ಭೂಸುಧಾರಣೆಯ ಹರಿಕಾರ ದೇವರಾಜ ಅರಸು ವೆಬ್ ತಾಣ ತಪ್ಪದೇ ನೋಡಿ
ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಜನ್ಮ ಶತಮಾನೋತ್ಸವ ಹಿನ್ನಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೇವರಾಜ ಅರಸು ಕುರಿತಾದ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಿದೆ
ಬೆಂಗಳೂರು, ಜೂನ್ 07: ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಜನ್ಮ ಶತಮಾನೋತ್ಸವ ಹಿನ್ನಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದೇವರಾಜ ಅರಸು ಕುರಿತಾದ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಿದೆ. ದೇವರಾಜ ಅರಸುರವರ ಜನ್ಮದಿನ ಜೂನ್ 6 ರಂದು ಸಮಾಜ ಕಲ್ಯಾಣ ಸಚಿವ ಅಂಜನೇಯ ಅವರು ಈ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಿದರು.
ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಲ್ಲುವ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರು ಕರ್ನಾಟಕದಲ್ಲಿ 'ಹಿಂದುಳಿದ ವರ್ಗಗಳ ಹರಿಕಾರ' ಎಂದೇ ಖ್ಯಾತರಾದವರು. ರಾಜ್ಯದ 8 ನೇ ಮುಖ್ಯಮಂತ್ರಿಗಳಾದ ಇವರ ಆಡಳಿತಾವಧಿಯಲ್ಲಿಯೇ ಮೈಸೂರು ರಾಜ್ಯವು 'ಕರ್ನಾಟಕ' ಎಂದು ಮರು ನಾಮಕರಣ ಪಡೆಯಿತು.[ಸಾಮಾಜಿಕ ಸಮಾನತೆಯ ಹರಿಕಾರ ದೇವರಾಜ್ ಅರಸ್]
ದಿವಂಗತ ದೇವರಾಜ ಅರಸು ಕುರಿತಾದ ಸಮಗ್ರ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಈ ವೆಬ್ಸೈಟ್ನಲ್ಲಿ ಅರಸುರವರ ಬಾಲ್ಯ ಜೀವನ ಸೇರಿದಂತೆ ಅವರ ಕುರಿತಾದ ಸಮಗ್ರ ಮಾಹಿತಿಗಳನ್ನು ಅಳವಡಿಸಲಾಗಿದೆ.[ಭೂಸುಧಾರಣೆಯ ಹರಿಕಾರ ದೇವರಾಜ ಅರಸು]
ದೇವರಾಜ ಅರಸುರವರ ಹುಟ್ಟೂರಾದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಕುರಿತಾದ ಮಾಹಿತಿಗಳು, ಅರಸುರವರ ಕಲ್ಲಹಳ್ಳಿಯ ಜೀವನ, ದೇವರಾಜ ಅರಸುರವರ ತಂದೆ ತಾಯಿಗಳಾದ ದೇವಿರಮ್ಮಣ್ಣಿ ಮತ್ತು ದೇವರಾಜ ಅರಸು, ಅವರ ಸಹೋದರ ಕೆಂಪರಾಜೇ ಅರಸುರವರ ಕುರಿತಾದ ಕುಟುಂಬದ ಸಮಗ್ರ ಮಾಹಿತಿಗಳು, ಮೈಸೂರು ಮತ್ತು ಬೆಂಗಳೂರಿನಲ್ಲಿ ಅರಸುರವರ ಶಿಕ್ಷಣ ಕುರಿತಾದ ಮಾಹಿತಿಗಳು, ಶಿಕ್ಷಣ ಪಡೆದ ನಂತರ ಮರಳಿ ಕಲ್ಲಳ್ಳಿಗೆ ತೆರಳಿ ಕೃಷಿಕರಾಗಿ ನೆಲೆ ನಿಂತ ದೇವರಾಜ ಅರಸುರವರ ಹಿನ್ನಲೆ, ಚಿಕ್ಕಮಣ್ಣಿಯವರೊಂದಿಗಿನ ವಿವಾಹ ಹಾಗೂ ಕುಟುಂಬ, ಅರಸು ವ್ಯಕ್ತಿತ್ವದ ಪರಿಚಯ ಸೇರಿದಂತೆ ದೇವರಾಜ ಅರಸುರವರ ಖಾಸಗಿ ಬದುಕಿನ ಮಾಹಿತಿಗಳು ವೆಬ್ಸೈಟ್ನಲ್ಲಿ ಲಭ್ಯವಿದೆ.
ರಾಜಕೀಯ ಬದುಕಿನ ಕುರಿತಾಗಿ
ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅರಸುರವರು ಅಮೂಲ್ಯವಾದ ಜ್ಞಾನಭಂಡಾರವನ್ನೆ ಹೊಂದಿದ್ದರು. ಕೃಷಿಯ ಜೊತೆಗೆ ಯಶಸ್ವಿಯಾದ ನಾಯಕತ್ವದ ಗುಣ ಅರಸುರವರನ್ನು ರಾಜ್ಯದ ಮುಖ್ಯಮಂತ್ರಿಗಳನ್ನಾಗಿ ಮಾಡಿತು. ಕಾಂಗ್ರೆಸ್ ಪಕ್ಷ ವಿಭಜಿತವಾಗಿ ಇಂದಿರಾ ಕಾಂಗ್ರೆಸ್ ಆದಮೇಲೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗಿದ್ದು ಕರ್ನಾಟಕ ರಾಜ್ಯದ 8 ನೇ ಮುಖ್ಯಮಂತ್ರಿಗಳಾದರು. ರಾಜಕೀಯದಲ್ಲಿ ದೇವರಾಜ ಅರಸುರವರ ನಡೆಗಳು, ಚಿಂತನೆಗಳ ಕುರಿತಾದ ಮಾಹಿತಿಗಳು ಈ ವೆಬ್ಸೈಟ್ನಲ್ಲಿ ಲಭ್ಯವಿದೆ.
ವೈಯಕ್ತಿಕ ಬದುಕಿನ ಕುರಿತಾಗಿ
ದೇವರಾಜ ಅರಸುರವರ ಹುಟ್ಟೂರಾದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಕುರಿತಾದ ಮಾಹಿತಿಗಳು, ಅರಸುರವರ ಕಲ್ಲಹಳ್ಳಿಯ ಜೀವನ, ದೇವರಾಜ ಅರಸುರವರ ತಂದೆ ತಾಯಿಗಳಾದ ದೇವಿರಮ್ಮಣ್ಣಿ ಮತ್ತು ದೇವರಾಜ ಅರಸು, ಅವರ ಸಹೋದರ ಕೆಂಪರಾಜೇ ಅರಸುರವರ ಕುರಿತಾದ ಕುಟುಂಬದ ಸಮಗ್ರ ಮಾಹಿತಿಗಳು, ಮೈಸೂರು ಮತ್ತು ಬೆಂಗಳೂರಿನಲ್ಲಿ ಅರಸುರವರ ಶಿಕ್ಷಣ ಕುರಿತಾದ ಮಾಹಿತಿಗಳು, ಶಿಕ್ಷಣ ಪಡೆದ ನಂತರ ಮರಳಿ ಕಲ್ಲಳ್ಳಿಗೆ ತೆರಳಿ ಕೃಷಿಕರಾಗಿ ನೆಲೆ ನಿಂತ ದೇವರಾಜ ಅರಸುರವರ ಹಿನ್ನಲೆ, ಚಿಕ್ಕಮಣ್ಣಿಯವರೊಂದಿಗಿನ ವಿವಾಹ ಹಾಗೂ ಕುಟುಂಬ, ಅರಸು ವ್ಯಕ್ತಿತ್ವದ ಪರಿಚಯ ಸೇರಿದಂತೆ ದೇವರಾಜ ಅರಸುರವರ ಖಾಸಗಿ ಬದುಕಿನ ಮಾಹಿತಿಗಳು ವೆಬ್ಸೈಟ್ನಲ್ಲಿ ಲಭ್ಯವಿದೆ.
ನಾಯಕತ್ವ ಗುಣ
ದೇವರಾಜ ಅರಸು ಅವರಿಗೆ ನಾಯಕತ್ವದ ಗುಣ ಬಾಲ್ಯದಿಂದಲೇ ಬಂದಿತ್ತು. ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಅರಸು ಅವರು ಆದರ್ಶ ರೈತರಾಗಿ, ಸಲಹೆಗಾರರು ಕೂಡ ಆಗಿದ್ದರು. ಕೃಷಿ-ಹೈನುಗಾರಿಕೆ ವಿಷಯಗಳಲ್ಲಿ ಸಲಹೆ ನೀಡುತ್ತಿದ್ದ ಅರಸು ಅವರು, ಸ್ಥಳೀಯ ಮಟ್ಟದ ಸಣ್ಣಪುಟ್ಟ ವ್ಯಾಜ್ಯಗಳನ್ನು ಮುಂದೆ ನಿಂತು ಪರಿಹರಿಸುತ್ತಿದ್ದರು. ಈ ಕಾರಣದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಯುವಕ ದೇವರಾಜ ಅರಸು ಹೆಸರು ಮನೆಮಾತಾಗಿತ್ತು.
ವಿಧಾನಸಭೆ ಪ್ರವೇಶ, ಸಿಎಂ ಪಟ್ಟ
ಸ್ವಾತಂತ್ರ್ಯಾನಂತರ 1952ರಲ್ಲಿ ನಡೆದ ಮೊದಲ ವಿಧಾನ ಸಭಾ ಚುನಾವಣೆಯಲ್ಲಿ ದೇವರಾಜು ಅರಸು ಅವರು ಹುಣಸೂರು ಕ್ಷೇತ್ರದಿಂದಲೇ ಆಯ್ಕೆಯಾದರು. 1957ರ ಚುನಾವಣೆಯಲ್ಲಿ ಕೂಡ ಅರಸು ಆಯ್ಕೆಯಾದರು. ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಸ್ಥಿತ್ಯಂತರಗಳು ಆಗುತ್ತಿದ್ದರೂ 1962ರ ಚುನಾವಣೆಯಲ್ಲಿ ದೇವರಾಜ ಅರಸು ಅವರು ಹುಣಸೂರು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು.
1965ರಲ್ಲಿ ಬಾಷಾವಾರು ಪ್ರಾಂತ್ಯ ರಚನೆಯಾದ ನಂತರವೂ, ನಮ್ಮ ರಾಜ್ಯದ ಹೆಸರು ಮೈಸೂರು ರಾಜ್ಯವೆಂದೇ ಚಾಲ್ತಿಯಲ್ಲಿತ್ತು. 1973ರಲ್ಲಿ ದೇವರಾಜ ಅರಸು ಅವರು ನಾಡಿನ ಜನತೆಯ ಆಶಯದಂತೆ ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದರು.
ಕಾಂಗ್ರೆಸ್ ವಿಭಜನೆ ಕಾಲದಲ್ಲಿ ಅರಸು
1965ರಲ್ಲಿ ಕಾಂಗ್ರೆಸ್ ಎರಡು ಪಕ್ಷಗಳಾಗಿ ಹೋಳಾಯಿತು. ಶ್ರೀ ಕೆ.ಕಾಮರಾಜ ಅವರ ನೇತೃತ್ವದ ಸಿಂಡಿಕೇಟ್ ಕಾಂಗ್ರೆಸ್ 'ಓ' ಸ್ಥಾಪನೆ ಮಾಡಿತು. ಕರ್ನಾಟಕದ ಪ್ರಮುಖ ನಾಯಕರಾದ ಶ್ರೀ ಎಸ್.ನಿಜಲಿಂಗಪ್ಪ, ಶ್ರೀ ವೀರೇಂದ್ರ ಪಾಟೀಲ್, ಶ್ರೀ ರಾಮಕೃಷ್ಣ ಹೆಗಡೆ ಮತ್ತು ಶ್ರೀ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ 'ಓ' ಪಕ್ಷ ಸೇರಿದರು. ಶ್ರೀಮತಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ 'ಆರ್' ಸ್ಥಾಪನೆ ಮಾಡಿದರು. ಶ್ರೀ ದೇವರಾಜ ಅರಸು ಅವರು ಕಾಂಗ್ರೆಸ್ 'ಆರ್' ಪಕ್ಷ ಸೇರಿ, ಕರ್ನಾಟಕದಲ್ಲಿ ಪಕ್ಷದ ಚುಕ್ಕಾಣಿ ಹಿಡಿದರು. 1971ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ 'ಆರ್' ಗೆಲುವು ಸಾಧಿಸಿತು. ದೇವರಾಜ ಅರಸು ಅವರು ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು.
ಅರಸು ಅವರ ಸಾಧನೆಗಳು
ಭೂ ಸುಧಾರಣಾ ಕಾಯ್ದೆ ಜಾರಿ, ಹಾವನೂರು ವರದಿ ಜಾರಿ, ವೃದ್ಧಾಪ್ಯ ವೇತನ, ಕೃಷಿ ಬ್ಯಾಂಕ್ಗಳ ಸ್ಥಾಪನೆ, ವಿಧವಾ ವೇತನ, ಉಚಿತ ಭಾಗ್ಯ ಜ್ಯೋತಿ ಯೋಜನೆ, ಮಲಹೊರುವ ಪದ್ಧತಿ ರದ್ದು, ಜೀತಪದ್ಧತಿ ವಿಮುಕ್ತಿ, ಅಂಗವಿಕಲರ ವೇತನ, ವಲಸೆ ಕಾರ್ಮಿಕರಿಗೆ ಆಶ್ರಯ, ಕೃಷಿ ಸಾಲ ರದ್ದು, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಕರ್ನಾಟಕ ರಾಜ್ಯದ ನಾಮಕರಣ, ಕರ್ನಾಟಕ ವಿಶ್ವವಿದ್ಯಾನಿಲಯ 1976ರ ಕಾಯ್ದೆ ಅನುಷ್ಠಾನ, ವಿದ್ಯಾರ್ಥಿನಿಲಯಗಳ ಸ್ಥಾಪನೆ, ಶಿಷ್ಯ ವೇತನ ಇತ್ಯಾದಿ ಕಾರ್ಯಕ್ರಮ-ಯೋಜನೆಗಳ ಅನುಷ್ಠಾನ.
'ಉಳುವವನೇ ಹೊಲದೊಡೆಯ'
ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ ಘೋಷಣೆಯೂ ಸೇರಿದಂತೆ 20 ಅಂಶಗಳ ಜನಪ್ರಿಯ ಕಾರ್ಯಕ್ರಮಗಳನ್ನು ದೇವರಾಜ ಅರಸು ಅವರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದಿತು. ಭೂಸುಧಾರಣೆ ಕಾಯಿದೆಯನ್ನು ಜಾರಿಗೆ ತಂದ ಶ್ರೇಯ ಕೂಡ ಅರಸು ಅವರದ್ದಾಯಿತು. 'ಉಳುವವನೇ ಹೊಲದೊಡೆಯ' ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದ ಸುಮಾರು 4.15 ಲಕ್ಷ ಗೇಣಿದಾರರು ಭೂಮಿಯ ಒಡೆತನ ಪಡೆಯುವಂತೆ ಮಾಡಲಾಯಿತು.