ಕೊನೆಗೂ ಉಪ ಚುನಾವಣೆ ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಅ. 15: ಉಪ ಚುನಾವಣೆ ಹಿನ್ನೆಲೆಯಲ್ಲಿ ಆತಂಕದಲ್ಲಿದ್ದ ರಾಜ್ಯ ಬಿಜೆಪಿಗೆ ಬೂಸ್ಟ್ ಸಿಕ್ಕಿದೆ. ಕೊನೆಗೂ ಉಪ ಚುನಾವಣೆ ಅಖಾಡಕ್ಕಿಳಿಯಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಆ ಮೂಲಕ ಆತಂಕದಲ್ಲಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಆಸರೆಯಾಗಿದ್ದಾರೆ.
ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಳಿಕ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯ ಮೂಲಕ ಮೊದಲ ಸವಾಲು ಬಿಜೆಪಿಗೆ ಎದುರಾಗಿದೆ. ಆದರೆ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಮೌನವಾಗಿರುವುದು ಇಡೀ ಬಿಜೆಪಿ ಪಾಳೆಯದ ಮೇಲೆ ಪರಿಣಾಮ ಬೀರಿತ್ತು. ಬಿಜೆಪಿ ಭದ್ರಕೋಟೆಯಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರ ಕೈತಪ್ಪುವ ಆತಂಕ ಬಿಜೆಪಿ ನಾಯಕರಿಗೆ ಎದುರಾಗಿತ್ತು. ಆದರೆ ಇದೀಗ ಚುನಾವಣಾ ಅಖಾಡಕ್ಕಿಳಿಯುವ ಭರವಸೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ನಾಯಕರಿಗೆ ಕೊಟ್ಟಿದ್ದಾರೆ. ಅದರಿಂದ ರಾಜ್ಯ ಬಿಜೆಪಿಗೆ ಬಲ ಬಂದಂತಾಗಿದೆ.
ಬಿಜೆಪಿಗರಿಗೆ ಆತಂಕ ಮೂಡಿಸಿದ್ದ ಮಾಜಿ ಸಿಎಂ ಮೌನ!
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎದುರಾಗಿದ್ದ ಪ್ರತಿ ಉಪ ಚುನಾವಣೆಯಲ್ಲಿಯೂ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಸ್ತುವಾರಿ ವಹಿಸಿಕೊಂಡು ಚುನಾವಣೆಯಲ್ಲಿ ಹೆಚ್ಚು ಗೆಲವು ಸಾಧಿಸಿದ್ದರು. ಆದರೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ವಿಜಯೇಂದ್ರ ಅವರನ್ನೂ ನಿರ್ಲಕ್ಷಿಸಲಾಗಿತ್ತು. ಈಗಿನ ಉಪ ಚುನಾವಣೆಯಲ್ಲಿ ಮೊದಲಿಗೆ ಯಾವುದೆ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿರಲಿಲ್ಲ. ವಿಜಯೇಂದ್ರ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಂತೆಯೆ ಹಾನಗಲ್ ಉಪ ಚುನಾವಣೆ ಉಸ್ತುವಾರಿಗಳ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿತ್ತು. ಆ ಬಳಿಕ ಯಡಿಯೂರಪ್ಪ ಮತ್ತಷ್ಟು ಮೌನಿಯಾಗಿದ್ದರು.
ಬಿಜೆಪಿ ಭದ್ರಕೋಟೆ ತಪ್ಪುವ ಆತಂಕ!
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಪ್ರಚಾರ ಮಾಡಲು ಒಪ್ಪಿಕೊಂಡಿರುವ ಮಾಹಿತಿ ಬಂದಿದೆ. ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಗೆಲ್ಲುವ ವಿಶ್ವಾಸ ರಾಜ್ಯ ಬಿಜೆಪಿ ನಾಯಕರಿಗೆ ಇತ್ತು. ಆದರೆ ಹಾನಗಲ್ನಲ್ಲಿ ಆ ವಿಶ್ವಾಸ ಇರಲಿಲ್ಲ. ಅಭ್ಯರ್ಥಿ ಆಯ್ಕೆ ಗೊಂದಲಗಳು ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿತ್ತು. ಇದೀಗ ಸ್ವತಃ ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿರುವುದು ಮತ್ತೆ ಬಿಜೆಪಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
ಬಿಜೆಪಿ ಅಭ್ಯರ್ಥಿಗಳ ಪರ ಯಡಿಯೂರಪ್ಪ ಪ್ರಚಾರ!
ಅಕ್ಟೋಬರ್ 21ರಿಂದ ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಪ್ರಚಾರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಗವಹಿಸುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವವರೆಗೆ ಯಡಿಯೂರಪ್ಪ ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಮೊದಲಿಗೆ ಅ. 21ರಂದು ಹಾನಗಲ್ ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಚಾರ ಆರಂಭಿಸಲಿದ್ದಾರೆ. ಆ ಬಳಿಕ ಸಿಂದಗಿಯಲ್ಲಿ ಪ್ರಚಾರ ಮಾಡಲಿದ್ದಾರೆ. ತಮ್ಮ ಆಪ್ತರಾಗಿದ್ದ ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು ಎಂಬ ಮಾಹಿತಿಯಿದೆ. ಜೊತೆಗೆ ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಶಿವರಾಜ ಸಜ್ಜನರ್ ಕೂಡ ಯಡಿಯೂರಪ್ಪ ಅವರ ಆಪ್ತರು. ಹೀಗಾಗಿ ಯಡಿಯೂರಪ್ಪ ಮನಸ್ಸು ಬದಲಿಸಿದ್ದಾರೆ ಎಂಬ ಮಾಹಿತಿಯಿದೆ.
Recommended Video
ಗುರುವಿನೊಂದಿಗೆ ಸಿಎಂ ಬೊಮ್ಮಾಯಿ ಪ್ರಚಾರ
ಅಕ್ಟೋಬರ್ 17 ರಿಂದ ಹಾನಗಲ್ ತೆರಳಿ ಪ್ರಚಾರ ಕೈಗೊಳ್ಳಲಾಗುವುದು ನಂತರ ಸಿಂಧಗಿಯಲ್ಲಿ 2 ದಿನಗಳ ಪ್ರಚಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಅ. 21ರ ನಂತರ ಹಾನಗಲ್ ಹಾಗೂ ಸಿಂಧಗಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.