ಗೌಡ್ರ ಮಗ ನಾನು ಬದುಕಿದ್ದೀನಿ, ಹುಷಾರ್: ಎಚ್ಡಿಕೆ ವಾರ್ನಿಂಗ್
ಬೆಂಗಳೂರು, ಜುಲೈ 1: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ ಎನ್ನುವ ಹಾಗೇ ಮಧುಗಿರಿಯ ಮಾಜಿ ಕಾಂಗ್ರೆಸ್ ಶಾಸಕ ಕೆ. ಎನ್. ರಾಜಣ್ಣ ನೀಡಿದ ಕೀಳುಮಟ್ಟದ ಹೇಳಿಕೆಗೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅತ್ತ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡಾ ಸಿಡಿದೆದ್ದಿದ್ದಾರೆ.
"ವೇದಿಕೆಯ ಮೇಲೆ ತೊಂಬತ್ತು ವರ್ಷದವರು ಏನು ಗುಡುಗಿದರಲ್ವಾ, ಅದು ಭಗವಂತ ಅವರಿಗೆ ಕೊಟ್ಟಿರುವ ಬಳುವಳಿ. ನಿನ್ನ ಹಾಗೇ ಹಣೆಬರಹ ಬರೆದವರು ಬಹಳಷ್ಟು ಜನ ಬಂದು ಹೋಗಿದ್ದಾರೆ, ಹುಷಾರ್"ಎಂದು ಎಚ್ . ಡಿ. ಕುಮಾರಸ್ವಾಮಿ ಹೇಳಿದರು.
ದೇವೇಗೌಡರು 4 ಜನರ ಹೆಗಲ ಮೇಲೆ ಹೋಗುವ ಕಾಲ ಹತ್ತಿರವಿದೆ: ರಾಜಣ್ಣ ವಿವಾದಾತ್ಮಕ ಹೇಳಿಕೆ
ಇನ್ನೊಂದು ಕಡೆ ಹಾಸನದಲ್ಲಿ ಮಾತನಾಡುತ್ತಿದ್ದ ಪ್ರಜ್ವಲ್ ರೇವಣ್ಣ, "ಅವನು ದೇವೇಗೌಡರ ಪಾದದ ದೂಳಿಗೂ ಸಮನಲ್ಲದವನು, ಇದೇ ರೀತಿ ಹುಚ್ಚಾಟದ ಹೇಳಿಕೆಯನ್ನು ನೀಡಿದರೆ ಹಾದಿಬೀದಿಯಲ್ಲಿ ಜನರು ನಿನ್ನನ್ನು ಹುಚ್ಚುನಾಯಿಗೆ ಹೊಡೆದಂತೆ ಹೊಡೆಯುತ್ತಾರೆ, ಎಚ್ಚರ"ಎಂದು ಗುಡುಗಿದರು.
"ದೇವೇಗೌಡರ ಬಗ್ಗೆ ವಿಕೃತವಾಗಿ ಮಾತನಾಡಿರುವ ರಾಜಣ್ಣ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ದುರಹಂಕಾರದ ಮಾತುಗಳಿಗೆ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ"ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೆ.ಎನ್.ರಾಜಣ್ಣ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೆ. ಎನ್. ರಾಜಣ್ಣ, " ದೇವೇಗೌಡ ಮೂಗರ್ಜಿ ಗಿರಾಕಿ, ಹಲವರ ಬಗ್ಗೆ ಮೂಗರ್ಜಿ ಬರೆದಿದ್ದಾರೆ. ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ" ಎಂದು ಕೆ.ಎನ್.ರಾಜಣ್ಣ ಹೇಳಿದ್ದರು. ಇವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಅವನು ಅದಕ್ಕೆ ನಾಲಾಯಕ್ ಎಂದ ಪ್ರಜ್ವಲ್ ರೇವಣ್ಣ
"ಕೆ. ಎನ್. ರಾಜಣ್ಣನಂತವರ ಹುಚ್ಚಾಟದ ಮಾತಿಗೆ ಪ್ರತಿಕ್ರಿಯೆ ನೀಡಬೇಕಾಗಿಲ್ಲ, ಅವನ ಈ ರೀತಿಯ ಹುಚ್ಚಾಟಕ್ಕೆ ಜನರು ಅವನನ್ನು ಮನೆಯಲ್ಲಿ ಕೂರಿಸಿರುವುದು. ಅವನೊಬ್ಬ ದೊಡ್ಡ ಕಳ್ಳ ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಿದೆ. ರಾಜಕೀಯದಲ್ಲಿ ಇರುವವರಿಗೆ ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. ನಾವೆಲ್ಲಾ ಸಾರ್ವಜನಿಕ ಜೀವನದಲ್ಲಿ ಇರುವವರು, ಅವನು ಅದಕ್ಕೆ ನಾಲಾಯಕ್"ಎಂದು ಪ್ರಜ್ವಲ್ ರೇವಣ್ಣ ಕಿಡಿಕಾರಿದರು.
ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು
"ಕಳೆದ 2004ರಲ್ಲಿ ರಾಜಣ್ಣ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು. ದೇವೇಗೌಡರು ಅಂದು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ತೆರಳಿ ಪ್ರಚಾರ ಮಾಡಿದ್ದರು. ಇಬ್ಬರು ದೇವೇಗೌಡರ ಹೆಗಲಿಗೆ ಹೆಗಲು ಕೊಡುತ್ತಾರೆ, ನಿಜ. ರಾಜಣ್ಣನವರಿಗೆ ಅರಿವಿದ್ದಂತೆ ಇಲ್ಲ" ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ: ಕುಮಾರಸ್ವಾಮಿ
"ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ನಾನು ಉತ್ತರ ಕೊಡುವುದಲ್ಲಾ, ಅಲ್ಲಿನ ಜನರಿಂದಲೇ ಉತ್ತರ ಕೊಡಿಸುತ್ತೇನೆ. ರಾಜಣ್ಣನ ಮಾತಿನ ದುರಹಂಕಾರ ಕೇಳಿದ್ದೇನೆ. ಆತ ಬ್ರಹ್ಮನಲ್ಲ, ಆತನೂ ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ ಎಂಬ ನಂಬಿಕೆ ನನ್ನದು"ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
Recommended Video