ಸಹವಾಸ ದೋಷದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾಗಿದ್ದಾರೆ!
ಬೆಂಗಳೂರು, ಆ. 02: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಐದು ದಿನಗಳಾಗಿವೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬಳಿಕ ಮಾತನಾಡಿದ್ದ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ನಮ್ಮ ಸಹಕಾರ ಇರುತ್ತದೆ ಎಂದಿದ್ದರು. ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆ ರಾಜ್ಯದಲ್ಲಿ ಚರ್ಚೆ ಹುಟ್ಟು ಹಾಕಿತ್ತು.
ಆದರೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು. ಆ ಬಳಿಕ ಅಂಕೋಲಾದಲ್ಲಿ ಮಾತನಾಡಿದ್ದಾರೆ.
"ನನ್ನ ಉತ್ತರ ಕನ್ನಡ ಜಿಲ್ಲಾ ಪ್ರವಾಸದ ಉದ್ದೇಶ ಪ್ರವಾಹದಿಂದ ಉಂಟಾದ ಹಾನಿಯನ್ನು ವೀಕ್ಷಣೆ ಮಾಡಿ, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದು. ನಮ್ಮ ಪಕ್ಷ ಈಗ ಅಧಿಕಾರದಲ್ಲಿ ಇಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿದ್ದೇವೆ. 2013-18 ರ ವರೆಗೆ ನಮ್ಮ ಸರ್ಕಾರವಿತ್ತು, ಆಗ ಪ್ರವಾಹ ಬಂದಿರಲಿಲ್ಲ, ಒಂದು ಬಾರಿ ಬರಗಾಲ ಬಂದಿತ್ತು. 2019 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಮೇಲೆ ಹಿಂದೆಂದೂ ಕಾಣದಂತ ಭೀಕರ ಪ್ರವಾಹ ಬಂದಿತು. ಉತ್ತರ ಕನ್ನಡದಲ್ಲಿ ಸಹಸ್ರಾರು ಮನೆಗಳಿಗೆ ಹಾನಿಯಾಯಿತು, ಬೆಳೆ ನಾಶವಾಯಿತು. ಮತ್ತೆ ಈ ವರ್ಷ ಪ್ರವಾಹ ಬಂದು ಹಿಂದಿನ ಪ್ರವಾಹದ ರೀತಿಯೇ ನಷ್ಟವಾಗಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಹವಾಸ ದೋಷದಿಂದ ಬದಲಾದ ಮುಖ್ಯಮಂತ್ರಿ ಬೊಮ್ಮಾಯಿ!
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆಯವರಾಗಿದ್ದರೂ ಕೂಡ ಸಹವಾಸ ದೋಷದಿಂದ ಅವರು ಬದಲಾಗಿದ್ದಾರೆ. ಅವರು ಹೇಗೆ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಕಾದು ನೋಡೋಣ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ವ್ಯಕ್ತಿತ್ವವನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷನೆ ಮಾಡಿದ್ದಾರೆ.
ಪ್ರವಾಹದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ. ಜನರಿಗೆ ನ್ಯಾಯಯುತವಾದ ಪರಿಹಾರ ಸಿಗುವಂತೆ ಮಾಡಲು ನಾನು ಸಂಪೂರ್ಣ ಬದ್ಧನಿದ್ದೇನೆ. ಇನ್ನು ಒಂದೂವರೆ ವರ್ಷ ಕಳೆದರೆ ಮತ್ತೆ ಚುನಾವಣೆ ಬರುತ್ತದೆ, ನಮ್ಮ ಸರ್ಕಾರ ಬರಲಿದೆ, ಆಗ ಜನರಿಗೆ ಎಲ್ಲ ರೀತಿಯ ನೆರವು ನೀಡುವ ಕೆಲಸವನ್ನು ಮಾಡುತ್ತೇವೆ ಎಂಬ ಭರವಸೆ ನೀಡುತ್ತೇನೆ.
ಅನೇಕ ಕಡೆಗಳಲ್ಲಿ ಮನೆಗಳನ್ನು ಸ್ಥಳಾಂತರ ಮಾಡುವ ಅಗತ್ಯವಿದೆ, ಇದಕ್ಕೆ ಸರ್ಕಾರ ಜಾಗ ನೀಡಬೇಕು, ಮನೆ ಕಟ್ಟಿಕೊಡಬೇಕು. ಆಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಅಗತ್ಯವಿರುವ ಹಳ್ಳಿಗಳ ಸ್ಥಳಾಂತರಕ್ಕೆ ನಾನು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಇನ್ನೊಂದು ವರ್ಷ ಕಳೆದ ಮೇಲೆ ನಾವೇ ಅಧಿಕಾರಕ್ಕೆ ಬರುತ್ತೇವೆ ಆಗ ಖಂಡಿತಾ ಇದನ್ನು ಮಾಡುತ್ತೇವೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರವಾಹ ಸ್ಥಿತಿ
"ಇಲ್ಲಿನ ಜನರ ಸಮಸ್ಯೆಗಳನ್ನು ಕೇಳಿದ್ದೇನೆ. ಕದ್ರಾ ಜಲಾಶಯದಿಂದ ಸುಮಾರು ಎರಡು ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡುವಾಗ ಜಲಾಶಯದ ಸುತ್ತ ಮುತ್ತ ವಾಸಿಸುವ ಜನಗಳಿಗೆ ಮನೆ ಖಾಲಿ ಮಾಡುವಂತೆ ಕನಿಷ್ಠ ಮುನ್ಸೂಚನೆಯನ್ನು ನೀಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ" ಎಂದು ಸರ್ಕಾರದ ಮೇಲೆ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
"2019 ರಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪ ನವರ ಸರ್ಕಾರ ಮೊದಲು ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ ಪ್ರತಿ ತಿಂಗಳು ಹತ್ತು ಸಾವಿರ ನೀಡುತ್ತೇವೆ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹತ್ತುಲಕ್ಷ ರೂಪಾಯಿ, ಭಾಗಶಃ ಮನೆ ಹಾನಿಯಾದವರಿಗೆ ಮೂರು ಲಕ್ಷ ರೂಪಾಯಿ, ಸ್ವಲ್ವ ಹಾನಿಯಾದರೆ ಐವತ್ತು ಸಾವಿರದಿಂದ ಒಂದು ಲಕ್ಷ ಕೊಡುವುದಾಗಿ ಹೇಳಿದ್ದರು"
"ಆದರೆ ಮನೆ ಕಳೆದುಕೊಂಡವರಿಗೆ ಈ ವರೆಗೆ ಯಾವ ಪರಿಹಾರದ ಹಣವೂ ಸಿಕ್ಕಿಲ್ಲ, ಈ ವರ್ಷವು ಹೊಸ ಮುಖ್ಯಮಂತ್ರಿಗಳು ಉತ್ತರ ಕನ್ನಡಕ್ಕೆ ಕಾಟಾಚಾರಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ತಗೊಂಡು ಹೋಗಿದ್ದಾರೆ. ಅವರು ಸಂತ್ರಸ್ತರಿಂದ ಮಾಹಿತಿ ಪಡೆಯಬೇಕಿತ್ತು. ಅಧಿಕಾರಿಗಳು ಪೂರ್ಣ ಸತ್ಯ ಹೇಳುವುದಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಂಭ್ರಮಾಚರಣೆ ಮಾಡಿದ್ದೋ ಮಾಡಿದ್ದು!
"ಪ್ರವಾಹದ ನೀರು ಮನೆಯೊಳಗೆ ಬಂದಾಗ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಯಾಗಿರುತ್ತವೆ, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗದ್ದರೆ ಅದರಿಂದ ತುಂಬ ನಷ್ಟವಾಗಿರುತ್ತದೆ, ಇವನ್ನೆಲ್ಲ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ನೀಡಬೇಕು. ತಹಶಿಲ್ದಾರರು ಜನರ ಕಷ್ಟವನ್ನು ಖುದ್ದು ಕೇಳಿ, ಮಾನವೀಯತೆಯ ನೆಲೆಯಲ್ಲಿ ಅವರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಬೇಕು. ಈ ಸರ್ಕಾರ ಬಂದಮೇಲೆ ಒಂದೇ ಒಂದು ಹೊಸ ಮನೆಗೆ ಹಣ ನೀಡಿಲ್ಲ ಜೊತೆಗೆ ನಾವು ಮಂಜೂರು ಮಾಡಿದ್ದ ಮನೆಗಳಿಗೂ ಹಣ ನೀಡುತ್ತಿಲ್ಲ. ಮನೆಗಳ ಅರ್ಜಿಗಳನ್ನು ಲಾಕ್ ಮಾಡಿದ್ದಾರೆ. ಅನ್ನಭಾಗ್ಯದ ಅಕ್ಕಿಯನ್ನೂ ಕಡಿತ ಮಾಡಿದ್ದಾರೆ" ಎಂಬ ಗಂಭೀರ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
"ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದಕ್ಕೆ ಏನು ಸಂಭ್ರಮಾಚರಣೆ ಮಾಡಿದ್ದೋ ಮಾಡಿದ್ದು, ನನ್ನ ಪ್ರಕಾರ ಈ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದೇ ದೊಡ್ಡ ಸಾಧನೆ. ಬರೀ ಭ್ರಷ್ಟಾಚಾರ, ಅನೈತಿಕತೆ ಇಂದು ತುಂಬಿಹೋಗಿರುವ ಈ ಸರ್ಕಾರದ ವೈಫಲ್ಯದ ಬಗ್ಗೆ ನಾನು ಕಳೆದ ವಾರ ಒಂದು ಪುಸ್ತಕವನ್ನೇ ಬಿಡುಗಡೆ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
Recommended Video
ಜನರು ಮೋದಿ, ಮೋದಿ ಅಂತ ಕುಣಿದಾಡಿದ್ರು!
"ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಕೊಂಡು ಚುನಾವಣೆ ಎದುರಿಸುತ್ತಾರೆ. ಯುವ ಜನರು ಮೋದಿ, ಮೋದಿ ಅಂತ ಕುಣಿದಾಡಿದ್ರು ಆದರೆ ಅವರಿಗೆ ಮೋದಿ ನಯಾಪೈಸೆ ಉಪಕಾರ ಮಾಡಿಲ್ಲ. ಪ್ರಧಾನಿ ಮೋದಿ ಅವರೇ ಭರವಸೆ ನೀಡಿದ ಪ್ರಕಾರ ಏಳು ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು, ಆದರೆ 12 ಕೋಟಿ ಉದ್ಯೋಗ ನಷ್ಟವಾಗಿದೆ. ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎಂಬ ಅಸಂಬದ್ಧ ಸಲಹೆ ನೀಡುತ್ತಾರೆ. ಪಕೋಡ ಮಾರೋಕಾದ್ರೂ ಒಳ್ಳೆಯ ವಾತಾವರಣವಿದೆಯೇ? ಪಕೋಡ ಬೇಯಿಸೋಕೆ ಬೇಕಾದ ಗ್ಯಾಸ್ ಬೆಲೆ ಎಂಟು ನೂರು ರೂಪಾಯಿ ಆಗಿದೆ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
"ಪ್ರವಾಹ ಬಂದಾಗಲೆಲ್ಲ ನಮ್ಮ ರಾಜ್ಯದ ಜನರನ್ನು ಕಾಪಾಡಿರುವುದು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಎಲ್ಲೂ ಉದ್ಯೋಗವಿಲ್ಲದೆ ಜನ ಹಸಿವಿನಿಂದ ಬಳಲದಂತೆ ಈ ಯೋಜನೆ ಕಾಪಾಡಿದೆ" ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.