ ಎಸೆದಂತಾಗಿದೆ.
ರಾಜ್ಯ ಸಂಪುಟ ಸಂಕಟ: ಮೂವರು ಪ್ರಭಾವಿ ಸಚಿವರಿಗೆ ಹೈಕಮಾಂಡ್ ಶಾಕ್!
ಸಿಎಂ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಟಿವಿ ವರದಿಗಳು ನಿಮ್ಮ ಗಮನಕ್ಕೆ ಬಂದಿಲ್ಲವೇ? ತನಿಖಾ ಸಂಸ್ಥೆಗಳಾದ ಇಡಿ, ಐಟಿ ಇಲಾಖೆಗಳಿಗೆ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ? ನಿಮ್ಮ ನಿಷ್ಕ್ರೀಯತೆ ಇಡೀ ದೇಶಕ್ಕೆ ಯಾವ ಸಂದೇಶವನ್ನು ಕೊಡುತ್ತದೆ? ಇದು ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಟ್ಟಿಬೆಳೆಸಿದ ಪಕ್ಷವಾ ಎಂಬ ಸಂಶಯ ಮೂಡುತ್ತಿದೆ.
Recommended Video
ಕೇಶುಭಾಯಿ, ಚಿಮನ್ ಬಾಯಿ ಅವರ ವಿರುದ್ಧ ಕ್ರಮಕ್ಕೆ ಹಿಂಜರಿಯದಿದ್ದ ಬಿಜೆಪಿ ಯಡಿಯೂರಪ್ಪ ಅವರ ವಿರುದ್ಧ ಕ್ರಮಕ್ಕೆ ಹಿಂಜರಿಯುತ್ತಿರುವುದು ಏಕೆ? ಯಡಿಯೂರಪ್ಪ ಅವರ ವಿರುದ್ಧ ಕ್ರಮಕೈಗೊಳ್ಳದಷ್ಟು ಪಕ್ಷ ದುರ್ಬಲವಾಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಇದೀಗ ಬಿದರಿ ಅವರೇ ಯಡಿಯೂರಪ್ಪ ಮೇಲೆ ಗಂಭೀರ ಆರೋಪಗಳನ್ನು ಮಾಡಿರುವುದು ಬೇರೆ ಮುನ್ಸೂಚನೆಯನ್ನೇ ಕೊಡುತ್ತಿದೆ ಎನ್ನಲಾಗಿದೆ.