ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಡಿಕೆಗೆ ಕಂಗಾಲಾದ ಬಿಜೆಪಿ ನಾಯಕರು!
ಬೆಂಗಳೂರು, ಆ, 07: ಕೊರೊನಾ ವೈರಸ್, ಆರ್ಥಿಕ ಸಂಕಷ್ಟದ ಮಧ್ಯೆ ಹೊಸದೊಂದು ಚರ್ಚೆ ದೇಶದಲ್ಲಿ ಆರಂಭವಾಗಿದೆ. ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ನಮ್ಮ ರಾಜಕಾರಣಿಗಳು ಮಾತ್ರ ತಮ್ಮದೆ ಲೆಕ್ಕಾಚಾರದಲ್ಲಿದ್ದಾರೆ. ಕೊರೊನಾ ಮೂರನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆಯನ್ನು ತಜ್ಞರು ಈಗಾಗಲೇ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಹೆಸರಿನ ಮೇಲಾಟದಲ್ಲಿ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಜನ-ಸಾಮಾನ್ಯರು ಆರೋಪಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.
Recommended Video
ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಅವರ ಹೆಸರು ಇಡುವಂತೆ ನನಗೆ ದೇಶದ ಮೂಲೆ ಮೂಲೆಯ ನಾಗರಿಕರಿಂದ ಅನೇಕ ಮನವಿಗಳು ಬರುತ್ತಿವೆ. ಅವರ ಅಭಿಪ್ರಾಯಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಭಾವನೆಗಳನ್ನು ಗೌರವಿಸಿ, ಖೇಲ್ ರತ್ನ ಪ್ರಶಸ್ತಿಯನ್ನು ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಪುರಸ್ಕಾರ ಎಂದು ಕರೆಯಲಾಗುವುದು! ಜೈ ಹಿಂದ್' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ದೇಶದಲ್ಲಿ ಮಹತ್ವದ ಚರ್ಚೆಗೆ ನಾಂದಿ ಹಾಡಿದ್ದರು.
ಅದರ ಮುಂದುವರೆದ ಭಾಗವೆಂಬಂತೆ, ಇದೀಗ ಕೊರೊನಾ ಸೇರಿದಂತೆ ಎಲ್ಲ ವಿಚಾರಗಳು ನಗಣ್ಯವಾಗಿವೆ. ಹೆಸರಿನಲ್ಲೇ ಎಲ್ಲವೂ ಇದೆ ಎಂಬ ಚರ್ಚೆಗಳು ದೇಶದ ಉದ್ದಗಲಕ್ಕೂ ಆರಂಭವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿಯೂ ಮಹತ್ವದ ಚರ್ಚೆ ಹಾಗೂ ಬೇಡಿಕೆಯನ್ನು ನಮ್ಮ ಜನಪ್ರತಿನಿಧಿಗಳು ಇಟ್ಟಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ಎದುರು ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಆ ಬೇಡಿಕೆಗೆ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ಏನದು ಸಿದ್ದರಾಮಯ್ಯ ಇಟ್ಟಿರುವ ಬೇಡಿಕೆ?
ಹೊಸ ಚರ್ಚೆಗೆ ನಾಂದಿ ಹಾಡಿದ ಪ್ರಧಾನಿ ಮೋದಿ
ಪ್ರತಿಯೊಂದರಲ್ಲೂ ಗುಜರಾತ್ ಮಾದರಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಮಾದರಿ ಅನುಸರಿಸುವ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಅವರ ನಿರ್ಧಾರ ಖುಷಿ ತಂದಿದೆ. ಹೀಗಾಗಿ ಇಡೀ ದೇಶದಲ್ಲಿನ ಹೆಸರುಗಳ ಬದಲಾವಣೆ ಆಗಬೇಕು ಎಂಬ ಒತ್ತಾಯ ಇದೀಗ ದೇಶಾದ್ಯಂತ ಶುರುವಾಗಿದೆ. ಆ ಬೇಡಿಕೆಗೆ ರಾಜ್ಯದಲ್ಲಿಯೂ ಮಹತ್ವ ಬಂದಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಬದಲಾವಣೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ಗಳನ್ನು ಇನ್ಮುಂದೆ "ಅನ್ನಪೂರ್ಣೇಶ್ವರಿ ಕ್ಯಾಂಟೀನ್" ಎಂದು ಕರೆಯುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಲಹೆ ನೀಡಿದ್ದಾರೆ. ಆ ಸಲಹೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮಾಡಿರುವ ಆಗ್ರಹದಿಂದ ಮತ್ತೊಂದು ಹಂತದ ಆರೋಪ-ಪ್ರತ್ಯಾರೋಪಗಳು ಶುರುವಾಗುವ ಎಲ್ಲ ಸಾಧ್ಯತೆಗಳು ಇವೆ. ಅಷ್ಟಕ್ಕು ಸಿದ್ದರಾಮಯ್ಯ ಹೇಳಿದ್ದೇನು? ಮುಂದಿದೆ.
ಸಿಟಿ ರವಿ ಮೇಲೆ ಸಿದ್ದರಾಮಯ್ಯ ಆಕ್ರೋಶ!
"ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಈ ಮೊದಲು ಅಧಿಕಾರದಲ್ಲಿದ ಪಕ್ಷದವರು ನಾಮಕರಣ ಮಾಡಿದ ಹೆಸರು ಬದಲಾವಣೆ ಮಾಡುವುದು ದ್ವೇಷದ ರಾಜಕಾರಣ. ಇಂದಿರಾ ಗಾಂಧಿಯವರು ಬಡವರ ಪರ ಶ್ರಮಿಸಿದ್ದರು. ಗರೀಬಿ ಹಠಾವೋ ಎಂದವರು. ಜೊತೆಗೆ ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೆ ತಂದವರು. ಹೀಗಾಗಿ ಹೀಗಾಗಿ ಇಂದಿರಾ ಕ್ಯಾಂಟೀನ್ಗೆ ಅವರ ಹೆಸರು ಇಡಲಾಗಿದೆ. ಬಿಜೆಪಿಗೆ ಬಡವರ ಬಗ್ಗೆಯೇ ಕಾಳಜಿ ಇಲ. ಇದ್ದಿದ್ದರೆ ಬಡವರಿಗೆ ಕೊಡುತ್ತಿದ್ದ ಏಳು ಕೆ.ಜಿ. ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿದ್ದೇಕೆ? ಅವರಿಗೆ ದಲಿತರು, ಬಡವರು, ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದೆಯೇ? ಬಿಜೆಪಿಯವರು ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಪರ ಇರುವವರು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯರ ಮತ್ತೊಂದು ಬೇಡಿಕೆ ಬಿಜೆಪಿ ನಾಯಕರಲ್ಲಿ ಅಸಮಧಾನವನ್ನುಂಟು ಮಾಡಿದೆ.
ದೀನದಯಾಳ್ ಉಪಾಧ್ಯಾಯ ಹೆಸರು ಬದಲಾವಣೆ ಮಾಡಿ!
"ರಸ್ತೆ, ಕ್ರೀಡಾಂಗಣ, ಸರ್ಕಾರಿ ಸಂಸ್ಥೆಗಳಿಗೆ ರಾಷ್ಟ್ರೀಯ ನಾಯಕರ ಹೆಸರು ನಾಮಕರಣ ಮಾಡುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಬೆಂಗಳೂರಿನ ಮೇಲು ಸೇತುವೆಗೆ ದೀನದಯಾಳ್ ಉಪಾಧ್ಯಾಯ, ನಗರ ಸಾರಿಗೆಗೆ ವಾಜಪೇಯಿ, ಗುಜರಾತ್ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಏಕೆ ಇಡಲಾಗಿದೆ. ಬದಲಿಸುವುದಾದರೆ ಈ ಹೆಸರುಗಳನ್ನು ಕೇಂದ್ರ ಸರ್ಕಾರ ಮೊದಲು ಬದಲಾವಣೆ ಮಾಡಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆಗ್ರಹ, ಅದರಲ್ಲಿಯೂ ಪ್ರಮುಖವಾಗಿ ಗುಜರಾತ್ನಲ್ಲಿನ ಕ್ರೀಡಾಂಗಣಕ್ಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಸರು ಹಾಗೂ ಬೆಂಗಳೂರಿನ ಮೇಲ್ಸೆತುವೆಗೆ ಇಟ್ಟಿರುವ ದೀನದಯಾಳ್ ಉಪಾಧ್ಯಾಯ ಹೆಸರು ಬದಲಾವಣೆ ಮಾಡುವಂತೆ ಒತ್ತಾಯಿಸಿರುವುದು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
"ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕುವುದು ಸೂಕ್ತವಲ್ಲ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ. ಜೊತೆಗೆ ಇದು ದ್ವೇಷದ ರಾಜಕಾರಣವಾಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. "ಸಿಟಿ ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಅವರು ಹೇಳಿದ್ದೇ ತೀರ್ಮಾನವಲ್ಲ. ಸರ್ಕಾರದ ನಿರ್ಧಾರ ಏನು ಎಂಬುದನ್ನು ನೋಡೋಣ" ಎಂದು ಇಂದಿರಾ ಕ್ಯಾಂಟೀನ್ಗೆ ಅನ್ನಪೂರ್ಣ ಕ್ಯಾಂಟೀನ್ ಎಂದು ಹೆಸರಿಡಬೇಕೆಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಧ್ಯಾನ್ಚಂದ್ ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದದರಾಮಯ್ಯ ಅವರು, "ಮೇಜರ್ ಧ್ಯಾನ್ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು. ರಾಜೀವ್ ಗಾಂದಿ ಹೆಸರೇಕೆ ಬದಲಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದವರ ನೆನಪಿಗೆ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ" ಎಂದು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದ ಕುರಿತು ಯಾವುದೇ ನಿರೋಕ್ಷೆಗಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹೊಸ ಸಚಿವ ಸಂಪುಟದ ಬಗ್ಗೆ ಯಾವ ಆಶಾ ಭಾವನೆಯೂ ಇಲ್ಲ. ಬಹುತೇಕ ಹಳಬರೇ ಸಂಪುಟದಲ್ಲಿದ್ದಾರೆ. ಹೀಗಾಗಿ ಹೊಸದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಮಂತ್ರಿ ಮಂಡಲದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ. ಹಳೆಯ ಮೈಸೂರು ಭಾಗಕ್ಕೆ ಅವಕಾಶ ಕಡಿಮೆಯಾಗಿದೆ. ರಾಜ್ಯದಲ್ಲಿ ಶೇ. 24.1 ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಭೋವಿಗಳಿಗೆ, ಕೊರಚ, ಕೊರಮರಿಗೆ ಅವಕಾಶ ಕೊಟ್ಟಿಲ್ಲ. ನಾವಿದ್ದಾಗ ಪ್ರಮಖ ಖಾತೆಗಳನ್ನು ಆ ಸಮುದಾಯದವರಿಗೆ ನೀಡಲಾಗಿತ್ತು. ಒಟ್ಟಾರೆ ಸಂಪುಟದಲ್ಲಿ ಪ್ರಾದೇಶಿಕ ಸಮೋತಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ ತಮ್ಮ ಆಪ್ತ ಜಮೀರ್ ಅಹ್ಮದ್ ಮೇಲೆ ಆಗಿದ್ದ ಇಡಿ ದಾಳಿಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಸ್ನೇಹ ಹಾಗೂ ರಾಜಕೀಯ ಬೇರೆ ಬೇರೆ
"ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅವರ ಶಿಫಾರಸು ಪ್ರಕಾರ ಇಡಿಯವರು ದಾಳಿ ಮಾಡುತ್ತಾರೆ. ಅದು ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ. ಆದರೆ, ಜಮೀರ್ ಅಹಮದ್ ಅವರ ಮನೆಯ ಮೇಲೆ ಇಡಿಯವರು ಏಕಾಏಕಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತರ ಹಾಗೂ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹಮದ್ ಅವರು ಮನೆ ಕಟ್ಟಿದ್ದಾರೆ ಅಷ್ಟೆ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಎಲ್ಲಿ ಆಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ? ಕಾಂಗ್ರೆಸ್ಸಿಗರನ್ನೇ ಟಾರ್ಗೆಟ್ ಮಾಡುವುದೇಕೆ? ಜಮೀರ್ ಅಹಮದ್ ಅವರು ನನ್ನ ಆಪ್ತರು. ಅದೇ ರೀತಿ ಹಲವಾರು ಮಂದಿ ನನಗೆ ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ, ಸ್ನೇಹ ಬೇರೆ, ರಾಜಕೀಯ ಬೇರೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಕುತೂಹಲ ಮೂಡಿಸಿದೆ.