ಲಾಕ್ಡೌನ್ ಮಧ್ಯೆ ಪುತ್ರನ ವಿವಾಹ; ಭಾವುಕರಾದ ಮಾಜಿ ಸಿಎಂ ಕುಮಾರಸ್ವಾಮಿ!
ಬೆಂಗಳೂರು, ಏ. 17: ಲಾಕ್ಡೌನ್ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹವನ್ನು ಮೊದಲೆ ನಿಗದಿಯಾದಂತೆ ಮಾಡಿದ್ದಾರೆ. ತವರು ಜಿಲ್ಲೆ ರಾಮನಗರದಲ್ಲಿ ಲಕ್ಷಾಂತರ ಮಂದಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಮಾಡುವ ಭಾವನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಹೊಂದಿತ್ತು. ಆದರೆ ಕೊರೊನಾ ಮಾಹಾಮಾರಿಯ ಕಾರಣದಿಂದ ಬರಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರೇವತಿ ಅವರೊಂದಿಗೆ ನೆರವೇರಿದೆ.
ಯಾವುದೇ ತಂದೆಯಾದರೂ ಮಕ್ಕಳ ವಿವಾಹದ ಕುರಿತು ತಮ್ಮದೆ ಆದಂತಹ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಕುಮಾರಸ್ವಾಮಿ ಅವರು ಕೂಡ ರಾಮನಗರ ಹಾಗೂ ಚನ್ನಪಟ್ಟಣಗಳಿಗೆ ಹತ್ತಿರದಲ್ಲಿ ಪುತ್ರನ ವಿವಾಹ ಮಾಡಲು ನೆರವೇರಿಸಲು ನಿಗದಿ ಮಾಡಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾರ್ಯರ್ತರು ಹಾಗೂ ಅಭಿಮಾನಿಗಳನ್ನು ಆಹ್ವಾನಿಸುವುದು ಒಂದೆಡೆ ಇರಲಿ, ವಿವಾಹಕ್ಕೆ ದಯವಿಟ್ಟು ಬರಬೇಡಿ ಎಂಬಂತಹ ಮನವಿ ಮಾಡಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎದುರಿಸಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಭಾವನಾತ್ಮಕ ಮನವಿಯನ್ನು ಮಾಡಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಎಚ್ಡಿಕೆ
ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ತಮ್ಮ ಕೃತಜ್ಞತೆಗಳನ್ನು ಹೇಳಿದ್ದಾರೆ.
ನಿಖಿಲ್ ಮದುವೆಯಲ್ಲಿ ಸಾಮಾಜಿಕ ಅಂತರ, ಲಾಕ್ಡೌನ್ ನಿಯಮ ಉಲ್ಲಂಘನೆ?
ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ನೆರವೇರಿಸಲು ಕುಮಾರಸ್ವಾಮಿ ಅವರ ತೀರ್ಮಾನಿಸಿತ್ತು. ಆದರೆ ರಾಮನಗರ ಹಾಗೂ ಚನ್ನಪಟ್ಟಣಗಳಿಂದ ಜನರು ವಿವಾಹದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವಿವಾಹವನ್ನು ರಾಮನಗರದ ಸಮೀಪ ಮಾಡಲು ತೀರ್ಮಾನಿಸಿದ್ದರು. ಆದರೆ ರಾಮನಗರದ ಸಮೀಪ ಈಗ ವಿವಾಹವನ್ನು ಮಾಡಿದ್ದರು, ಅಭಿಮಾನಿಗಳು, ಕಾರ್ಯಕರ್ತರನ್ನು ಬಿಟ್ಟು ಮದುವೆ ಮಾಡಿದ್ದಕ್ಕೆ ಕುಮಾರಸ್ವಾಮಿ ಭಾವುಕ ಕೃತಜ್ಞತೆಗಳನ್ನು ಹೇಳಿದ್ದಾರೆ.
ನನ್ನ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ
ಶಾಸಕರು, ಕಾರ್ಯಕರ್ತರು, ಮುಖಂಡರು, ಕುಟುಂಬದ ಹಿತೈಷಿಗಳು ಸೇರಿದಂತೆ ನಾಡಿನ ಲಕ್ಷಾಂತರ ಜನರು, ನನ್ನ ಕುಟುಂಬದ ಕುಡಿಯ ವಿವಾಹಕ್ಕೆ ಮನೆಯಿಂದಲೇ ಹರಸಿದ್ದೀರಿ. ನಾನು ಮತ್ತು ನನ್ನ ಕುಟುಂಬ ವರ್ಗ ಮಾಡಿದ ಮನವಿಗೆ ನೀವುಗಳು ಸ್ಪಂದಿಸಿದ ರೀತಿ ಅನುಕರಣೀಯ ಮತ್ತು ಮಾದರಿ ಎಂದು ಕುಮಾರಸ್ವಾಮಿ ಮನತುಂಬಿ ಧನ್ಯವಾದ ಹೇಳಿದ್ದಾರೆ.
ಈ ಎರಡು ದಿನಗಳ ಹಿಂದೆ ಬದಲಾದ ಪರಿಸ್ಥಿತಿಯಲ್ಲಿ ಮನೆಯಿಂದಲೇ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿವಾಹಕ್ಕೆ ಹರಸುವಂತೆ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದರು.
ಮುನ್ನೆಚ್ಚರಿಕೆಯ ನಡುವೆ ಅಚ್ಚುಕಟ್ಟಾಗಿ ನಡೆದ ವಿವಾಹ
ಇಡೀ ಜಗತ್ತು ಕೊರೋನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೊದಲೇ ನಿಗದಿಯಾಗಿದ್ದ ವಿವಾಹಗಳು ಸಾಮಾಜಿಕ ಅಂತರ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮಾಡಲು ಅವಕಾಶ ಕೊಟ್ಟಿದೆ. ಹೀಗಾಗಿ ಮುನ್ನಚ್ಚರಿಕೆ ಹಾಗೂ ಅಚ್ಚುಕಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿವಾಹ ನೆರವೇರಿದೆ.
ನಿಮ್ಮ ಪ್ರೀತಿಗೆ ನಾವುಗಳು ಸದಾ ಋಣಿ
ಜಗತ್ತು ಪ್ರಸಕ್ತ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯತುಂಬಿದ ಕೃತಜ್ಞತೆಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಫೋಟೋಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿ
ಲಾಕ್ಡೌನ್ ಹಾಗೂ ಕೊರೊನಾ ಸಂಕಷ್ಟ ಕಳೆದ ಬಳಿಕ ಮತ್ತೊಮ್ಮೆ ಎಲ್ಲರೂ ಸೇರೋಣ ಎಂಬ ಆಶಯವನ್ನು ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ. ವಿವಾಹಕ್ಕೆ ಬರುವ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಜನರಿಗೆ ಉಡುಗೋರೆ ಕೂಡಲು ಕುಮಾರಸ್ವಾಮಿ ಅವರು ನಿರ್ಧಾರ ಮಾಡಿಕೊಂಡಿದ್ದರು. ಆ ಮೂಲಕ ಕ್ಷೇತ್ರಗಳ ಜನರ ಆಶೀರ್ವಾದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಇರುವಂತೆ ಮಾಡುವುದು ಎಚ್ಡಿಕೆ ಕನಸಾಗಿತ್ತು. ಮತ್ತೊಮ್ಮೆ ಎಲ್ಲರನ್ನೂ ಆಹ್ವಾನಿಸುವ ಆಶಯವನ್ನು ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ.
ಹಸಿರು ವಲಯದಲ್ಲಿದೆ ರಾಮನಗರ: ರುದ್ರೇಶ್
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿಲ್ಲ. ಹೀಗಾಗಿ ರಾಮನಗರ ಜಿಲ್ಲೆ ಹಸಿರು ವಲಯದಲ್ಲಿದೆ. ಈಗ ನಿಖಿಲ್ ಕುಮಾರಸ್ವಾಮಿ ಅವರ ವಿವಾಹಕ್ಕೆ ಬೆಂಗಳೂರಿನಿಂದ ಜನರು ಬಂದಿದ್ದಾರೆ. ಬೆಂಗಳೂರು ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಒಂದು. ಹೀಗಾಗಿ ಇನ್ನುಮುಂದೆ ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡರೆ ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರೆ ಹೊಣೆ ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಆರೋಪಿಸಿದ್ದಾರೆ. ಅದೇನೆ ಆರೋಪ-ಪ್ರತ್ಯಾರೋಗಳನ್ನು ಮಾಡಿಕೊಂಡರು ಮಾರಕ ಕೊರೊನಾ ರಾಮನಗರ ಜಿಲ್ಲೆಯಲ್ಲಿ ಕಾಣಿಸಿ ಕೊಳ್ಳದಿರಲಿ.