ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಸಾಹಿತಿ ಕುಂವಿ ಸೇರಿ 61 ಮಂದಿಗೆ ಬೆದರಿಕೆ ಪತ್ರ
ಬೆಂಗಳೂರು ಮೇ 14: ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ ಬಂದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸಾಹಿತಿ ಕುಂ.ವೀರಭದ್ರಪ್ಪ ನವರು ಹಾಗೂ ನಟ ಪ್ರಕಾಶ್ ರೈ ಸೇರಿದಂತೆ ಒಟ್ಟು 61 ಜನರಿಗೆ ಬೆದರಿಕೆ ಪತ್ರ ಬಂದಿದೆ. ಚಿತ್ರದುರ್ಗದಿಂದ ಈ ಪತ್ರ ಬಂದಿದೆ ಎನ್ನಲಾಗಿದೆ.
ಈಗಾಗಲೇ ಹಿಂದೊಮ್ಮೆ ಕುಂ ವೀರಭದ್ರಪ್ಪ ಅವರಿಗೆ ಪತ್ರವೊಂದು ಬಂದಿತ್ತು. ಆ ಸಂದರ್ಭದಲ್ಲಿ ಮಾಜಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಕುಂ ವೀರಭ್ರಪ್ಪ ಅವರ ಸಹಿತಿ ಬೆದರಿಕೆ ಇರುವ ಎಲ್ಲರಿಗೂ ಪೊಲೀಸ್ ಭದ್ರತೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ಈಗ ಮತ್ತೊಮ್ಮೆ ಪತ್ರ ಬಂದಿದೆ.
ಬೆಂಬಲಿಗರನ್ನು ಬೆಂಗಳೂರಿಗೆ ಕರೆತರಲು 3,000 ಬಸ್ ಬಾಡಿಗೆ ಪಡೆದ ಜೆಡಿಎಸ್
ಈಗ ಎರಡನೇ ಬಾರಿ ಬಂದಿರುವ ಪತ್ರದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಿಜಗುಣಾನಂದ ಸ್ವಾಮಿಜಿ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್ ಹಾಗೂ ಪ್ರಕಾಶ್ ರೈ, ದಿನೇಶ್ ಅಮಿನ್ ಮಟ್ಟು, ಸೇರಿದಂತೆ 61 ಮಂದಿ ಹೆಸರು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಹಿಂದೂ ರಾಷ್ಟ್ರಕ್ಕಾಗಿ, ಹಿಂದೂ ಯುವಕರು ಸಾವಿಗೀಡಾದಾಗ ನೀವುಗಳು ಮೌನವಹಿಸುತ್ತೀರಿ, ಮತಬ್ಯಾಂಕ್ಗಾಗಿ ನೀವು ಏನು ಬೇಕಾದರು ಮಾಡುತ್ತೀರಿ. ನೀವುಗಳು ಪೇಪರ್ ಹೀರೋ ಆಗಲು ಹೊರಟಿದ್ದೀರಿ ಎಂದು ಹೇಳಿ ಬರೆಯಲಾಗಿದೆ.
'ಸಿದ್ದರಾಮಯ್ಯ, ಕುಮಾರಸ್ವಾಮಿ, ಕುಂ. ವೀರಭದ್ರಪ್ಪ ಹಾಗೂ 61 ಜನ ಎಡಬಿಡಂಗಿ ಬುದ್ಧಿಜೀವಿ ಸಾಹಿತಿಗಳಿಗೇ.. ಹಿಜಾಬ್, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದೀರಿ. ನೀವು ನಮ್ಮ ದೇಶದ ಅನ್ನ ಉಂಡು, ದೇಶದ ಗಾಳಿ ತೆಗೆದುಕೊಂಡು ದೇಶಕ್ಕೆ ದ್ರೋಹ ಬಗೆಯುತ್ತಿದ್ದೀರಿ. ನಿಮ್ಮ ಸರ್ವನಾಶ ನಿಶ್ಚಿತ. ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕೆ ಸಿದ್ಧರಾಗಿ. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಿ' ಅಂತ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಈ ವಿಚಾರದಲ್ಲಿ ನನಗೆ ಅಂಜಿಕೆ ಇಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ದೇವರನ್ನು ನಾನು ನಂಬಿರುವೆ. ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. 61 ಮಂದಿಗೆ ಬಂದಿರುವ ಜೀವ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
'ಮೊದಲಿನಿಂದಲೂ ನನಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಈಗ ನನ್ನ ಸೇರಿದಂತೆ 61 ಜನರನ್ನು ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಡಲು ನಿರ್ಧರಿಸಿರುವೆ. ಈಗಾಗಲೇ ಕೊಟ್ಟೂರು ಪೊಲೀಸ್ ಇನ್ಸ್ಪೆಕ್ಟರ್ ನನಗೆ ಕರೆ ಮಾಡಿ, ಭದ್ರತೆ ಕೊಡುವುದಾಗಿ ತಿಳಿಸಿದ್ದಾರೆ' ಎಂದು ಸಾಹಿತಿ ಕುಂ. ವೀರಭದ್ರಪ್ಪ ಅವರು ಹೇಳಿದ್ದಾರೆ.