ಗಣರಾಜ್ಯೋತ್ಸವದಂದು ಕಾಂಗ್ರೆಸ್ಸಿಗೆ ಕ್ಲಿಯರ್ ಕಟ್ ಹೊಸ ಸಂದೇಶ ರವಾನಿಸಿದ ಕುಮಾರಸ್ವಾಮಿ
ಬೆಂಗಳೂರು, ಜ 26: 2023ರ ಅಸೆಂಬ್ಲಿ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ವರಸೆಯನ್ನು ಗಣರಾಜ್ಯೋತ್ಸವದ ದಿನದಂದು ಬದಲಾಯಿಸಿದ್ದಾರೆ.
ನಗರದ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಕುಮಾರಸ್ವಾಮಿ, ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಮಾಜಿ ಎಂಎಲ್ಸಿ ಶರವಣ, ಆರ್.ಪ್ರಕಾಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಬಿಜೆಪಿ, ಕಾಂಗ್ರೆಸ್ಸಿನ ಪಕ್ಷಾಂತರ ಎನ್ನುವ ಸೂತ್ರವಿಲ್ಲದ ಗಾಳಿಪಟ
"ಜೆಡಿಎಸ್ ಹಾಗೂ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರು ಸೇರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜೊತೆಗೆ, ಜೆಡಿಎಸ್ ಪಕ್ಷ ಬಾಲಂಗೋಚಿ ಹಾಗೂ ತುಮಕೂರಿನಿಂದ ಓಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದನ್ನೂ ಗಮನಿಸಿದ್ದೇನೆ. ಇಲ್ಲಿ ಯಾರು ಬಾಲಂಗೋಚಿಗಳು"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
"ಯಾರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬ ಪಟ್ಟಿ ನನ್ನ ಬಳಿಯಿದೆ. ಕಾಂಗ್ರೆಸ್ ನಾಯಕರನ್ನು ಪಕ್ಕಕ್ಕೆ ಸರಿಸಿ ಅವರು ಲೈಮ್ ಲೈಟ್ ನಲ್ಲಿಲ್ಲವಾ"ಎಂದು ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ನಮ್ಮ ನೆರವಿಲ್ಲದೇ ಮುಂದೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಸ್ವಯಂ ಘೋಷಿತ ಸಂವಿಧಾನ ಪಂಡಿತನಿಗೆ ಎಚ್ಡಿಕೆ ಟ್ವೀಟ್ ಬಾಣ!
ಜೆಡಿಎಸ್ ಪಕ್ಷದಲ್ಲಿ ನಾನಿದ್ದಾಗ 50 ಸೀಟ್ ಗೆದ್ದಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ
"ಜೆಡಿಎಸ್ ಪಕ್ಷದಲ್ಲಿ ನಾನಿದ್ದಾಗ 50 ಸೀಟ್ ಗೆದ್ದಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆಗ ನಾವು ಬ್ಯಾನರ್ ಕಟ್ಟಿ ಪಕ್ಷ ಸಂಘಟನೆ ಮಾಡಿ, ಹಿಂದೆ ನಿಲ್ಲುತ್ತಿದ್ದೆವು. ಸಿದ್ದರಾಮಯ್ಯ ಮಾತ್ರ ಈಗ ಕಾಂಗ್ರೆಸ್ ನಲ್ಲಿರುವಂತೆ ಲೈಮ್ ಲೈಟಿನಲ್ಲಿದ್ದರು. ನಾವೆಲ್ಲ ಹಣ ಖರ್ಚು ಮಾಡಿ, ಬ್ಯಾನರ್ ಕಟ್ಟಿದ್ದಕ್ಕೆ ಅಷ್ಟು ಸೀಟನ್ನು ಜೆಡಿಎಸ್ ಗೆದ್ದಿತ್ತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಯಡಿಯೂರಪ್ಪ ಅವರನ್ನು ಯಾರ ಮೂಲಕ ಸಿದ್ದರಾಮಯ್ಯ ಸಂಪರ್ಕಿಸಿದ್ದರು ಎಂಬುದು ಗೊತ್ತಿದೆ. ಆದರೆ ಅವರು ಅದಕ್ಕೆ ಉತ್ತರವನ್ನು ಕೊಟ್ಟಿಲ್ಲ" ಎಂದು ಕುಮಾರಸ್ವಾಮಿ ಹೇಳುವ ಮೂಲಕ ಮತ್ತೆ ಸಿದ್ದರಾಮಯ್ಯನವರನ್ನು ಕುಟುಕಿದರು.
ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿ ತೊರೆದು ಸೋಲು
"ನಮ್ಮ ಪಕ್ಷದಿಂದ ಯಾರು ಹೋಗುತ್ತಾರೆ ಎಂಬುದು ಗೊತ್ತಿದೆ, ನಮಗೆ ಅದರಿಂದ ಆತಂಕವೇನೂ ಇಲ್ಲ. ನಾವು ಅಲ್ಪ ಸ್ವಲ್ಪ ರಾಜಕೀಯ ವಿಶ್ಲೇಷಣೆ ಮಾಡುತ್ತೇವೆ. 2005ರಲ್ಲಿ ಪಾಂಚಜನ್ಯ ಮೊಳಗಿಸಿದ್ದರೂ ಕಾಂಗ್ರೆಸ್ ಸೋತಿದ್ಯಾಕೆ? 2013ರಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿ ತೊರೆದು ಸೋತಿದ್ದಕ್ಕೆ ಜೆಡಿಎಸ್ ಹೋರಾಟ ಕಾರಣ. 2013ರಲ್ಲಿ ಬಿಜೆಪಿ ಸೋಲಿಸಲು ಸಿದ್ದರಾಮಯ್ಯ ಕಾರಣ ಅಲ್ಲ, ಅದಕ್ಕೆ ಜೆಡಿಎಸ್ ಹೋರಾಟ ಕಾರಣ. 2013ರಲ್ಲಿ ಗೆದ್ದಿದ್ದ ಸಿದ್ದರಾಮಯ್ಯ 2018ರಲ್ಲಿ ಕೇವಲ 78 ಸ್ಥಾನಗಳಿಗೆ ಕುಸಿದಿದ್ದು ಯಾಕೆ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕಾಂಗ್ರೆಸ್ ಮುಗಿಸಲು ಏನು ಮಾಡಿದರು ಅನ್ನುವುದು ಗೊತ್ತಿದೆ
"ಕಾಂಗ್ರೆಸ್ ಮುಗಿಸಲು ಏನು ಮಾಡಿದರು ಅನ್ನುವುದು ಗೊತ್ತಿದೆ. ಅದಕ್ಕೆ ಟ್ವೀಟ್ ನಲ್ಲಿ ಸುಳ್ಳುರಾಮಯ್ಯ ಅಂದಿದ್ದು, 2008ರ ಚುನಾವಣೆಯಲ್ಲಿ ಏನಾಯಿತು, ಕಾಂಗ್ರೆಸ್ ಮುಖಂಡರನ್ನು ಮುಗಿಸಲು ಏನು ಮಾಡಿದರು.
ಎಷ್ಟು ದುಡ್ಡು ತಂದಿದ್ದೀರಾ? ಸತ್ಯ ಹೇಳಿ ಜನರ ಮುಂದೆ. ಅರ್ಕಾವತಿ ಕರ್ಮಕಾಂಡ ಇದೆಯಲ್ವಾ, ಇಂದಿನ ಭ್ರಷ್ಟಾಚಾರಕ್ಕೆ ಸರಿಸಮಾನವಲ್ಲ. ಅವರನ್ನು ನೋಡಿದರೆ ಭಯವಂತೆ ಪಾಪ ಅವರು ಹೇಳಿದ್ದಾರೆ. ಜನರಿಗೆ ಭಯ ಬೀಳುತ್ತೇವೆ, ಇವರಿಗಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮಾಜಿ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದರು.2023ರ ಚುನಾವಣೆಯಲ್ಲಿ ನಾವೇ ಕಿಂಗ್ ಮೇಕರ್
"2013 ರಲ್ಲಿ ನಾವು ಹೋರಾಟ ಮಾಡಿದ್ದೆವು. ನಮ್ಮಹೋರಾಟದಿಂದ ನೀವು ಅಧಿಕಾರಕ್ಕೆ ಬಂದಿದ್ದು, ಐದು ವರ್ಷ ಅಧಿಕಾರ ಮಾಡಿ ಯಾಕೆ 78ಕ್ಕೆ ಕೆಳಕ್ಕೆ ಬಿದ್ದಿರಿ. ಈಗ ಶಕ್ತಿ ವೃದ್ಧಿ ಮಾಡಿಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ.
ಜೆಡಿಎಸ್ ಬಗ್ಗೆ ನೀವು ಮಾತನಾಡ ಬೇಡಿ, 2023ಕ್ಕೆ ಜೆಡಿಎಸ್ ಬಿಟ್ಟು ನೀವೇನು ಮಾಡಲಾಗುವುದಿಲ್ಲ" ಎಂದು ಕುಮಾರಸ್ವಾಮಿ ಹೇಳುವ ಮೂಲಕ 2023ರ ಚುನಾವಣೆಯಲ್ಲಿ ನಾವೇ ಕಿಂಗ್ ಮೇಕರ್ ಎಂದು ಪರೋಕ್ಷವಾಗಿ ಹೇಳಿದರು.