ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ: ಬಿಎಸ್ವೈ ವಿರುದ್ದ ಎಚ್ಡಿಕೆ ಕೊಂಕು
ಬೆಂಗಳೂರು, ಆ 15: ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ, ಸಂಪುಟ ರಚನೆ, ನೆರೆ ಪರಿಹಾರದ ವಿಚಾರದಲ್ಲಿ ಟೀಕೆ ಮತ್ತು ಸಲಹೆಗಳನ್ನು ನೀಡುತ್ತಿರುವ ಜಾತ್ಯಾತೀತ ಜನತಾದಳ, ಈಗ ಮತ್ತೊಂದು ವಿಚಾರಕ್ಕೆ ತಗಾದೆ ತೆಗೆದಿದೆ.
ಹತ್ತು ಕೋಟಿ ಮತ್ತು ಅದಕ್ಕಿಂತ ಹೆಚ್ಚು ನೆರೆಪರಿಹಾರಕ್ಕೆ ದೇಣಿಗೆ ನೀಡಿದರೆ, ದಾನಿಗಳ ಹೆಸರು ಅಥವಾ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಂಡ ಗ್ರಾಮಗಳಿಗೆ ಇಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು.
ಕುರುಕ್ಷೇತ್ರ ಸಿನಿಮಾ ಸಂಭಾವನೆಯನ್ನು ಪ್ರವಾಹ ಸಂತ್ರಸ್ತರಿಗೆ ನೀಡಿದ ನಿಖಿಲ್ ಕುಮಾರಸ್ವಾಮಿ
ಈ ಸಂಬಂಧ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಜೆಡಿಎಸ್, " ಹತ್ತು ಕೋಟಿ ದೇಣಿಗೆ ನೀಡಿದ ಕಂಪೆನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ @BSYBJP ನಿರ್ಧಾರ ತುಘಲಕ್ ನಿರ್ಧಾರದಂತಿದೆ.
"ನಮ್ಮ ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ" ಎಂದು ಜೆಡಿಎಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡಿದೆ. ಇದನ್ನು ಕುಮಾರಸ್ವಾಮಿ ರಿಟ್ವೀಟ್ ಮಾಡಿದ್ದಾರೆ.
ನೆರೆ ಪರಿಹಾರದ ವಿಚಾರದಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಮಾತುಕತೆ ನಡೆಸಿದ ನಂತರ, ದಾನಿಗಳ ಹೆಸರನ್ನು ಗ್ರಾಮಕ್ಕೆ ಇಡುವುದರ ಬಗ್ಗೆ ಯಡಿಯೂರಪ್ಪ ಘೋಷಿಸಿದ್ದರು.
ಯಡಿಯೂರಪ್ಪ ಕರೆದಿದ್ದ ಉದ್ಯಮಿಗಳ ಸಭೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯಲ್ಲಿ, ಎಲ್ಲರೂ ದೇಣಿಗೆ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ.