ಸಿದ್ದರಾಮಯ್ಯ ರಾಜೀನಾಮೆ ಹಿಂದಿನ ಜಾಣ ರಾಜಕೀಯ, ಮೂಲ ಕಾಂಗ್ರೆಸ್ಸಿಗರಿಗೆ ಅರ್ಥವಾಗುವುದುಂಟೇ?
ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆಗೆ ಒಳಗಾಗಿ ಸದ್ಯ ವಿಶ್ರಾಂತಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆದಷ್ಟು ಬೇಗ ಗುಣಮುಖವಾಗಲಿ ಎಂದು ಆಶಿಸುತ್ತಾ, ಅವರು ನೀಡಿದ್ದ ರಾಜೀನಾಮೆಯ ಸುತ್ತ ಅಂದು ಅವಲೋಕನವನ್ನು ಮಾಡುವುದಾದರೆ, ಅತ್ಯಂತ ಜಾಣತನದಿಂದ ಸಿದ್ದರಾಮಯ್ಯ ಈ ರಾಜಕೀಯ ನಡೆಯಿಟ್ಟಿದ್ದಾರೆ ಎಂದೇ ಹೇಳಬಹುದು.
ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ. ಈ ಸ್ಥಾನದ ಜೊತೆಗೆ, ವಿರೋಧ ಪಕ್ಷದ ನಾಯಕನ ಸ್ಥಾನವನ್ನೂ ಸಿದ್ದರಾಮಯ್ಯ ನಿಭಾಯಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಆ ಮೂಲಕ, ಇದೊಂದು ಪಕ್ಕಾ ರಾಜಕೀಯ ವೃತ್ತಿಪರತೆಯ ನಡೆಯೆಂದೇ ಹೇಳಲಾಗುತ್ತಿದೆ. ಸರಕಾರದ ದೈನಂದಿನ ಚಟುವಟಿಕೆಗಳಲ್ಲಿ, ಮುಖ್ಯಮಂತ್ರಿಗಳು ಎಷ್ಟು ಪವರ್ ಫುಲ್ ಆಗಿರುತ್ತಾರೋ, ಅಷ್ಟೇ ಪ್ರಾಮುಖ್ಯತೆ ವಿರೋಧ ಪಕ್ಷದ ನಾಯಕನಿಗೂ ಇರುತ್ತದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
ಅಸಲಿಗೆ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸಿದ್ದರಾಮಯ್ಯ ಬಯಸುತ್ತಿದ್ದದ್ದು ಇದೇ ವಿರೋಧ ಪಕ್ಷದ ನಾಯಕನ ಸ್ಥಾನವನ್ನು. ಮತ್ತೆ ರಾಜ್ಯ ಸುತ್ತಾಡಿ, ಅಹಿಂದ ಸಮಾವೇಶ ನಡೆಸಿ, ಸರಕಾರದ ತಪ್ಪುಒಪ್ಪುಗಳನ್ನು ಜನರಿಗೆ ತಲುಪಿಸಿ, ಐದು ವರ್ಷ ವಿರೋಧ ಪಕ್ಷದ ನಾಯಕನಾಗಿಯೇ ಇರುವುದು ಸಿದ್ದರಾಮಯ್ಯನವರ ಗುರಿ ಎಂದು ಹೇಳಲಾಗುತ್ತಿತ್ತು.
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ
ಇನ್ನು, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಇನ್ನೂ ಆಂಗೀಕಾರವಾಗಿಲ್ಲ. ಅವರ ಆಪ್ತ, ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನೀಡಿದ ರಾಜೀನಾಮೆಯ ಬಗ್ಗೆ, ಹೈಕಮಾಂಡ್ ಇನ್ನೂ ಏನೂ ನಿರ್ಧಾರ ತೆಗೆದುಕೊಂಡಿಲ್ಲ.
ಸಮರ್ಥವಾಗಿ ಮುನ್ನಡೆಸುವವರು ಯಾರಾದರೂ ಇದ್ದಾರಾ ಎನ್ನುವ ತಡಕಾಟದಲ್ಲಿ ಸೋನಿಯಾ
ಆದರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಯಾವ ಕಾರಣಕ್ಕೂ ಸಿದ್ದರಾಮಯ್ಯನವರಿಗೆ ಹೋಗಬಾರದೆನ್ನುವ ಮೂಲ ಕಾಂಗ್ರೆಸ್ಸಿಗರ ಒತ್ತಡ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಎಲ್ಲರ ಮನವಿಯನ್ನು ಆಲಿಸುತ್ತಿರುವ ಸೋನಿಯಾ ಗಾಂಧಿ, ಇನ್ನೂ ಯಾವುದನ್ನೂ ಫೈನಲ್ ಮಾಡಿಲ್ಲ. ಸಿದ್ದರಾಮಯ್ಯನವರನ್ನು ಬಿಟ್ಟರೆ, ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವವರು ಯಾರಾದರೂ ಇದ್ದಾರಾ ಎನ್ನುವ ತಡಕಾಟದಲ್ಲಿ ಸೋನಿಯಾ ಇದ್ದರೂ ಇರಬಹುದು.
ಸಿದ್ದರಾಮಯ್ಯ ರಾಜೀನಾಮೆ ಹಿಂದಿರುವ ರಾಜಕೀಯ ಲೆಕ್ಕಾಚಾರಗಳೇನು?
ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಮಾತಿಗೆ ನಿಂತರೆ
ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಖಡಾಖಂಡಿತವಾಗಿ ಹೇಳಿದ್ದಾರೆ. ಆದರೂ, ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಮಾತಿಗೆ ನಿಂತರೆ, ಅವರನ್ನು ತಡೆಯುವುದು ಅಷ್ಟು ಸುಲಭದ ವಿಚಾರವಲ್ಲ ಎನ್ನುವುದು ಬಿಜೆಪಿಯವರಿಗೂ ಗೊತ್ತಿರುವ ವಿಚಾರ.
ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಿದ್ದರಾಮಯ್ಯ
ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಿದ್ದರಾಮಯ್ಯ ಎನ್ನುವ ಸುದ್ದಿ,ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತ ಮತ್ತು ಇದನ್ನು ತಡೆಯಲು ಕೆ.ಎಚ್.ಮುನಿಯಪ್ಪ, ರಾಮಲಿಂಗ ರೆಡ್ಡಿ, ಬಿ.ಕೆ.ಹರಿಪ್ರಸಾದ್ ಮುಂತಾದವರು ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಈ ನಡುವೆ, ಡಿ.ಕೆ.ಶಿವಕುಮಾರ್ ಅವರಿಗೂ ಹೈಕಮಾಂಡ್ ನಿಂದ ಬುಲಾವ್ ಹೋಗಿದೆ.
ಸಿದ್ದರಾಮಯ್ಯ ಕಳೆದುಕೊಳ್ಳುವುದೇನೂ ಇಲ್ಲ
ಉಪಚುನಾವಣೆಯ ಸೋಲಿನಂತರ, ಪಕ್ಷವನ್ನು ಮತ್ತೆ ಮೇಲೆತ್ತುವರು ಕಾಂಗ್ರೆಸ್ಸಿಗೆ ಬೇಕೇ ಹೊರತು, ಮೂಲ, ವಲಸೆ ಕಾಂಗ್ರೆಸ್ಸಿಗರು ಅನ್ನುವುದಲ್ಲ ಎನ್ನುವುದು ಸ್ಪಷ್ಟ. ಒಂದು ವೇಳೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದರೆ, ವಿರೋಧ ಪಕ್ಷದ ನಾಯಕನಾಗಿಯೂ ಮುಂದುವರಿದರೆ, ಅವರ ಹಿಡಿತ ಇನ್ನಷ್ಟು ಬಲಗೊಳ್ಲಲಿದೆ. ಹಾಗಾಗಿ, ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯ ಸೋಲಿಗೆ ನೈತಿಕಹೊಣೆಹೊತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರೂ, ಇದರಿಂದ ಅವರು ಕಳೆದುಕೊಳ್ಳುವುದೇನೂ ಇಲ್ಲ.