ಸಿದ್ದರಾಮಯ್ಯಗೆ ಎರಡು ದೊಡ್ಡ ಜವಾಬ್ದಾರಿ ಕೊಟ್ಟ ಎಐಸಿಸಿ
ಬೆಂಗಳೂರು, ಮಾರ್ಚ್ 11: ಕರ್ನಾಟಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ರಾಜೀನಾಮೆಯನ್ನು ಎಐಸಿಸಿ ಕೊನೆಗೂ ರಿಜೆಕ್ಟ್ ಮಾಡಿದೆ. ಜೊತೆಗೆ ವಿಪಕ್ಷ ನಾಯಕನ ಸ್ಥಾನವನ್ನು ತೊರೆದಿದ್ದ ಸಿದ್ದರಾಮಯ್ಯ ಅವರಿಗೆ ಮತ್ತೆ ಅವರ ಎರಡು ಹುದ್ದೆಗಳನ್ನು ಮರಳಿಸಿದೆ.
Recommended Video
ಅಂದು ಕೆಪಿಸಿಸಿ ಅಧ್ಯಕ್ಷ ಸ್ಥಾನ ದಿನೇಶ್ ಗುಂಡೂರಾವ್ ಕೂಡಾ ರಾಜೀನಾಮೆ ನೀಡಿದ್ದರು. ಪಕ್ಷದ ಕಾರ್ಯಕರ್ತರಿಗೇ ಅಚ್ಚರಿಯ ರೀತಿಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರ ಹೊರಬಂದಿತ್ತು. "ಪಕ್ಷದ ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ,'' ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಹೈಡ್ರಾಮಾ ನಡೆದು ಒಂದೆರಡು ತಿಂಗಳು ನಡೆದ ಬಳಿಕ ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ ಶಿವಕುಮಾರ್ ರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ. ಜೊತೆಗೆ ಐದು ಮಹತ್ವದ ಆದೇಶವನ್ನು ಪ್ರಕಟಿಸಿದೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವುದರಿಂದ, ಅವರ ಸ್ಥಾನಕ್ಕೆ, ಪಕ್ಷವನ್ನು ಮುನ್ನಡೆಸುವ, ಸಮರ್ಥ ನಾಯಕರನ್ನು ತುರ್ತಾಗಿ ನೇಮಿಸುವ ಅಗತ್ಯವಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಭಾರಿ ಲಾಬಿ ನಡೆದಿದ್ದರಿಂದ ನೇಮಕಾತಿ ವಿಳಂಬವಾಗಿತ್ತು.
ದಿನೇಶ್ ಗುಂಡೂರಾವ್ ನೀಡಿದ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಅಂಗೀಕರಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕರಿಸದೆ ಅವರ ಬಳಿ ಇದ್ದ ಎರಡು ಜವಾಬ್ದಾರಿಗಳನ್ನು ಮತ್ತೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಇದರ ಜೊತೆಗೆ, ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರ ಬಣಕ್ಕೆ ಬೇಸರವಾಗದಂತೆ, ಇರುವ ಆಯಕಟ್ಟಿನ ಹುದ್ದೆಯನ್ನು ಹಂಚಲಾಗಿದೆ.
ಅಂದು ರಾಜೀನಾಮೆ ಕೊಟ್ಟಿದ್ದೇಕೆ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದೇನೆ. ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಬಳಿಕ ಮಾತನಾಡಿದ ಅವರು, 15 ಉಪಚುನಾವಣೆಗಳಲ್ಲಿ ತೀರ್ಪು ಇವತ್ತು ಪ್ರಕಟವಾಗಿದೆ. ನಾನು ಪ್ರಜಾಪ್ರಭುತ್ವದಲ್ಲಿ ಬಲವಾಗಿ ನಂಬಿಕೆ ಇಟ್ಟುಕೊಂಡಿರುವವನು. 15 ಕ್ಷೇತ್ರದಲ್ಲಿ ಮತದಾರರು ಕೊಟ್ಟಿರುವ ತೀರ್ಪುನ್ನು ಸ್ವಾಗತ ಮಾಡುತ್ತೇನೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ರಾಜೀನಾಮೆ ಪ್ರತಿಯನ್ನ ಕಳುಹಿಸುತ್ತೇನೆ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಿಗೂ ರಾಜೀನಾಮೆ ಪತ್ರ ತಲುಪಿಸುತ್ತೇನೆ ಎಂದರು.
ರಾಜೀನಾಮೆ ಪತ್ರದಲ್ಲಿ ಆಪರೇಷನ್ ಕಮಲ
ಮತದಾರರು ನೀಡಿದ ತೀರ್ಪನ್ನು ನಾನು ಗೌರವಿಸಿ, ಕರ್ನಾಟಕ ಉಪ ಚುನಾವಣೆಯ ಸೋಲಿನ ಹೊಣೆ ಹೊರುತ್ತೇನೆ. ಆಪರೇಷನ್ ಕಮಲ ಬಳಸಿದ ಬಿಜೆಪಿ ನಾಯಕರಿಗೆ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ನಾನು ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮೂವರು ಕಾರ್ಯಾಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ರನ್ನು ನೇಮಿಸಲಾಗಿದೆ. ವಿಧಾನಸಭೆ ಮುಖ್ಯ ಸಚೇತಕರಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಅಜಯ್ ಸಿಂಗ್, ವಿಧಾನಪರಿಷತ್ ವಿಪ್ ಸ್ಥಾನಕ್ಕೆ ಎಂಎಲ್ಸಿ ಎಂ ನಾರಾಯಣಸ್ವಾಮಿರನ್ನು ನೇಮಿಸಲಾಗಿದೆ ಎಂದು ಕೆ.ಸಿ ವೇಣುಗೋಪಾಲ್ ಸಹಿ ಇರುವ ಪ್ರಕಟಣೆ ಹೊರಡಿಸಲಾಗಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಬಲಾಬಲ
ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕಾಗಿತ್ತು. ಆದರೆ, ಈಗ 12 ಸ್ಥಾನ ಗೆಲ್ಲುವ ಖಾತ್ರಿಯಾಗಿದೆ. ಹೀಗಾಗಿ ಸರ್ಕಾರ ಬಹುಮತ ಪಡೆದುಕೊಂಡಿದ್ದು, ಸೇಫ್ ಆಗಿದೆ.ಇನ್ನೂ 2 ಕ್ಷೇತ್ರದ ಉಪ ಚುನಾವಣೆ ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಿದೆ.