ಬಿಎಸ್ವೈ ಬರ್ತ್ ಡೇ ದಿನ ಸುಮ್ಮನಿದ್ದ ಎಚ್ಡಿಕೆ ಮರುದಿನವೇ ತಿರುಗಿಬಿದ್ದರು!
ಬೆಂಗಳೂರು, ಫೆ 28: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟಿದ ಹಬ್ಬದ ದಿನ ಮನಃಪೂರ್ವಕವಾಗಿ ಅವರಿಗೆ ಶುಭ ಕೋರಿದ್ದ ಎಚ್.ಡಿ.ಕುಮಾರಸ್ವಾಮಿ, ಮರುದಿನವೇ , ಬಿಜೆಪಿ ಸರಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬಿಜೆಪಿ ಸರಕಾರ 'ರೈತ ವಿರೋಧಿ' ಎಂದು ಜರಿದಿದ್ದಾರೆ. ನಾನು ರೈತರ ಪರವಾಗಿ ನಿಲ್ಲುತ್ತೇನೆ ಎನ್ನುವ ಅಭಯವನ್ನು ನೀಡಿದ್ದಾರೆ.
ನಿಖಿಲ್ ಮದುವೆ ಜವಾಬ್ದಾರಿಯನ್ನು ಕಾರ್ಯಕರ್ತರಿಗೇ ವಹಿಸಿದ ಎಚ್ಡಿಕೆ
ಕುಮಾರಸ್ವಾಮಿ ಮಾಡಿರುವ ಟ್ವೀಟ್, "ರೈತರ ಸಾಲ ಮನ್ನಾ ಯೋಜನೆಗೆ ತಿಲಾಂಜಲಿ ಇಡಲು ಬಿಜೆಪಿ ಸರ್ಕಾರ ಅಡ್ಡ ದಾರಿ ತುಳಿಯುತ್ತಿರುವುದು ಖಂಡನೀಯ. ರೈತರ ಬಾಳಿಗೆ ರಾಜ್ಯ ಬಿಜೆಪಿ ಸರ್ಕಾರ ಕೊಳ್ಳಿ ಇಡಲು ಮುಂದಾಗಿದೆ. ದಾಖಲೆಗಳ ನೆಪವೊಡ್ಡಿ ಸಾಲ ಮನ್ನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರನ್ನು ಕೈ ಬಿಡುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದೋಖಾ ಮಾಡುತ್ತಿದೆ." - ಎಚ್ಡಿಕೆ ಮೊದಲ ಟ್ವೀಟ್.
"ಸಾಲ ಮನ್ನಾದ ಬಗ್ಗೆ ಬಿಜೆಪಿಯ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮೀಸಲಿಟ್ಟಿದ್ದ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದಲೂ ರಾಜ್ಯದ ಒಂದು ಲಕ್ಷದ ಐವತ್ತ್ಮೂರು ಸಾವಿರ ರೈತರಿಗೆ ವಂಚಿಸಲಾಗಿದೆ." ಇದು ಕುಮಾರಣ್ಣ ಮಾಡಿದ ಎರಡನೇ ಟ್ವೀಟ್.
"ಸಾಲ ಮನ್ನಾ ಬಗ್ಗೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. ರೈತರ ಪರವಾಗಿ ನಿಲ್ಲುತ್ತೇನೆ." ಇದು ಕುಮಾರಸ್ವಾಮಿ ಮಾಡಿರುವ ಮೂರನೇ ಟ್ವೀಟ್.
ಬಿಜೆಪಿ ಶಾಸಕ ಯತ್ನಾಳ್, ದೊರೆಸ್ವಾಮಿಯವರನ್ನು ಟೀಕಿಸಿದಾಗ ಟ್ವೀಟ್ ಮೂಲಕ ಕಿಡಿಕಾರಿದ್ದ ಕುಮಾರಸ್ವಾಮಿ, ಟ್ರಂಪ್ ಭೇಟಿಯ ವಿಚಾರದಲ್ಲೂ ಕೇಂದ್ರ ಸರಕಾರವನ್ನು ಲೇವಡಿ ಮಾಡಿದ್ದರು.